ಬೆಂಗಳೂರು, ಫೆ. 13: ಜಿಂಬಾಬ್ವೆ ವಿರುದ್ಧ ತಿಣುಕಾಡಿ ಗೆದ್ದ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಸೋಲೊಪ್ಪಿಕೊಂಡು ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣವಾಯಿತು. ಈ ಸೋಲು ದಕ್ಷಿಣ ಆಫ್ರಿಕಾವನ್ನು 'ಬಿ' ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತಳ್ಳಿತು.
ವಿಶ್ವಕಪ್ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾವನ್ನು ಫೆವರೇಟ್ ತಂಡಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಹಿಂದಿನ ಪ್ರದರ್ಶನಗಳು ಅದೇ ರೀತಿ ಮೂಡಿಬಂದಿದ್ದವು. ಹಾಗಾದರೆ ನಿಜಕ್ಕೂ ದಕ್ಷಿಣ ಆಫ್ರಿಕಾ ಎಡವಿದ್ದು ಎಲ್ಲಿ? ಸೋಲಿಗೆ ನಿಜವಾದ ಕಾರಣಗಳೇನು? ಎಂಬುದನ್ನು ಅವಲೋಕಿಸಿದಾಗ ಅನೇಕ ಅಂಶಗಳು ವ್ಯಕ್ತವಾಗುತ್ತವೆ.[ವಿಶ್ವಕಪ್: ಮೆಲ್ಬೋರ್ನ್ ನಲ್ಲಿ ಇತಿಹಾಸ ನಿರ್ಮಿಸಿದ ಧೋನಿ ಪಡೆ]

ತಂತ್ರಗಾರಿಕೆಯಲ್ಲಿ ವಿಫಲ
ಸರಿಯಾದ ತಂತ್ರಗಾರಿಕೆ ಸಂಘಟಿಸದೇ ಇರುವುದು ದಕ್ಷಿಣ ಆಫ್ರಿಕಾಕ್ಕೆ ಮುಳುವಾಗಿ ಪರಿಣಮಿಸಿತು. ನಾಯಕ ಡೆವಿಲಿಯರ್ಸ್ ಕೇವಲ ಒಂದೇ ಒಂದು ಯೋಜನೆ ಇಟ್ಟುಕೊಂಡು ಅಂಗಣಕ್ಕಿಳಿದಿದ್ದರು. ಈ ಪ್ಲಾನ್ ವಿಫಲವಾದರೆ ಮುಂದೇನು ಎಂಬುದರ ಬಗ್ಗೆ ಚಿಂತನೆ ಇಟ್ಟುಕೊಂಡಿರಲಿಲ್ಲ. ಅಲ್ಲದೇ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಭಾರತೀಯರ ಮೇಲೆ ಯಾವ ಹಂತದಲ್ಲೂ ಆಕ್ರಮಣ ತೋರುವ ಲಕ್ಷಣ ತೋರ್ಪಡಿಸಲಿಲ್ಲ.
ವಿಕೆಟ್ ಕೀಳದ ಡೇಲ್ ಸ್ಟೇಯ್ನ್ ವೇಗ
ದಕ್ಷಿಣ ಆಫ್ರಿಕಾದ ಬೌಲಿಂಗ್ ಶಕ್ತಿ ಡೇಲ್ ಸ್ಟೇಯ್ನ್ ವಿಕೆಟ್ ಕೀಳುವಲ್ಲಿ ವಿಫಲವಾದರು. ಭಾರತದ ವಿರುದ್ಧದ ಪಂದ್ಯದಲ್ಲಿ ಅವರ ಸ್ವಿಂಗ್ ಮತ್ತು ತಂತ್ರಗಾರಿಕೆ ಮಾಯವಾಗಿತ್ತು. ಪಿಚ್ ಮತ್ತು ಉಳಿದ ಬೌಲರ್ ಗಳು ಅವರಿಗೆ ಸಹಕಾರ ನೀಡಲಿಲ್ಲ.[ಹರಿಣಗಳ ಕೈಯಿಂದ ಪಂದ್ಯ ಕಸಿದುಕೊಂಡ ರನೌಟ್ ಗಳು]
ಫಿಲಾಂಡರ್ ಗಾಯಾಳು
ಪ್ರಮುಖ ವೇಗದ ಬೌಲರ್ ಫಿಲಾಂಡರ್ ಗಾಯಾಳುವಾಗಿದ್ದು ಆಫ್ರಿಕಾಕ್ಕೆ ತಲೆನೋವಾಗಿ ಪರಿಣಮಿಸಿತು. ಕೇವಲ 4 ಓವರ್ ಎಸೆದ ಫಿಲಾಂಡರ್ ಫೆವಿಲಿಯನ್ ಸೇರಿಕೊಂಡರು.
ಡುಮಿನಿಗೆ ಬಾಲ್ ನೀಡಿ ಕೈ ಸುಟ್ಟುಕೊಂಡ ಡೆವಿಲಿಯರ್ಸ್
ಪಂದ್ಯದ 8 ನೇ ಓವರ್ ನ್ನು ಪಾರ್ಟ್ ಟೈಮ್ ಸ್ಪಿನ್ ಬೌಲರ್ ಜೆಪಿ ಡುಮಿನಿಗೆ ಕೊಟ್ಟಿದ್ದು ಮಾರಕವಾಗಿ ಪರಿಣಮಿಸಿತು. ಶಿಖರ್ ಧವನ್ ಮತ್ತು ಕೊಹ್ಲಿ ಜತೆಯಾಟ ಬೇರ್ಪಡಿಸಲು ಡೆವಿಲಿಯರ್ಸ್ ತೆಗೆದುಕೊಂಡ ಕ್ರಮ ದುಬಾರಿಯಾಗಿ ಪರಿಣಮಿಸಿತು.
ಬ್ಯಾಟಿಂಗ್ ವೈಫಲ್ಯ
ಬಲಿಷ್ಠ ಬ್ಯಾಟಿಂಗ್ ಆರ್ಡರ್ ಹೊಂದಿರುವ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಮಾತ್ರ ಸಂಪೂರ್ಣ ವಿಫಲವಾಯಿತು. ಭಾರತದ ಬೌಲಿಂಗ್ ದಾಳಿಯನ್ನು ಯಾವ ಹಂತದಲ್ಲೂ ಸಮರ್ಪಕವಾಗಿ ಎದುರಿಸಲಿಲ್ಲ. ಡೆವಿಲಿಯರ್ಸ್ ಮತ್ತು ಡುಪ್ಲೆಸಿಸ್ ನಂತರ ಯಾವ ಜತೆಯಾಟ ಬರದಿದ್ದದ್ದು ಸೋಲನ್ನು ಖಚಿತ ಮಾಡಿತು.
ಆಲ್ ರೌಂಡರ್ ಕೊರತೆ
ಇಷ್ಟು ದಿನ ದಕ್ಷಿಣ ಆಫ್ರಿಕಾಕ್ಕೆ ಜಾಕ್ ಕಾಲಿಸ್ ನಂಥ ಆಲ್ ರೌಂಡರ್ ನೆರವಿತ್ತು. ಆಪತ್ ಕಾಲದಲ್ಲಿ ರನ್ ಗಳಿಸುವ ಅಲ್ಲದೇ ಜತೆಯಾಟ ಬೇರೆ ಮಾಡುವಂಥ ಬೌಲಿಂಗ್ ದಾಳಿ ಸಂಘಟಿಸುವಂಥ ಯಾವ ಪ್ರದರ್ಶನ ನೀಡುವ ಆಟಗಾರ ಕಂಡುಬರಲಿಲ್ಲ.