
ಕೌಲಾಲಂಪುರ, ಜೂ. 10: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಏಷ್ಯಾ ಕಪ್ ವನಿತಾ ಟಿ20 ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾ ದೇಶ 3 ವಿಕೆಟ್ ಜಯ ಸಾಧಿಸಿದೆ. ಭಾರತ ನೀಡಿದ್ದ 113 ರನ್ ಗುರಿಯನ್ನು ಬಾಂಗ್ಲಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ ತಲುಪಿ ಗೆಲುವನ್ನು ಸಂಭ್ರಮಿಸಿತು.
ಬಾಂಗ್ಲಾ ಪರ ಆಡಿದ ನಿಗರ್ ಸುಲ್ತಾನ 27 (24), ರುಮನಾ ಅಹ್ಮದ್ 23 (22), ಆಯಷಾ ರಹಮಾನ್ 17 (23) ಮತ್ತು ಶಮೀಮಾ ಸುಲ್ತಾನ 16 (23) ರನ್ ಪೇರಿಸಿ ಬಾಂಗ್ಲಾ ಗೆಲುವಿಗೆ ಕಾರಣರಾದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಭಾರತ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ (56/42) ಅರ್ಧ ಶತಕ ನೆರವಿನೊಂದಿಗೆ ಬಾಂಗ್ಲಾಕ್ಕೆ 113ರ ಸಾಧಾರಣ ರನ್ ಗುರಿ ನೀಡಿತ್ತು.
ಆರಂಭದಲ್ಲೇ ಕಳಪೆ ಆಟ ಪ್ರದರ್ಶಿಸಿದ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದು 112 ರನ್ ಪೇರಿಸಿತು. ಆರಂಭಿಕ ಆಟಗಾರ್ತಿಯರಾದ ಮಿಥಾಲಿ ರಾಜ್ 11 (18) ಮತ್ತು ಸ್ಮೃತಿ ಮಂಧನಾ 7 (12) ರನ್ ಗಳಿಸಿ ಬೇಗನೆ ಔಟಾಗಿದ್ದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು.
ಭಾರತ ಪರ ಆಡಿದವರಲ್ಲಿ ಜೂಲನ್ ಗೋಸ್ವಾಮಿ 10 (12), ವೇದಾ ಕೃಷ್ಣಮೂರ್ತಿ 11 (10), ದೀಪ್ತಿ ಶರ್ಮಾ 4 (11), ಅಜುಜಾ ಪಾಟಿಲ್ 3 (4), ತಾನಿಯಾ ಭಾಟಿಯಾ 3 (6) ರನ್ ಕೊಡುಗೆ ಮಾತ್ರ ಭಾರತಕ್ಕೆ ಲಭಿಸಿತು.
ಭಾರತ ಈ ಪ್ರಮುಖ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ತೋರಿಕೊಂಡಿತು. ಬಾಂಗ್ಲಾ ಆಟಗಾರ್ತಿಯರ ಸ್ಪಿನ್ ದಾಳಿಗೆ ಭಾರತ ಬೇಗನೆ ವಿಕೆಟ್ ಕಳೆದುಕೊಂಡು ರನ್ ಗಳಿಕೆಯಲ್ಲಿ ಹಿನ್ನೆಡೆ ಅನುಭವಿಸಿತು.
ಕೆಟ್ಟ ಬ್ಯಾಟಿಂಗ್ ಗೆ ಸಾಕ್ಷಿಯಾದ ಭಾರತ 10 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು ಕೇವಲ 46 ರನ್ ಪೇರಿಸಿತ್ತು.
ಈ ಹಿಂದೆ ಟೂರ್ನಿಯಲ್ಲಿ ಆಡಿರುವ ಒಟ್ಟು 5 ಪಂದ್ಯಗಳಲ್ಲಿ 4 ಗೆಲುವು ಮತ್ತು 1 ಸೋಲನ್ನು ಕಂಡಿದ್ದ ಭಾರತ ಒಟ್ಟು 8 ಅಂಕಗಳನ್ನು ಗಳಿಸುವುದರೊಂದಿಗೆ ಫೈನಲ್ ಕಾದಾಟಕ್ಕಿಳಿದಿದ್ದು, ಈ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಅದು ಸುಳ್ಳಾಗಿದೆ.