
ಸಿಡ್ನಿ: ಮುಂಬರಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಇಲ್ಲದ ಹೊರತು ಟೀಮ್ ಇಂಡಿಯಾದ ಬೌಲಿಂಗ್ ದಾಳಿ ಅಷ್ಟೇನೂ ಬಲಿಷ್ಠವಾಗಿರಲಾರದು ಎಂದು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೇಳಿದ್ದಾರೆ. ಭಾರತ ತಂಡ ಅನುಭವಿ ಬೌಲರ್ ಒಬ್ಬನನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಸ್ಮಿತ್ ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಇಶಾಂತ್ ಶರ್ಮಾ ಗಾಯಕ್ಕೀಡಾಗಿದ್ದರು. ಹೀಗಾಗಿ ಇಶಾಂತ್ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿರಲಿಲ್ಲ. ಈಗ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಇಶಾಂತ್ ಚೇತರಿಕೊಳ್ಳುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ಸರಣಿಯಿಂದ ಶರ್ಮಾ ಈಗಾಗಲೇ ಹೊರ ಬಿದ್ದಾಗಿದೆ.
ಇಶಾಂತ್ ಬಗ್ಗೆ ಮಾತನಾಡಿದ ಸ್ಮಿತ್, 'ಇಂಶಾಂತ್ ಅನುಪಸ್ಥಿತಿ ಭಾರತಕ್ಕೆ ದೊಡ್ಡ ನಷ್ಟವಾಗಲಿದೆ. ಅವರು ಬಹಳಷ್ಟು ಪಂದ್ಯಗಳನ್ನು ಆಡಿದ್ದರು. ಉತ್ತಮ ಬೌಲರ್ ಎನಿಸಿದ್ದರು. ಬಹುಶಃ, ಇಶಾಂತ್ ಇಲ್ಲದೆ ಭಾರತ ತಂಡ ಬಲಿಷ್ಠ ತಂಡ ಅನ್ನಿಸಲಿಕ್ಕಿಲ್ಲ. ಇಶಾಂತ್ ಆಡುವುದನ್ನು ನಾನು ಇಷ್ಟಪಡುತ್ತಿದ್ದೆ,' ಎಂದಿದ್ದಾರೆ.
ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಎರಡನೇ ಅಭ್ಯಾಸ ಪಂದ್ಯ ನಡೆಯುತ್ತಿದೆ. ಇತ್ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ (ಬಾರ್ಡರ್-ಗವಾಸ್ಕರ್ ಟ್ರೋಫಿ) ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಈ ಸರಣಿಯ ಎರಡನೇ ಪಂದ್ಯದ ವೇಳೆ ಭಾರತದ ಪ್ರಮುಖ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಆಡುವ ನಿರೀಕ್ಷೆಯಿದೆ.