ಸೆಪ್ಟಂಬರ್ 9ರಿಂದ ನಡೆಯಲಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸುವ ಸಾಧ್ಯತೆ ಇದೆ. ಈ ಟೂರ್ನಿಯಲ್ಲಿ ಯಾವೆಲ್ಲಾ ಸ್ಟಾರ್ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆಗಳು ಮೂಡಿವೆ. ಅಂದಹಾಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವುದೇ ಆಯ್ಕೆದಾರರಿಗೆ ದೊಡ್ಡ ತಲೆ ನೋವಾಗಿದೆ.
ಈ ಬಾರಿಯ ಏಷ್ಯಾ ಕಪ್ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಈ ಬಾರಿ ಈ ಟೂರ್ನಿಗಳಿಗೆ ಯುಎಇ ಆತಿಥ್ಯ ನೀಡಲಿದೆ. ಈಗಾಗಲೇ ಭಾರತ ಯುಎಇನಲ್ಲಿ ಹಲವು ಸರಣಿಗಳನ್ನು ಆಡಿದೆ. ಅಲ್ಲದೆ ಅಲ್ಲಿನ ಪಿಚ್ಗಳು ನಿಧಾನವಾಗಿರಬಹುದು ಎಂಬ ವರದಿಗಳು ಸಹ ಬರುತ್ತಿವೆ. ಇದೇ ಕಾರಣಕ್ಕೆ ಹೀಗಾಗಿ ತಂಡವನ್ನು ಪ್ರಕಟಿಸುವಾಗ ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವು ಅನಿವಾರ್ಯತೆ ಇದೆ. ಇನ್ನು ಮಧ್ಯಮ ಕ್ರಮಾಂಕವನ್ನು ಬಲ ಪಡಿಸುವ ನಿಟ್ಟಿನಲ್ಲಿ ಆಯ್ಕೆ ಸಮಿತಿ ಚಿತ್ತ ನೆಟ್ಟಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ವರ್ಷದ ಬಳಿಕ ಟಿ20 ಫಾರ್ಮೆಟ್ಗೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಇವರು ಕೊನೆಯದಾಗಿ ಜುಲೈ 2024 ರಲ್ಲಿ ಟಿ 20 ಪಂದ್ಯವನ್ನು ಆಡಿದ್ದರು. ಬಳಿಕ ಇವರಿಗೆ ಚುಟುಕು ಕ್ರಿಕೆಟ್ನಲ್ಲಿ ಅವಕಾಶಗಳು ಲಭಿಸಲಿಲ್ಲ. ಇವರು ಲಾಂಗರ್ ಫಾರ್ಮೆಟ್ ಆಡುತ್ತಾ ಸಾಗಿದರು. ಇನ್ನು ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಆರಂಭಿಕ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್ ಅವರೂ ಸಹ ಟಿ20 ಕ್ರಿಕೆಟ್ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಇವರು ಟಿ20 ಕ್ರಿಕೆಟ್ನಲ್ಲಿ 36 ಕ್ಕಿಂತ ಹೆಚ್ಚು ಸರಾಸರಿ ಮತ್ತು 164 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಈಗಾಗಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ಅವರು ಸಹ ಶಾರ್ಟ್ ಫಾರ್ಮೆಟ್ಗೆ ಕಂ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಇವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗುವ ಆಟಗಾರ, ಒಂದು ವೇಳೆ ಆಯ್ಕೆ ಸಮಿತಿ ಇವರಿಗೆ ಮಣೆ ಹಾಕಿದಲ್ಲಿ ರಿಂಕು ಸಿಂಗ್ ಅಥವಾ ಶಿವಂ ದುಬೆ ಇಬ್ಬರಲ್ಲಿ ಒಬ್ಬರಿಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ರಿಂಕು ಕಳೆದ 13 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಸ್ಥಾನದ ಮೇಲೂ ಅಪಾಯದ ತೂಗುಗತ್ತು ನೇತಾಡುತ್ತಿದೆ.

ಇನ್ನು ಎರಡನೇ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಆಯ್ಕೆ ಆಗುವುದು ಬಹುತೇಕ ಕನ್ಫರ್ಮ್ ಎಂದೇ ಹೇಳಲಾಗುತ್ತಿದೆ. ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆದರೆ, ಜಿತೇಶ್ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಲಿದ್ದಾರೆ. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.