ಐಪಿಎಲ್ ಮೆಗಾ ಹರಾಜಿಗೆ ತೆರೆ ಮರೆಯ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಅಳೆದು ತೂಗಿ ಯಾವ ಪ್ಲೇಯರ್ಗೆ ಟಾರ್ಗೆಟ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ಆಟಗಾರರ ಅದೃಷ್ಟ ಪರೀಕ್ಷೆ ನಡೆಯಲಿದೆ.
ಆರ್ಸಿಬಿ ಕಳೆದ ಬಾರಿ ಸ್ಥಿರ ಪ್ರದರ್ಶನ ನೀಡಿ ಭರವಸೆಯನ್ನು ಮೂಡಿಸಿದ್ದ ಆಟಗಾರರಿಗೆ ಮಣೆ ಹಾಕಿದೆ. ಆರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ ಸಹ ಆರ್ಸಿಬಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.

ಇನ್ನು ತಂಡದಲ್ಲಿ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಮಿಡ್ಲ್ ಆರ್ಡರ್ ಬ್ಯಾಟರ್ ರಜತ್ ಪಟಿದಾರ್ ಸೇರಿದಂತೆ, ಯಶ್ ದಯಾಳ್ ಅವರನ್ನು ಉಳಿಸಿಕೊಳ್ಳಲಾಗಿದೆ. ಆರ್ಸಿಬಿ ಇನ್ನು 22 ಸ್ಥಾನಗಳಿಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರ ಹುಡುಕಾಟ ನಡೆಸಲಿದೆ.
ಆರ್ಸಿಬಿ ಕಳೆದ ಕೆಲವು ವರ್ಷಗಳಿಂದ ತವರಿನ ಆಟಗಾರರಿಗೆ ಕಡೆಗಣನೆ ಮಾಡುತ್ತದೆ ಎಂಬ ಒಂದು ಮಾತು ಇತ್ತು. ಆದರೆ ತನ್ನ ಮೇಲೆ ಇದ್ದ ಕಪ್ಪು ಚುಕ್ಕೆಯನ್ನು ಆರ್ಸಿಬಿ ಕಳಚಬೇಕಿದೆ. ಈ ಬಾರಿ ಆರ್ಸಿಬಿ ಮೆಗಾ ಹರಾಜಿನಲ್ಲಿ ಕನ್ನಡಿಗ ಆಟಗಾರರ ಹೆಸರುಗಳು ಬಂದಾಗ ಬಾಜಿ ಕಟ್ಟಬೇಕಿದೆ. ಅಂದಾಗ ಮಾತ್ರ ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ.

ಆರ್ಸಿಬಿ ನಾಯಕನ ಹುಡುಕಾಟ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಮಣೆ ಹಾಕಬೇಕಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹರಾಜು ಅಂಗಳ ಪ್ರವೇಶಿಸಿರುವ ರಾಹುಲ್ ಆರ್ಸಿಬಿ ಬೆಸ್ಟ್ ಪ್ಲೇಯರ್. ಇವರು ನಾಯಕ, ವಿಕೆಟ್ ಕೀಪರ್ ಹಾಗೂ ಆರಂಭಿಕನಾಗಿ ಆಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರಿಗೆ ಆರ್ಸಿಬಿ ಬಾಜಿ ಕಟ್ಟಿ ತನ್ನ ತಂಡಕ್ಕೆ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಆರ್ಸಿಬಿ ತಂಡ ಹುಡುಕುತ್ತಿರುವ ವೇಗದ ಬೌಲರ್ಗಳು ಕರ್ನಾಟಕದಲ್ಲೂ ಇದ್ದಾರೆ. ಈಗಾಗಲೇ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದ ಬೌಲರ್ಗಳಿಗೆ ಆರ್ಸಿಬಿ ಮಣೆ ಹಾಕಬೇಕಿದೆ. ಈಗ ಕರ್ನಾಟಕ ರಣಜಿ ತಂಡದ ಪರ ಆಡುವ ವಾಸುಕಿ ಕೌಶಿಕ್, ವಿಜಯ್ ಕುಮಾರ್ ವೈಶಾಖ್, ಪ್ರಸಿದ್ಧ ಕೃಷ್ಣ, ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿ ಬ್ಯಾಟರ್ಗಳಿಗೆ ಕಾಡಬಲ್ಲರು.

ಬೆಂಗಳೂರು ತಂಡ ಹುಡುಕುತ್ತಿರುವ ಸ್ಪಿನ್ ಬೌಲರ್ ಕರ್ನಾಟಕದಲ್ಲೂ ಇದ್ದಾರೆ. ಕೃಷ್ಣಪ್ಪ ಗೌತಮ್, ಶ್ರೇಯಸ್ ಅಯ್ಯರ್ ತಮ್ಮ ಕಮಾಲ್ ಸ್ಪಿನ್ ಮೂಲಕ ಎದುರಾಳಿಗಳ ನಿದ್ದೆ ಗೆಡಿಸ ಬಲ್ಲರು ಇವರಿಗೆ ಅವಕಾಶ ನೀಡಿದರೆ ಒಳ್ಳೆಯದು.
ಇನ್ನು ಐಪಿಎಲ್ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಮನೀಶ್ ಪಾಂಡೆ ಸಹ ಕರ್ನಾಟಕದವರೇ. ಇವರು ಸಹ ಈ ಬಾರಿ ಹರಾಜು ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಮಯಾಂಕ್ ಅಗರ್ವಾಲ್ ಸಹ ಹರಾಜು ಟೇಬಲ್ ಮೇಲಿದ್ದಾರೆ. ಇವರಿಬ್ಬರೂ ಸಹ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇನ್ನು ಐಪಿಎಲ್ನಲ್ಲಿ ಆಡಿದ ಅನುಭವ ಹೊಂದಿರುವ ಅಭಿನವ್ ಮನೋಹರ್ ಅವರನ್ನು ಸಹ ತಂಡಕ್ಕೆ ಸೇರಿಸಿಕೊಂಡರೆ ಒಳ್ಳೆಯದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.