ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ ರೇಸ್ನಿಂದ ಹೊರ ಬಿದ್ದ ನಂತರ ಭಾರತ ತಂಡದ ಸಂಪೂರ್ಣ ಗಮನವು ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮೇಲೆ ಕೇಂದ್ರೀಕೃತವಾಗಿದೆ. ವರದಿಗಳ ಪ್ರಕಾರ, ಈ ಮೆಗಾ ಟೂರ್ನಿಗೆ ಭಾರತ ತಂಡವನ್ನು ಜನವರಿ 12 ರೊಳಗೆ ಪ್ರಕಟಿಸಲಾಗುವುದು. ಕೆಲವು ಆಟಗಾರರ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ. ಆದರೆ ಕೆಲವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಯೋಜನೆಯಲ್ಲಿ ಇಲ್ಲ.
ಚಾಂಪಿಯನ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಆಡುವುದು ಅನುಮಾನವಾಗಿದೆ. ಅಂತಹ ಮೂರು ಆಟಗಾರರ ಭವಿಷ್ಯ ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ. ಏಕದಿನ ಕ್ರಿಕೆಟ್ನಲ್ಲಿ ಈ ಮೂವರು ಆಟಗಾರರ ದಾಖಲೆ ಉತ್ತಮವಾಗಿಲ್ಲ. ಈ ಕಾರಣದಿಂದಾಗಿ ಬಿಸಿಸಿಐ ಆಯ್ಕೆ ಸಮಿತಿ ಈ ಮೂವರು ಆಟಗಾರರನ್ನು ನಿರ್ಲಕ್ಷಿಸಬಹುದು.

ಟಿ20 ಕಿಂಗ್ ಸೂರ್ಯಕುಮಾರ್ ಯಾದವ್ ಚಾಂಪಿಯನ್ ಟ್ರೋಫಿಯಲ್ಲಿ ಆಡಲು ತಯಾರಾಗುತ್ತಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ನಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಸೂರ್ಯ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಸೂರ್ಯ ಅವರಿಗೆ ಏಕದಿನ ಪಂದ್ಯವನ್ನು ಆಡುವ ಅವಕಾಶವೂ ಸಿಕ್ಕಿತು. ಆದರೆ 2023ರ ವಿಶ್ವಕಪ್ನಲ್ಲಿ ಅವರು ಸಂಪೂರ್ಣ ವಿಫಲರಾದರು. ಏಕದಿನ ಕ್ರಿಕೆಟ್ನಲ್ಲಿ ಸೂರ್ಯ ಅವರ ಅಂಕಿಅಂಶಗಳು ಹೇಳಿಕೊಳ್ಳುವಂತಿಲ್ಲ. ಈಗ ಅವರು ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪರ ಆಡುತ್ತಾರಾ? ಎಂಬ ಪ್ರಶ್ನೆ ಎದ್ದಿದೆ. ಅವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ತಂಡದ ಭಾಗವಾಗಬಹುದು.
ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು 2023ರ ಏಕದಿನ ವಿಶ್ವಕಪ್ಗೆ ಹೆಚ್ಚಿನ ನಿರೀಕ್ಷೆಯೊಂದಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಭಾರತ ಸತತ 10 ಪಂದ್ಯಗಳನ್ನು ಗೆದ್ದರೂ, ಜಡೇಜಾ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. 2023ರ ವಿಶ್ವಕಪ್ನಲ್ಲಿ 11 ಪಂದ್ಯಗಳನ್ನು ಆಡಿರುವ ಜಡೇಜಾ ಕೇವಲ 16 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಜಡೇಜಾ 5 ಇನಿಂಗ್ಸ್ಗಳಲ್ಲಿ 39*, 8, 35, 29* ಮತ್ತು 9 ರನ್ಗಳ ಕಲೆ ಹಾಕಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ಈ ಬಾರಿ ಅವರ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರಿಗೆ ಆಡುವ ಅವಕಾಶ ಸಿಗಬಹುದು.
ಚಾಂಪಿಯನ್ ಟ್ರೋಫಿ ಟೂರ್ನಿಯಿಂದ ಹೊರಗುಳಿಯುವ ಮೂರನೇ ಆಟಗಾರರ ಎಂದರೆ ಇಶಾನ್ ಕಿಶನ್. ಅವರು ವಿಶ್ವಕಪ್ನಲ್ಲಿ 2 ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ, ಇನ್ನೊಂದು ಪಂದ್ಯದಲ್ಲಿ 47 ರನ್ಗಳ ಇನ್ನಿಂಗ್ಸ್ ಆಡಿದ್ದರು. ವಿಶ್ವಕಪ್ ಬಳಿಕ ಇಶಾನ್ ಕಿಶನ್ ಭಾರತ ತಂಡಕ್ಕೆ ಮರಳಿರಲಿಲ್ಲ. ಅವರು ಟೀಮ್ ಇಂಡಿಯಾದ ಕೇಂದ್ರ ಗುತ್ತಿಗೆ ಒಪ್ಪಂದದಿಂದ ಹೊರಗುಳಿದಿದ್ದಾರೆ. ವಿಶ್ವಕಪ್ 2023ರ ನಂತರ ರಿಷಬ್ ಪಂತ್ ಗಾಯದಿಂದ ಸಂಪೂರ್ಣವಾಗಿ ಫಿಟ್ ಆಗಿದ್ದರು. ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಮರಳುವ ಭರವಸೆ ಇಲ್ಲ.