ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆಗೆ ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ಹೊಸ ನಾಯಕನ ಹುಡುಕಾಟ ಆರಂಭಿಸಿದ್ದಾರೆ. ಈ ಹಿಂದೆ ಜಸ್ಪ್ರೀತ್ ಬುಮ್ರಾ ತಂಡದ ಭವಿಷ್ಯದ ನಾಯಕ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅವರಿಗೆ ಎಲ್ಲರಿಂದ ಒಮ್ಮತ ಸಿಕ್ಕಿಲ್ಲ.
ಶನಿವಾರ ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಚರ್ಚಿಸಲಾದ ಹಲವು ವಿಷಯಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಭವಿಷ್ಯದ ಭಾರತೀಯ ನಾಯಕತ್ವವು ಒಂದು. ಆದರೆ, ಈ ವೇಳೆ ಬಿಸಿಸಿಐ ತನ್ನ ಉತ್ತರಾಧಿಕಾರಿಯನ್ನು ನೇಮಿಸುವವರೆಗೆ ನಾಯಕನಾಗಿರುತ್ತೇನೆ ಎಂದು ರೋಹಿತ್ ಶರ್ಮಾ ಆಯ್ಕೆದಾರರಿಗೆ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ರೋಹಿತ್ ಬದಲಿಗೆ ಬೇರೆ ಆಟಗಾರನ್ನು ಆಯ್ಕೆ ಮಾಡಿದೆ. ಆದರೆ ಅವರ ನಡುವೆ ಭಿನ್ನಾಭಿಪ್ರಾಯಗಳಿವೆ, ಆದ್ದರಿಂದ ಅವರು ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರನ್ನು ಮುಂದಿನ ನಾಯಕನನ್ನಾಗಿ ಮಾಡಲು ಆಯ್ಕೆಗಾರರು ನಿರ್ಧರಿಸಿದಾಗ, ಗೌತಮ್ ಗಂಭೀರ್ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಬೆಂಬಲಿಸಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ದೆಹಲಿ ತಂಡವನ್ನು ಮುನ್ನಡೆಸುತ್ತಿರುವ ರಿಷಬ್ ಪಂತ್, ಜೂನ್ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆ ಸರಣಿಗೆ ನೇಮಕಗೊಂಡ ನಾಯಕ ಕೆಎಲ್ ರಾಹುಲ್ ಗಾಯದ ಕಾರಣ ಸ್ಪರ್ಧೆಯಿಂದ ಹೊರಗುಳಿದಿದ್ದರು. ಮತ್ತೊಂದೆಡೆ ಯುವ ಭರವಸೆ ಆಟಗಾರ ಯಶಸ್ವಿ ಜೈಸ್ವಾಲ್ ಇನ್ನೂ ಯಾವುದೇ ನಾಯಕತ್ವದ ಅನುಭವವನ್ನು ಹೊಂದಿಲ್ಲ. ಹೀಗಾಗಿ ಆಯ್ಕೆದಾರರು ಮತ್ತು ಹೆಡ್ ಕೋಚ್ ನಡುವೆ ಯಾರ ಹೆಸರಿನಲ್ಲಿ ಒಮ್ಮತ ಮೂಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಟಿ20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಅವರು ಚುಟುಕು ಕ್ರಿಕೆಟ್ಯಿಂದ ನಿವೃತ್ತರಾದರು. ಇದಾದ ಬಳಿಕ ಕಳೆದ ವರ್ಷ ಜುಲೈನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಯಶಸ್ಸು ಕಂಡಿದ್ದಾರೆ. ಆದರೆ, ಏಕದಿನ ತಂಡದಲ್ಲಿ ಅವರ ಸ್ಥಾನ ಇನ್ನೂ ಖಚಿತವಾಗಿಲ್ಲ. ಈ ಕಾರಣದಿಂದ 50 ಓವರ್ಗಳ ಕ್ರಿಕೆಟ್ನಲ್ಲಿ ಅವರು ನಾಯಕರಾಗುವುದು ಕಷ್ಟ. ಆಯ್ಕೆದಾರರು ಬುಮ್ರಾ ಅವರನ್ನು ಏಕದಿನ ನಾಯಕನನ್ನಾಗಿ ಮಾಡಲು ಬಯಸಿದ್ದಾರೆ. ಇದಲ್ಲದೇ ಬುಮ್ರಾಗೆ ವಿಶ್ರಾಂತಿ ನೀಡಿದರೆ ನಾಯಕತ್ವ ವಹಿಸಿಕೊಳ್ಳಬಹುದಾದ ಉಪನಾಯಕನನ್ನು ಬಿಸಿಸಿಐ ನೇಮಿಸಲಿದೆ.