ಹಿರಿಯರ ಮಾತು ಕೇಳಿದೆ ಇದ್ದಲ್ಲಿ ಏನ್ ಆಗುತ್ತದೆ ಎಂಬುದಕ್ಕೆ ಟೀಮ್ ಇಂಡಿಯಾದ ಈ ಇಬ್ಬರು ಆಟಗಾರರು ಬೆಸ್ಟ್ ಉದಾಹರಣೆ. ಒಬ್ಬ ಪ್ಲೇಯರ್ ಫಾರ್ಮ್ ಇಲ್ಲದೆ ರನ್ ಬರ ಅನುಭವಿಸುತ್ತಿದ್ದರು. ಆಗ ಅನುಭವಿಗಳು ಶಾಟ್ ಸೆಲೆಕ್ಷನ್ ಚೆಂಜ್ ಮಾಡಿಕೊಳ್ಳುವಂತೆ ಕಿವಿ ಮಾತನ್ನು ನೀಡಿದರು. ಇನ್ನೊಬ್ಬ ಪ್ಲೇಯರ್ಗೆ ದೇಶೀಯ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಳ್ಳುವಂತೆ ಸೂಚಿಸಿದರು.
ಈ ಇಬ್ಬರೂ ಟೀಮ್ ಇಂಡಿಯಾದ ಆಟಗಾರರು ಅನುಭವಿಗಳ ಮಾತಿಗೆ ಕವಡೇ ಕಾಸಿನ ಕಿಮ್ಮತ್ತನ್ನು ನೀಡದೆ, ಈಗ ಪಿಕಲಾಟಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಈ ಆಟಗಾರರು ಬೇರೆ ಯಾರು ಅಲ್ಲ. ಭಾರತದ ಪರ ಭರವಸೆಯ ಆಶಾ ಕಿರಣ ಮೂಡಿಸಿದ್ದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್.

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇಶಾನ್ ಮಾನಸಿಕವಾಗಿ ಸದೃಢವಾಗಿಲ್ಲ ಎಂಬ ಸುದ್ದಿ ಇತ್ತು. ಅದಕ್ಕಾಗಿಯೇ ಅವರು ಕ್ರಿಕೆಟ್ನಿಂದ ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಈ ಎಲ್ಲ ಊಹಾಪೋಹಗಳಿಗೆ ಇತ್ತೀಚಿಗೆ ಇಶಾನ್ ಕಿಶನ್ ಅಭ್ಯಾಸ ನಡೆಸುತ್ತಿರುವ ಸುದ್ದಿ ಬೇರೆ ಕಥೆಯನ್ನೇ ಹೇಳುವಂತಿದೆ. ಐಪಿಎಲ್ಗಾಗಿ ಅಭ್ಯಾಸ ಮಾಡಲು ಇಶಾನ್ ಪ್ರಾರಂಭಿಸಿದ್ದಾರೆ. ಅವರು ಈಗ ಫಿಟ್ ಆಗಿದ್ದಾರೆ ಎಂಬುದು ಸ್ಪಷ್ಟ. ಕೆಟ್ಟ ಫಾರ್ಮ್ನೊಂದಿಗೆ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಬಗ್ಗೆ ಅಪ್ಡೇಟ್ ಒಂದು ಹೊರ ಬಂದಿದೆ. ಈ ಇಬ್ಬರು ಆಟಗಾರರ ಬಗ್ಗೆ ಬಿಸಿಸಿಐ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ.

ಫೆಬ್ರವರಿ 16 ರಿಂದ ನಡೆಯಲಿರುವ ಪಂದ್ಯಕ್ಕೂ ಮುನ್ನ ತಮ್ಮ ತಮ್ಮ ರಣಜಿ ತಂಡಗಳನ್ನು ಸೇರಿಕೊಳ್ಳುವಂತೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಬಿಸಿಸಿಐ ಕೇಳಿದೆ. ಇಶಾನ್ ಕಿಶನ್ ರಣಜಿ ತೊರೆದು ಐಪಿಎಲ್ ತಯಾರಿ ಆರಂಭಿಸಿದಾಗ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಅದೇ ಸಮಯದಲ್ಲಿ, ಈಗ ಶ್ರೇಯಸ್ ಟೆಸ್ಟ್ ತಂಡಕ್ಕೆ ಮರಳಲು ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ.
ಇಶಾನ್ ಕಿಶನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮಾನಸಿಕ ಆರೋಗ್ಯವನ್ನು ಉಲ್ಲೇಖಿಸಿ ತಮ್ಮ ಹೆಸರನ್ನು ಹಿಂಪಡೆದಿದ್ದರು. ಇದಾದ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನೂ ಆಡಿರಲಿಲ್ಲ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಇಶಾನ್ ಕಿಶನ್ ತಂಡಕ್ಕೆ ಮರಳಲು ದೇಶೀಯ ಕ್ರಿಕೆಟ್ನಲ್ಲಿ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೋಚ್ ಮಾತಿಗೂ ಮನ್ನಣೆ ನೀಡದೆ ರಣಜಿ ಟ್ರೋಫಿಯಲ್ಲಿ ಭಾಗವಹಿಸದೇ ಐಪಿಎಲ್ಗೆ ತಯಾರಿ ಆರಂಭಿಸಿದ್ದರು.
ಬಿಸಿಸಿಐ ಕೇವಲ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ರಣಜಿ ಟ್ರೋಫಿ ಆಡಲು ಹೇಳುತ್ತಿಲ್ಲ. ಈ ನಿಯಮವು ಕೃನಾಲ್ ಪಾಂಡ್ಯ ಮತ್ತು ದೀಪಕ್ ಚಹಾರ್ ಅವರಿಗೂ ಅನ್ವಯಿಸುತ್ತದೆ.
ರಣಜಿ ಟ್ರೋಫಿ ಆಡುವ ನಿಯಮಗಳು ವಿರಾಟ್ ಕೊಹ್ಲಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಬಿಸಿಸಿಐಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಇದರರ್ಥ ಅವರು ಎಲ್ಲಿದ್ದಾರೆ ಎಂದು ಮಂಡಳಿಗೆ ತಿಳಿದಿದೆ. ಇದಲ್ಲದೆ, ಇಶಾನ್ ಕಿಶನ್ ಎಲ್ಲಿದ್ದಾರೆ ಎಂಬ ಬಗ್ಗೆ ಬಿಸಿಸಿಐಗೆ ಮಾಹಿತಿ ಇಲ್ಲ. ಇಶಾನ್, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಐಪಿಎಲ್ಗಾಗಿ ಅಭ್ಯಾಸವನ್ನು ಪ್ರಾರಂಭಿಸಿದ್ದರು.