
ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಭರ್ಜರಿಯಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ತನ್ನ ಎರಡನೇ ಪಂದ್ಯವನ್ನು ಭಾರತ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದ್ದು ಈ ಪಂದ್ಯಕ್ಕೆ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಲಭ್ಯವಾಗಲಿದ್ದಾರಾ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಆದರೆ ಈ ಬಗ್ಗೆ ಭಾರತದ ಕೋಚ್ ಟ್ರೋಯ್ ಕೂಲಿ ಮಾತನಾಡಿದ್ದು ಸ್ಮೃತಿ ಎರಡನೇ ಪಂದ್ಯಕ್ಕೆ ಲಭ್ಯವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ನ ಎರಡನೇ ಪಂದ್ಯವನ್ನು ಭಾರತ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಮೊದಲ ಪಂದ್ಯವನ್ನು ಕೂಡ ಇದೇ ಕ್ರೀಡಾಂಗಣದಲ್ಲಿ ಪಾಖಿಸ್ತಾನದ ವಿರುದ್ಧ ಆಡಿದ್ದ ಭಾರತ 7 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಸ್ಮೃತಿ ಮಂಧಾನ ಟಿ20 ವಿಶ್ವಕಪ್ಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಬೆರಳಿಗೆ ಗಾಯಮಾಡಿಕೊಂಡಿದ್ದರು.ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಿಂದಲೂ ಹೊರಗುಳಿದಿದ್ದ ಅವರು ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಿಂದಲೂ ಹೊರಗುಳಿಯಬೇಕಾಯಿತು. ನಾಯಕಿ ಹರ್ಮನ್ಪ್ರೀತ್ ಕೌರ್ ಸ್ಮೃತಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸ್ಮೃತಿ ಮಂಧಾನ ಚೇತರಿಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. "
ಇನ್ನು ಕೋಚ್ ಟ್ರೋಯ್ ಕೂಲಿ "ಆಕೆ ಬಹಳ ಕಠಿಣ ಪರಿಶ್ರಮಪಡುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಪರೀಕ್ಷಿಸಿ ಅವರ ಲಭ್ಯತೆಯನ್ನು ಖಚಿತಪಡಿಸಲಾಗುತ್ತದೆ. ಪಂದ್ಯದಲ್ಲಿ ಆಡಲು ಏನೆಲ್ಲಾ ಸಿದ್ಧತೆಗಳು ಬೇಕೋ ಅದನ್ನು ಆಕೆ ನಡೆಸುತ್ತಿದ್ದಾರೆ. ನಾವು ಕೂಡ ಬಹಳ ಆತ್ಮವಿಶ್ವಾಸದಿಂದ ಇದ್ದು ಆಕೆ ಆಡುವ ವಿಶ್ವಾಸವಿದೆ" ಎಂದಿದ್ದಾರೆ.
ಭಾರತ ತಂಡ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಬಿಸ್ಮಾ ಮರೂಫ್ ನೇತೃತ್ವದ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಭಾರತ ಪ್ರಸ್ತುತ ಬಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 38 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 53 ರನ್ ಗಳಿಸಿ ಅಜೇಯರಾಗಿ ಉಳಿದ ಜೆಮಿಮಾ ರೋಡ್ರಿಗಸ್ ಪಂದ್ಯ ಶ್ರೇಷ್ಠ ಆಟಗಾರ್ತಿ ಎನಿಸಿಕೊಂಡರು.
150 ರನ್ಗಳನ್ನು ಬೆನ್ನಟ್ಟುವ ಸವಾಲು ಪಡೆದ ಭಾರತ ತಂಡ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ರಿಚಾ ಘೋಷ್ 20 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 31 ರನ್ ಗಳಿಸಿ ಗೆಲುವಿನಲ್ಲಿ ಕೊಡುಗೆ ನೀಡಿದರು. ಅದರಲ್ಲೂ ಅಂತಿಮ ನಾಲ್ಕು ಓವರ್ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಿಚಾ ಮತ್ತು ಜೆಮಿಮಾ ಗೆಲುವನ್ನು ಖಚಿತಪಡಿಸಿದರು.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡ ಲೀಗ್ ಹಂತದಲ್ಲಿ ಹೀದರ್ ನೈಟ್ ನೇತೃತ್ವದ ಇಂಗ್ಲೆಂಡ್ ಹಾಗೂ ಲಾರಾ ಡೆಲಾನಿ ನಾಯಕತ್ವದ ಐರ್ಲೆಂಡ್ ತಂಡವನ್ನು ಎದುರಿಸಲಿದೆ.