
ನವದೆಹಲಿ, ಜುಲೈ 11: ಎಂಎಸ್ ಧೋನಿ ವೃತ್ತಿ ಜೀವನದ ಕೊನೇ ವಿಶ್ವಕಪ್ ಟೂರ್ನಿಯಾಗಿ ಐಸಿಸಿ ವಿಶ್ವಕಪ್ 2019ನ್ನು ಬಿಂಬಿಸಲಾಗುತ್ತಿದೆ. 38ರ ಹರೆಯದ ಬ್ಯಾಟ್ಸ್ಮ್ ಕಮ್ ವಿಕೆಟ್ ಕೀಪರ್ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ನೀಡಲಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿತ್ತು. ಸಾಲದ್ದಕ್ಕೆ ಟೀಮ್ ಇಂಡಿಯಾ ವಿಶ್ವಕಪ್ ಸೆಮಿಫೈನಲ್ನಲ್ಲೇ ಹೊರ ಬಿದ್ದಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬುಧವಾರ (ಜುಲೈ 10) ನಡೆದ ನ್ಯೂಜಿಲೆಂಡ್-ಭಾರತ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ 18 ರನ್ ರೋಚಕ ಗೆಲುವನ್ನಾಚರಿಸಿತು. ತಂಡದ ಗೆಲುವಿಗಾಗಿ ರವೀಂದ್ರ ಜಡೇಜಾ ಮತ್ತು ಧೋನಿ ಸಾಕಷ್ಟು ಹೋರಾಟ ನಡೆಸಿದರಾದರೂ ಅದಕ್ಕೆ ಫಲ ಲಭಿಸಿರಲಿಲ್ಲ. ಪಂದ್ಯ ಸೋಲುತ್ತಲೇ ಧೋನಿ ಭಾವುಕರಾಗಿದ್ದು ಮೈದಾನದಲ್ಲಿ ಕಂಡು ಬಂದಿತ್ತು.
ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲವಲ್ಲ ಎಂಬ ನಿರಾಸೆ ಅನುಭವಿಸುತ್ತಿರುವ ಧೋನಿಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಟ್ವಿಟರ್ ಮೂಲಕ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ಪಂದ್ಯದ ಸೋಲಿನಿಂದ ಧೃತಿಗೆಡಬೇಡಿ. ನಿವೃತ್ತಿ ಬಗ್ಗೆ ಯೋಚಿಸಲೇಬೇಡಿ ಎಂದು ಮಂಗೇಶ್ಕರ್ ವಿನಂತಿಸಿಕೊಂಡಿದ್ದಾರೆ.
ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಬಳಿಕ ಧೋನಿಗೆ ಟ್ವೀಟ್ ಮಾಡಿರುವ ಲತಾ, 'ಧೋನಿಯವರಿಗೆ ನಮಸ್ಕಾರ, ನೀವು ನಿವೃತ್ತಿ ನೀಡಲಿದ್ದೀರಿ ಎಂಬ ವಿಚಾರವನ್ನು ನಾನೀ ದಿನಗಳಲ್ಲಿ ಕೇಳುತ್ತಿದ್ದೇನೆ. ದಯವಿಟ್ಟು ನಿವೃತ್ತಿ ಬಗ್ಗೆ ಯೋಚಿಸಬೇಡಿ. ದೇಶಕ್ಕೆ ನಿಮ್ಮ ಅಗತ್ಯವಿದೆ. ನಾನೂ ವಿನಂತಿಸುತ್ತಿದ್ದೇನೆ; ನಿವೃತ್ತಿ ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಬೇಡಿ' ಎಂದು ಬರೆದುಕೊಂಡಿದ್ದಾರೆ.
ಭಾರತದ ಇನ್ನಿಂಗ್ಸ್ನ 48.3ನೇ ಓವರ್ನಲ್ಲಿ ಧೋನಿ, ಮಾರ್ಟಿನ್ ಗಪ್ಟಿಲ್ ಥ್ರೋಗೆ ರನ್ ಔಟ್ ಆಗುವ ಮೊದಲು ಭಾರತ ಗೆಲುವಿನ ನಿರೀಕ್ಷೆಯನ್ನಿಟ್ಟುಕೊಂಡಿತ್ತು. ಆದರೆ ಗಪ್ಟಿಲ್ ಬುಲೆಟ್ ಥ್ರೋ ಭಾರತದ ಫೈನಲ್ ಆಸೆಗೆ ತಣ್ಣೀರೆರಚಿತ್ತು. ಮಾರ್ಟಿನ್ ಎಸೆದ ಚೆಂಡು ಸೀದ ವಿಕೆಟ್ಗೆ ಬಡಿದಿತ್ತು. ಧೋನಿ ಔಟ್ ಆಗಿದ್ದರು. ಆ ವೇಳೆ ಧೋನಿ 50 ರನ್ ಗಳಿಸಿದ್ದರು.