For Quick Alerts
ALLOW NOTIFICATIONS  
For Daily Alerts
 

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!

By ಆರ್‌. ಕೌಶಿಕ್‌, ಲಂಡನ್‌
World Cup 2019, Final: The Wonderful Mr Kane Williamson

ಲಂಡನ್‌, ಜುಲೈ 15: ಕೇನ್‌ ವಿಲಿಯಮ್ಸನ್‌ ಅವರು ತಮ್ಮ ವೃತ್ತಿ ಬದುಕಿನ ಅತ್ಯಂತ ಕಠಿಣ ಪತ್ರಿಕಾಗೋಷ್ಠಿಯನ್ನು ಮುಗಿಸಿ ಹೊರ ನಡೆಯುವ ಸಂದರ್ಭದಲ್ಲಿ ಅವರಿಗೆ ವಿಭಿನ್ನ ಅನುಭವವೇ ಆಗಿತ್ತು. ಏಕೆಂದರೆ ಸಾಮಾನ್ಯವಾಗಿ ನಿರ್ಭಯವಾಗಿ ಮತ್ತು ಟೀಕೆಗಳ ಸುರಿಮಳೆಗೈಯಲು ಕಾಯುವ ಪ್ರತಿಕಾ ಬಳಗ ಟೂರ್ನಿ ಶ್ರೇಷ್ಠ ಆಟಗಾರ ಮತ್ತು ನ್ಯೂಜಿಲೆಂಡ್‌ ತಂಡದ ಅಪ್ರತಿಮ ನಾಯಕನಿಗೆ ಚಪ್ಪಾಳೆಯ ಮೂಲಕ ಬೀಳ್ಕೊಟ್ಟಿತ್ತು.

ಅಂದಹಾಗೆ ನ್ಯೂಜಿಲೆಂಡ್‌ ತಂಡ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಫೈನಲ್‌ ಪಂದ್ಯದಲ್ಲಿ ಸೋಲನುಭವಿಸಿತ್ತು. ಈ ಬಾರಿಯಂತೂ ಯಾರೂ ಕೂಡ ಕನಸಿನಲ್ಲೂ ಆಲೋಚಿಸದ ರೀತಿಯಲ್ಲಿ ಅತ್ಯಂತ ವಿಭಿನ್ನ ಹಾಗೂ ಅಪರೂಪ ಎಂಬಂತೆ ನ್ಯೂಜಿಲೆಂಡ್‌ಗೆ ಸೋಲು ಬಂದೆರಗಿತ್ತು.

ವಿಶ್ವಕಪ್‌: ಜಯವರ್ಧನೆ ಅವರ ವಿಶ್ವ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌

ನಿಜ ಹೇಳುವುದಾದರೆ ನ್ಯೂಜಿಲೆಂಡ್‌ ತಂಡ ಸೋತಿಲ್ಲ. ಭಾನುವಾರ (ಜುಲೈ 14) ಭಾವನೆಗಳ ಅಲೆಯಲ್ಲಿ ತೇಲುತ್ತಿದ್ದ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ತಂಡ ವಿಶ್ವಕಪ್‌ ಗೆದ್ದಿರಬಹುದು. ಆದರೆ, ಇಂಗ್ಲೆಂಡ್‌ ಫೈನಲ್‌ ಪಂದ್ಯವನ್ನು ಗೆಲ್ಲಲಿಲ್ಲ ಎಂಬುದು ಅಷ್ಟೇ ಸತ್ಯ. ಪ್ರಶಸ್ತಿಗಾಗಿ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಟುವೆ ಟೈ ಫಲಿತಾಂಶ ಮೂಡಿಬಂದಿತ್ತು. ಬಳಿಕ ಏಕದಿನ ಕ್ರಿಕೆಟ್‌ ಇತಿಹಾಸದ ಫೈನಲ್‌ ಪಂದ್ಯದಲ್ಲಿ ಮೊತ್ತ ಮೊದಲ ಬಾರಿ ಬಳಕೆ ಮಾಡಲಾದ ಸೂಪರ್‌ ಓವರ್‌ ಹಣಾಹಣಿಯಲ್ಲೂ ಇತ್ತಂಡಗಳು ಸಮಬಲ ಸಾಧಿಸಿದ್ದವು.

ಬಳಿಕ ಫಲಿತಾಂಶ ಸಲುವಾಗಿ ಟೈ ಬ್ರೇಕರ್‌ ಬಳಕೆಗೆ ತರಲಾಯಿತು. ಪಂದ್ಯದಲ್ಲಿ ನಿಗದಿತ ಓವರ್‌ಗಳು ಮತ್ತು ಸೂಪರ್‌ ಓವರ್‌ ಎಲ್ಲದರಲ್ಲೂ ಗಳಿಸಿದ ಒಟ್ಟು ಬೌಂಡರಿಗಳ ಆಧಾರದ ಮೇರೆಗೆ ವಿಜೇತರನ್ನು ಘೋಷಿಸುವಂತಾಗಿತ್ತು. ಇದರಲ್ಲಿ ಇಂಗ್ಲೆಂಡ್‌ ತಂಡ ಪೂರ್ಣ ಪ್ರಾಬಲ್ಯ ಮೆರೆದು 26-17 ಅಂತರದಲ್ಲಿ ನ್ಯೂಜಿಲೆಂಡ್‌ ಎದುರು ಮೇಲುಗೈ ಪಡೆದಿತ್ತು. ಈ ರೀತಿಯ ಫಲಿತಾಂಶ ನಿಜಕ್ಕೂ ಅನಿರೀಕ್ಷಿತ ಹಾಗೂಐ ಅಪರೂಪವೇ ಸರಿ. ಈ ಹಿಂದಿನ 11 ಆವೃತ್ತಿಗಳಲ್ಲಿ ಈ ರೀತಿ ಎಂದೂ ನಡೆದಿಲ್ಲ. ನಿಜ ಹೇಳುವುದಾದರೆ ಈ ಹಿಂದಿನಾ ಎಲ್ಲಾ ಫೈನಲ್‌ ಪಂದ್ಯಗಳು ಇಷ್ಟು ಜಿದ್ದಾಜಿದ್ದಿನ ಕಾಳಗ ಕಂಡೇ ಇಲ್ಲ.

ಇನ್ನು ಫೈನಲ್‌ ಪಂದ್ಯದಲ್ಲಿ ಅದೃಷ್ಟ ಇಂಗ್ಲೆಂಡ್‌ ಹೆಗಲೇರಿತ್ತು ಎಂದೇ ಹೇಳಬಹುದು. ಆರಂಭದಲ್ಲಿ ಜೇಸನ್‌ ರಾಯ್‌ ಎಲ್‌ಬಿಡಬ್ಲ್ಯುನಲ್ಲಿ ಜೀವದಾನ ಪಡೆದರಿಂದ ಕೊನೆಯ ಓವರ್‌ನಲ್ಲಿ ಬೆನ್‌ ಸ್ಟೋಕ್ಸ್‌ ಅವರ ಬ್ಯಾಟ್‌ಗೆ ತಾಗಿದ ಚೆಂಡು ಓವರ್‌ಥ್ರೋ ಮೂಲಕ ಬೌಂಡರಿ ಗೆರೆ ಮುಟ್ಟಿದ್ದು. ಇದ್ಯಾವುದೂ ಸಾಮಾನ್ಯ ಸಂಗತಿಗಳಲ್ಲ. ಇದನ್ನೆಲ್ಲವನ್ನು ಒಬ್ಬ ದುರ್ಬಲ ವ್ಯಕ್ತಿಯಿಂದ ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಇದು ಅನ್ಯಾಯ ಎಂದೆಲ್ಲಾ ಪ್ರತಿಭಟನೆಗೆ ಮುಂದಾಗಿ ಬಿಡುತ್ತಿದ್ದರು. ಕನಿಷ್ಠ ಪಕ್ಷ ಮಾತಿನಲ್ಲಾದರೂ ತಮ್ಮ ಹತಾಷೆ ಮತ್ತು ಬೇಸರಗಳನ್ನು ಹೊರಹಾಕಿಬಿಡುತ್ತಿದ್ದರು. ಆದರೆ, ಕೇನ್‌ ವಿಲಿಯಮ್ಸನ್‌ ಅದ್ಭುತ ವ್ಯಕ್ತಿ. ಸೋಲಿನಿಂದ ಅವರಿಗೆ ಅತೀವ ನೋವಾಗಿದೆ. ಆದರೂ, ಎಲ್ಲಿಯೂ ಅದನ್ನು ಪ್ರದರ್ಶಿಸಲಿಲ್ಲ. ಸೋಲು ಗೆಲುವನ್ನು ಸಮನಾಗಿ ಕಂಡ ಅದ್ಭುತ ವ್ಯಕ್ತಿತ್ವ ಅವರದ್ದು.

ತಮ್ಮೊಳಗಿನ ನೋವೆಲ್ಲವನ್ನೂ ಅವರು ತಮ್ಮ ನಗುಮುಖದ ಹಿಂದೆ ಮರೆ ಮಾಚಿದ್ದರು. ಅಷ್ಟೇ ಅಲ್ಲ ಕೆಲ ತಮಾಷೆಯ ಮಾತುಗಳನ್ನೂ ಆಡಿದರು. ಆದರೂ ಅವರೊಳಗಿನ ನೋವು ಎಲ್ಲರಿಗೂ ತಿಳಿಯುತ್ತಿತ್ತು. ನ್ಯೂಜಿಲೆಂಡ್‌ ತಂಡ ತನ್ನ ಸರ್ವವನ್ನೂ ಪಣಕ್ಕಟ್ಟಿತ್ತು. ಇಂಗ್ಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಏಟಿಗೆ ಎದುರೇಟು ನೀಡಿ ಜಿದ್ದಾಜಿದ್ದಿನ ಹೋರಾಟ ನಡೆಸಿತ್ತು. ಹೀಗಾಗಿ ನ್ಯೂಜಿಲೆಂಡ್‌ ತಂಡದ ಪ್ರಯತ್ನವನ್ನು ಕಿಂಚಿತ್ತೂ ಪ್ರಶಸ್ನಿಸುವಂತಿರಲಿಲ್ಲ.

ಟೂರ್ನಿಯಲ್ಲಿ ಸತತ ಎರಡನೇ ಬಾರಿ ರನ್ನರ್ಸ್‌ಅಪ್‌ ಸ್ಥಾನ ಪಡೆದರೂ ನ್ಯೂಜಿಲೆಂಡ್‌ ತಂಡ ಕ್ರಿಕೆಟ್‌ ಜಗತ್ತಿನಿಂದ ಹರಿದುಬಂದ ಪ್ರಶಂಸೆಗಳ ಸುರಿಮಳೆಯಲ್ಲಿ ಮಿಂದು ಹೆಮ್ಮೆಯಿಂದಲೇ ಹೊರನಡೆಯಿತು. ಒಳ್ಳೆಯವರಿಗೆ ಎಂದೂ ಮೊದಲ ಸ್ಥಾನ ಸಿಗುವುದಿಲ್ಲ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾದಂತಿತ್ತು. ಇನ್ನು ವೃತ್ತಿಪರ ತಂಡಗಳಲ್ಲಿ ಇಷ್ಟು ಒಳ್ಳೆಯ ತಂಡ ಸಿಗುವುದು ಕಷ್ಟ. ನಾಯಕನಿಂದ ಹಿಡಿದು ತಂಡದ ಆಟಗಾರರೆಲ್ಲ ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದು, ಈ ರೀತಿಯ ತಂಡವನ್ನು ಕಾಣುವುದು ಬಹಳ ಅಪರೂಪ.

ಇನ್ನು ಫೈನಲ್‌ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿ ಮುಕ್ತಾಯದ ಹೊತ್ತಿಗೆ, ಇಷ್ಟೆಲ್ಲಾ ಆದ ಬಳಿಕವೂ ಎಲ್ಲಾ ಕ್ರಿಕೆಟಿಗರನ್ನು ನೀವು ಮುಂಚೆಯಷ್ಟೇ ಪ್ರೀತಿಯಿಂದ ಕಾಣುತ್ತೀರ? ಎಂದು ವಿಲಿಯಮ್ಸನ್‌ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಕೆಲ ಕ್ಷಣ ಮೌನಕ್ಕೆ ಜಾರಿದ ವಿಲಿಯಮ್ಸನ್‌ ಅದ್ಭುತ ಉತ್ತರದೊಂದಿಗೆ ಹೊರಬಂದರು. "ಪ್ರತಿಯೊಬ್ಬರಿಗೂ ತಮ್ಮದೇ ಸ್ವಭಾವವನ್ನು ಕಾಯ್ದುಕೊಳ್ಳುವ ಸ್ವಾತಂತ್ರ್ಯವಿದೆ. ಇದೇ ಈ ಜಗತ್ತಿನಲ್ಲಿರುವ ಅತ್ಯುತ್ತಮ ಸಂಗತಿ. ಆದರೂ ಕೆಲ ವ್ಯಕ್ತಗಳಲ್ಲಿ ಕೆಲ ಅಂತರ ಇದ್ದೇ ಇರುತ್ತದೆ. ಇದು ಉತ್ತರಿಸಲಿ ಬಹಳ ಕಷ್ಟವಾದ ಪ್ರಶ್ನೆ. ಆದರೂ ನನ್ನಿಂದ ಸಾಧ್ಯವಾಗುವ ಅತ್ಯುತ್ತಮ ಉತ್ತರ ಏನೆಂದರೆ. ನಿಮ್ಮ ಸ್ವಂತಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ಪ್ರತಿಯೊಂದನ್ನು ಆನಂದಿಸಲು ಮಾತ್ರ ನೀವು ಪ್ರಯತ್ನಿಸಬೇಕು," ಎಂದರು.

ಇನ್ನು ಹಲವು ಪ್ರಶ್ನೆಗಳಿಗೆ ಅವರು ನಗುತ್ತಲೇ ಉತ್ತರಿಸುತ್ತಿದ್ದರು. ಇದರರ್ಥ ಖಾಸಗಿಯಾಗಿ ಅವರನ್ನು ಈ ಪ್ರಶ್ನೆಗಳನ್ನು ಕೇಳಿದ್ದರೆ ಅವರ ಬಳಿ ಬೇರೆಯದ್ದೇ ಉತ್ತರವಿತ್ತು. ಇನ್ನು ಪರಿಸ್ಥಿತಿಯನ್ನು ನಿಭಾಯಿಸಲು ನಗುವೇ ಪರಿಹಾರವಾಯಿತೇ ಎಂದು ಕೂಡ ವಿಲಿಯಮ್ಸನ್‌ ಅವರನ್ನು ಪ್ರಶಸ್ನಿಸಲಾಯಿತು. "ನಗುವುದೋ ಅಥವಾ ಅಳುವುದೋ ಎರಡೂ ಕೂಡ ನಿಮ್ಮ ಆಯ್ಕೆಯಾಗಿರುತ್ತದೆ. ಅಲ್ಲವೇ? ಎಂದು ಉತ್ತರಿಸಿದರು. "ಕೋಪವಂತೂ ಅಲ್ಲ. ಅಲ್ಲಿ ಬಹಳಷ್ಟು ನಿರಾಸೆ ತುಂಬಿದೆ. ಪ್ರತಿಯೊಬ್ಬ ಆಟಗಾರನಿಗೂ ಇದರ ಅನುಭವವಾಗಿದೆ. ನೀವು ಸರ್ವವನ್ನು ಪಣಕ್ಕಿಟ್ಟು ಶ್ರಮಿಸಿರುವಾಗ ಈ ರೀತಿಯ ಸಂಗತಿ ಎದುರಾದರೆ ಖಂಡಿತಾ ಭಾವನೆಗಳನ್ನು ಹಿಡಿದಿಡುವುದು ಕಷ್ಟ. ಇದು ಆಟ ಎಂಬುದು ನಮಗೆ ತಿಳಿದಿದೆ. ಇದು ಚಂಚಲ. ಯಾವ ಸಂದರ್ಭದಲ್ಲಿ ಯಾರಿಗಾದರೂ ಒಲಿಯಬಹುದು. ಇದು ಕ್ರೀಡೆಯ ಸ್ವಭಾವ ಮತ್ತು ಭಾಗ ಕೂಡ. ಎಷ್ಟೇ ಪ್ರಯತ್ನಿಸಿದರೂ ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಅದು ಒಲಿಯುವುದಿಲ್ಲ. ಈ ಬಾರಿಯಂತೂ ನಮ್ಮತ್ತ ತಿರುಗಿದರೂ, ಒಲಿಯದೇ ಹೋಯಿತು," ಎಂದರು.

ಇದೇ ವೇಳೆ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರ ಕುರಿತಾಗಿ ಮಾತನಾಡಿದ ವಿಲಿಯಮ್ಸನ್‌, "ವೈಯಕ್ತಿಕ ಪ್ರದರ್ಶನಗಳು ಬಹುದೊಡ್ಡ ಸಾಧನೆ ಮಾಡುವ ಕಡೆಗೆ ನಿಮ್ಮಿಂದ ನೀಡಲಾಗುವ ಕೊಡುಗೆಯಾಗಿದೆ. ಇದು ಸಂಪೂರ್ಣ ತಂಡದ ಯಶಸ್ಸಿಗಾಗಿ ನಡೆಸಿದ ಪ್ರಯತ್ನವಷ್ಟೇ," ಎಂದು ತಮ್ಮ ಸಿದ್ಧಾಂತವನ್ನು ವಿವರಿಸಿದರು. "ಉದ್ದೇಶವೇನಿದ್ದರೂ ತಂಡಕ್ಕೆ ನೆರವಾಗಿ ಗೆಲುವಿನ ದಡ ಮುಟ್ಟಿಸುವುದು. ಇನ್ನು ಇಷ್ಟು ಕಡಿಮೆ ಅಂತರದಲ್ಲಿ ಸೋಲು ಎದುರಾದ ಸಂದರ್ಭದಲ್ಲಿ ತಂಡದ ಯಶಸ್ಸಿಗಾಗಿ ನಾನು ಇನ್ನೂ ಏನು ಮಾಡಬೇಕಿತ್ತು ಎಂಬುದನ್ನು ಮಾತ್ರವೇ ಇಲ್ಲಿ ಸದ್ಯಕ್ಕೆ ಆಲೋಚಿಸಬೇಕಾಗುತ್ತದೆ," ಎಂದು ವಿಲಿಯಮ್ಸನ್‌ ತಮ್ಮ ಮಾತುಗಳನ್ನು ಕೊನೆಗೊಳಿಸಿದರು.

(ಕಳೆದ ಮೂರು ದಶಕಗಳಿಂದ ಕ್ರಿಕೆಟ್‌ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಆರ್‌. ಕೌಶಿಕ್‌ ಅವರು ಈವರೆಗೆ 7 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳನ್ನು ವರದಿ ಮಾಡಿದ್ದಾರೆ. ಕ್ರಿಕಟ್‌ ಆಟವನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದಾರೆ)

Story first published: Monday, July 15, 2019, 13:56 [IST]
Other articles published on Jul 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+