ನವದೆಹಲಿಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಅಬ್ಬರಿಸಿದೆ. ಈ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಇದೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಕವರ್ನಲ್ಲಿ ಕ್ಷೇತ್ರ ರಕ್ಷಣೆ ಮಾಡುವಾಗ ಫಾಫ್ ಡುಪ್ಲೇಸಿಸ್ ಬಾರಿಸಿದ ಚೆಂಡನ್ನು ತಡೆಯಲು ಮುಂದಾದಾಗ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಆ ಬಳಿಕ ಅವರು ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಸುನಿಲ್ ನರೈನ್ ತಂಡವನ್ನು ಮುನ್ನಡೆಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 14 ರನ್ ಜಯ ದಾಖಲಿಸಿತು. ಆಗ ಈ ಖುಷಿಯ ವಿಚಾರದ ಮಧ್ಯೆ ಕೆಕೆಆರ್ ಅಭಿಮಾನಿಗಳ ಮನದಲ್ಲಿ ಆತಂಕ ಸಹ ಕಾಡುತ್ತಿತ್ತು. ಅಜಿಂಕ್ಯ ರಹಾನೆ ಫಿಟ್ ಆಗಿದ್ದಾರೆ. ಅವರ ಗಾಯ ಹೇಗಿದೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಪಂದ್ಯದ ಬಳಿಕ ಅನುಕುಲ್ ರಾಯ್ ಈ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿರುವ ಅನುಕುಲ್, ಕೆಕೆಆರ್ ಕ್ಯಾಪ್ಟನ್ ಚೇತರಿಕೆಗೆ ಇನ್ನು ದಿನಗಳ ಬೇಕಾಗಬಹುದು. ಆದರೆ ಒಂದು ಸಮಾಧಾನದ ಸಂಗತಿ ಎಂದರೆ ರಹಾನೆ ಅವರ ಗಾಯ ಗಂಭೀರವಾಗಿಲ್ಲ ಎಂದು ತಿಳಿಸಿದ್ದಾರೆ. ರಹಾನೆ ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಇದೇ ವೇಳಿ ಅನುಕುಲ್ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರು ಗಾಯದ ಕಾರಣದಿಂದ ಮೈದಾನ ತೊರೆದಾಗ ಸುನಿಲ್ ನರೈನ್ ತಂಡವನ್ನು ಮುನ್ನಡೆಸಿದರು. ಅಲ್ಲದೆ ತಂಡ ಅರ್ಹ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

ರಹಾನೆ ಅವರ ಗಾಯ ಗಂಭೀರವಾಗಿಲ್ಲ. ಆದರೆ ಅವರಿಗೆ ಚೇತರಿಸಿಕೊಳ್ಳಲು ಎರಡರಿಂದ ಮೂರು ದಿನ ಬೇಕಾಗಬಹುದು. ಇವರ ಗಾಯದ ಗಂಭೀರತೆಯ ಬಗ್ಗೆ ವೈದ್ಯರು ಮಾತ್ರ ನಿಖರ ಮಾಹಿತಿ ನೀಡಬಹುದು. ರಹಾನೆ ಅವರ ಕೈಗೆ ಹೊಲಿಗೆ ಹಾಕಲಾಗಿದೆ. ಇವರ ಗಾಯವನ್ನು ವೈದ್ಯಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅನುಕುಲ್ ತಿಳಿಸಿದ್ದಾರೆ. ಕೆಕೆಆರ್ ತನ್ನ ಮುಂದಿನ ಪಂದ್ಯವನ್ನು ಮೇ 4 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯಕ್ಕೆ ರಹಾನೆ ಫಿಟ್ ಆಗುತ್ತಾರಾ ಇಲ್ಲವೋ ಎಂಬ ಪ್ರಶ್ನೆ ಉದ್ಭವಿಸಿದೆ.
ಕೆಕೆಆರ್ ಪ್ಲೇ ಆಫ್ ಹಂತವನ್ನು ತಲುಪಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಸದ್ಯ ತಂಡ ಆಡಿರುವ 10 ಪಂದ್ಯಗಳಿಂದ 9 ಅಂಕ ಕಲೆ ಹಾಕಿದ್ದು ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದೆ. ಇನ್ನು ನಾಲ್ಕು ಪಂದ್ಯಗಳಲ್ಲಿ ಕೆಕೆಆರ್ ಕನಿಷ್ಠ ಮೂರು ಪಂದ್ಯಗಳಲ್ಲಾದ್ರೂ ಗೆಲುವು ದಾಖಲಿಸುವುದು ಅನಿವಾರ್ಯ. ಅಂದಾಗ ಮಾತ್ರ ಪ್ಲೇ ಆಫ್ ಆಸೆ ಜೀವಂತವಾಗಿರುತ್ತದೆ. ಈ ವೇಳೆ ತಂಡ ಸಂಘಟಿತ ಆಟದ ಪ್ರದರ್ಶನವನ್ನು ನೀಡಬೇಕಾಗುತ್ತದೆ. ಲಯದಲ್ಲಿರುವ ರಹಾನೆ ಗಾಯದ ಕಾರಣದಿಂದ ಮೈದಾನದಿಂದ ಹೊರಗೆ ನಡೆದರೆ ಇದು ನಿಜಕ್ಕೂ ತಂಡಕ್ಕೆ ದೊಡ್ಡ ಪೆಟ್ಟ ನೀಡಲಿದೆ.