ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಮೆಲ್ಬೋರ್ನ್ನ ಎಂಸಿಜೆ ಅಂಗಳದಲ್ಲಿ ಗುರುವಾರದಿಂದ ಆರಂಭವಾಗಲಿದೆ. ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾದ ಪರ ಪದಾರ್ಪಣೆಯ ಮಾಡುವ ಕನಸನ್ನು, ಯುವ ಸ್ಪಿನ್ ಬೌಲರ್ ಕಾಣುತ್ತಿದ್ದಾರೆ. ಇವರು ಕನ್ನಡ ಮೂಲದವರು ಎಂಬುದು ಹೆಮ್ಮೆಯ ಸಂಗತಿ. ಒಂದು ವೇಳೆ ಇವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕರೆ, ಅಬ್ಬರಿಸಲು ಸಿದ್ಧರಾಗಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಈ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ನಿವೃತ್ತಿಯನ್ನು ಪಡೆದರು. ಈ ಸುದ್ದಿ ನಿಜಕ್ಕೂ ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆದರೆ ಇವರ ಸ್ಥಾನವನ್ನು ತುಂಬಲು ಮುಬೈನ ತನುಷ್ ಕೋಟ್ಯಾನ್ ಸಿದ್ಧರಾಗಿದ್ದಾರೆ. ಇವರಿಗೆ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ತನುಷ್ ಕೋಟ್ಯಾನ್ ಸ್ಥಿರ ಪ್ರದರ್ಶನ ನಿಡಿದ ಆಟಗಾರ. ಇವರು ಸಿಕ್ಕ ಅವಕಾಶದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆ ಸಮಿತಿ ಚಿತ್ತ ಕದ್ದಿದ್ದರು. ಅಶ್ವಿನ್ ಬದಲಿಗೆ ತನುಷ್ ಕೋಟ್ಯಾನ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಕೋಟ್ಯಾನ್ಗೆ ಮೆಲ್ಬೋರ್ನ್ನಲ್ಲಿ ಅವಕಾಶ ಸಿಗುವ ನಿರೀಕ್ಷೆ ಕಡಿಮೆ. ಏಕೆಂದರೆ ಭಾರತ ತಂಡದಲ್ಲಿ ಈಗಾಗಲೇ ಆಲ್ರೌಂಡರ್ಗಳಾದ ವಾಶಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಇವರಿಗೆ ತಂಡ ನಾಲ್ಕನೇ ಟೆಸ್ಟ್ನಲ್ಲಿ ಮಣೆ ಹಾಕಬಹುದು.
ತನುಷ್ ಕೋಟ್ಯಾನ್ ಅವರಿಗೆ ಸಿಡ್ನಿ ಮೈದಾನದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಏಕೆಂದರೆ ಈ ಮೈದಾನದ ಪಿಚ್ ಸ್ಪಿನ್ನರ್ಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಕೋಟ್ಯಾನ್ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮೂರನೇ ಸ್ಪಿನ್ನರ್ ಆಗಿ ಭಾರತಕ್ಕೆ ಪಾದಾರ್ಪಣೆ ಮಾಡಬಹುದು.

ತನುಷ್ ಕೋಟ್ಯಾನ್ ಅಕ್ಟೋಬರ್ 16, 1998 ರಂದು ಮುಂಬೈನಲ್ಲಿ ಜನಿಸಿದರು. ಇವರು ಮುಂಬೈ ಪರ ದೇಶೀಯ ಕ್ರಿಕೆಟ್ನಲ್ಲಿ ಆಡುವುದನ್ನು ಕಾಣಬಹುದು. ಇವರು 33 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 101 ವಿಕೆಟ್, 1525 ರನ್ ಸಿಡಿಸಿದ್ದಾರೆ. ಇವರು ಉಡುಪಿ ಮೂಲದವರು.
ಆಸ್ಟ್ರೇಲಿಯಾದ ಐತಿಹಾಸಿಕ ಮೆಲ್ಬೋರ್ನ್ ಟೆಸ್ಟ್ ಮೈದಾನದಲ್ಲಿ ಒಟ್ಟು ಏಳು ಭಾರತೀಯ ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್ ಸೇರಿದ್ದಾರೆ. ಈ ಸಾಲಿಗೆ ತನುಷ್ ಕೋಟ್ಯಾನ್ ಸೇರುತ್ತಾರಾ ಕಾದು ನೋಡಬೇಕಿದೆ.