
ಮ್ಯಾಂಚೆಸ್ಟರ್, ಜುಲೈ 9: ಪ್ರಸಕ್ತ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕೆ ೀಮ್ ಇಂಡಿಯಾದ ಆಡುವ 11ರ ಬಳಗದಿಂದ ವಿಕೆಟ್ ಟೇಕಿಂಗ್ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಕುಲ್ದೀಪ್ ಯಾದವ್ ಅವರನ್ನು ಕೈಬಿಟ್ಟಿದ್ದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎದುರು ಭಾರಿ ಟೀಕೆಗಳು ಮೂಡಿಬಂದಿವೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಆಡಿದ ನಾಲ್ಕು ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸಿರುವ ಮೊಹಮ್ಮದ್ ಶಮಿ ಅವರ ಬದಲಾಗಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಕಣಕ್ಕಿಳಿಸಲಾಗಿತ್ತು. ಜೊತೆಗೆ ಕುಲ್ದೀಪ್ ಬದಲು ಚಹಲ್ಗೆ ಸ್ಥಾನ ನೀಡಲಾಗಿತ್ತು.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಭಾರಿ ಚರ್ಚೆಯೇ ಆರಂಭವಾಗಿದೆ. ಕ್ರಿಕೆಟ್ ಪಂಡಿತರು ಕೂಡ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
"ಕುಲ್ದೀಪ್ ಬದಲಿಗೆ ಚಹಲ್ ಸರಿ. ಆದರೆ ಶಮಿ ಅವರನ್ನು ಕೈಬಿಟ್ಟಿದ್ದಕ್ಕೆ ಕಾರಣಗಳು ತಿಳಿಯುತ್ತಿಲ್ಲ. 5 ಬೌಲರ್ಗಳನ್ನು ಆಡಿಸುವಾಗ ಇದು ಕೊಂಚ ಸಂಕಷ್ಟ ತಂದೊಡ್ಡಬಹುದು. ಆದರೆ, ರನ್ ಚೇಸಿಂಗ್ ಸಿಕ್ಕಿರುವುದರಿಂದ ಕೊಂಚ ನಿರಾಳ ತಂದುಕೊಳ್ಳಬಹುದಾಗಿದೆ. ಭಾರತ ತಂಡದ ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದೆ,'' ಎಂದು ಭಾರತ ತಂಡದ ಮಾಜಿ ಆಟಗಾರ ಆಕಾಶ್ ಛೋಪ್ರಾ ಹೇಳಿದ್ದಾರೆ.
"ಸೌರವ್ ಗಂಗೂಲಿ ಅವರಂತೆ ನನಗು ಕೂಡ ಶಮಿ ಅವರನ್ನು ಕೈಬಿಟ್ಟಿರುವುದು ಅಚ್ಚರಿ ತಂದಿದೆ. ಆರಂಭದಲ್ಲಿ ವಿಕೆಟ್ ತಂದುಕೊಡಬಲ್ಲ ಸಾಮರ್ಥ್ಯ ಶಮಿ ಅವರಲ್ಲಿದೆ. ಆರಂಭದಲ್ಲೇ ವಿಕೆಟ್ ಲಭ್ಯವಾಗುವುದರಿಂದ ಡೆತ್ ಓವರ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಜಡೇಜಾ ಸೇರ್ಪಡೆಯೊಂದಿಗೆ ಭಾರತ ತಂಡ 8ನೇ ಕ್ರಮಾಂಕದ ವರೆಗೂ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ನ್ಯೂಜಿಲೆಂಡ್ ಎದುರು ಉತ್ತಮ ದಾಖಲೆ ಹೊಂದಿರುವ ಕುಲ್ದೀಪ್ ಅವರನ್ನು ಕೈಬಿಟ್ಟದ್ದು ಎಷ್ಟು ಸರಿ ಎಂಬುದು ತಿಳಿಯುತ್ತಿಲ್ಲ,'' ಎಂದು ಜನಪ್ರಿಯ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.
"ಟೀಮ್ ಇಂಡಿಯಾ ಬಹಳ ಸೂಕ್ಷ್ಮವಾಗಿ ಆಡುವ 11 ಆಟಗಾರರ ಆಯ್ಕೆ ಮಾಡಿದೆ. ಕುಲ್ದೀಪ್ ಮತ್ತು ಶಮಿ ಬದಲಾಗಿ ಭುವಿ ಮತ್ತು ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಸೆಮಿಫೈನಲ್ಸ್ ಸಲುವಾಗಿ ಹೊಸದಾದ ಪಿಚ್ ನಿರ್ಮಿಸಿರುವು ಕಾರಣ ದೊಡ್ಡ ಮೊತ್ತಗಳು ದಾಖಲಾಗುವ ಸಾಧ್ಯತೆ ಇದ್ದು, ಕೊಂಚ ಬ್ಯಾಟಿಂಗ್ ಮಾಡಬಲ್ಲ ಆಲ್ರೌಂಡರ್ಗಳನ್ನು ಸಂಪೂರ್ಣ ಬೌಲರ್ಗಳ ಬದಲಾಗಿ ಆಯ್ಕೆ ಮಾಡಿಕೊಂಡಿದೆ,'' ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರ ಭಾರತ ತಂಡದ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.