ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಆಶ್ರಯದಲ್ಲಿ ಚಾಂಪಿಯನ್ಸ್ ಟ್ರೋಫಿಯ ನಡೆಯುತ್ತದೆ. ಈ ಟೂರ್ನಿಗೆ ಆಯ್ಕೆ ಆಗಿರುವ ತಂಡಗಳು ಈಗಾಗಲೇ ತನ್ನ ತಂಡವನ್ನು ಪ್ರಕಟಿಸಿವೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಭಾರತ ಸಹ ಈ ಟೂರ್ನಿಗೆ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಉಳಿದಂತೆ ಎಲ್ಲ ತಂಡಗಳೂ ಸಹ ಟೂರ್ನಿಗೆ ತಮ್ಮ ತಮ್ಮ ತಂಡವನ್ನು ಪ್ರಕಟಿಸಿವೆ. ಇನ್ನು ಬೇಕಿದ್ದರೆ ಈ ತಂಡದಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಕೊನೆಯ ಅವಕಾಶವನ್ನು ಐಸಿಸಿ ನೀಡಿದೆ.
ಭಾರತದಲ್ಲಿ ಸದ್ಯ ಟಿ20 ಸರಣಿಗಳು ನಡೆಯುತ್ತಿವೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ, ಇನ್ನು ಒಂದು ಬಾಕಿ ಇರುವಂತೆಯೇ ಐದು ಪಂದ್ಯಗಳ ಸರಣಿಯನ್ನು ಗೆದ್ದು ಬೀಗಿದೆ. ಈ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಟ ಆಡಿದರೆ, ಭರವಸೆಯ ಆಟಗಾರರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ನೀಡುತ್ತಿರುವ ಪ್ರದರ್ಶನವನ್ನು ಗಮನಿಸಿ ಅಭಿಮಾನಿಗಳು ಟೀಮ್ ಇಂಡಿಯಾದಲ್ಲಿ ಬದಲಾವಣೆ ಅವಶ್ಯಕ ಎಂದು ತಿಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿತ ತಂಡವನ್ನು ದೇಶಗಳು ಮಾರ್ಪಾಡು ಮಾಡಲು ಬಯಸಿದ್ದರೆ ಫೆಬ್ರವರಿ 11ರ ವರೆಗೆ ಅವಕಾಶ ಇದೆ. ಈ ವೇಳೆಯಲ್ಲಿ ಆಟಗಾರರು ತಮ್ಮ ಬದಲಿ ಆಟಗಾರರು ಐಸಿಸಿಗೆ ಸೂಚಿಸಬಹುದಾಗಿದೆ.
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿರುವ ಅಕ್ಷರ್ ಪಟೇಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗುತ್ತಿಲ್ಲ. ಹೀಗಾಗಿ ಇವರ ಬದಲಿಗೆ ಇಂಗ್ಲೆಂಡ್ ಬ್ಯಾಟರ್ಗಳನ್ನು ಟಿ20 ಸರಣಿಯಲ್ಲಿ ಬಹುವಾಗಿ ಕಾಡಿದ ಬೌಲರ್ ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ನೀಡುವಂತೆ ಅಭಿಮಾನಿಗಳು ತಿಳಿಸಿದ್ದಾರೆ. ಅಲ್ಲದೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ನಾಲ್ಕು ಸ್ಪಿನ್ ಬೌಲರ್ಗಳಲ್ಲಿ ಮೂವರು ಎಡಗೈ ಸ್ಪಿನ್ ಬೌಲರ್ಗಳು ಆಗಿದ್ದು, ವರುಣ್ ತಂಡಕ್ಕೆ ಎಂಟ್ರಿ ನೀಡಿದರೆ, ಇನ್ನಷ್ಟು ತಂಡ ಬಲಾಢ್ಯವಾಗಬಹುದು ಎಂಬ ನಂಬಿಕೆ ಅಭಿಮಾನಿಗಳದ್ದಾಗಿದೆ.

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರ ಗಾಯದ ಬಗ್ಗೆ ಇನ್ನು ಯಾವುದೇ ಅಪ್ಡೇಟ್ ಸಿಗುತ್ತಿಲ್ಲ. ಹೀಗಾಗಿ ಇವರು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆಯೂ ಸಹ ಅನುಮಾನ ಮೂಡಿದೆ. ಒಂದು ವೇಳೆ ಬುಮ್ರಾ ಫಿಟ್ ಆಗದೇ ಇದಲ್ಲಿ ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡಿದರೆ ಬೆಸ್ಟ್. ಪುಣೆಯಲ್ಲಿ ನಡೆದ ಟಿ20 ಪಂದ್ಯದಲ್ಲಿ ಇವರು ಚುಟುಕು ಫಾರ್ಮೆಟ್ಗೆ ಪದಾರ್ಪಣೆ ಮಾಡಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಹರ್ಷಿತ್ ಇಂಗ್ಲೆಂಡ್ ಬ್ಯಾಟರ್ಗಳನ್ನು ಬಹುವಾಗಿ ಕಾಡಿದರು. ಟಿ20 ಕ್ರಿಕೆಟ್ನಲ್ಲಿ ತಾವು ಎಸೆದ ಎರಡನೇ ಎಸೆತದಲ್ಲಿ ವಿಕೆಟ್ ಪಡೆದ ಹರ್ಷಿತ್ ಅಬ್ಬರಿಸಿದರು. ಇವರ ಪ್ರದರ್ಶನವನ್ನು ನೋಡಿದರೆ ಇವರು ದುಬೈ ಪಿಚ್ಗಳಲ್ಲಿ ತಂಡದ ಗೆಲುವಿನಲ್ಲಿ ಮಿಂಚಬಹುದು ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ.