
ಲಂಡನ್, ಜುಲೈ 12: ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಎದುರು 18 ರನ್ಗಳ ಸೋಲಿನ ಆಘಾತ ಅನುಭವಿಸಿತ್ತು. ಪಂದ್ಯ ಮುಗಿದು ಒಂದು ದಿನದ ಬಳಿಕ ಭಾರತದ ಉಪನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ತಂಡದ ಸೋಲಿನಿಂದ ಮನಸ್ಸು ಭಾರವಾಗಿದೆ ಎಂದು ಶರ್ಮಾ ಹೇಳಿಕೊಂಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಜುಲೈ 11ರ ರಾತ್ರಿ ಟ್ವೀಟ್ ಮಾಡಿರುವ ರೋಹಿತ್, 'ಒಂದು ತಂಡವಾಗಿ ನಾವು ಪ್ರಮುಖ ಪಂದ್ಯವನ್ನ ಗೆಲ್ಲುವಲ್ಲಿ ವಿಫಲಗೊಂಡೆವು. ನೆನ್ನೆ (ಜುಲೈ 10) 30 ನಿಮಿಷಗಳ ದುರ್ಬಲ ಕ್ರಿಕೆಟ್ ಆಟ, ನಮ್ಮ ಕಪ್ ಅವಕಾಶವನ್ನೇ ಕಸಿದುಕೊಂಡಿತು. ನನ್ನ ಹೃದಯ ಭಾರವಾಗಿದೆ. ನೀವೂ ಇದೇ ಸ್ಥಿತಿಯಲ್ಲಿದ್ದೀರಿ ಎಂದು ಗೊತ್ತಿದೆ' ಎಂದು ಕ್ರಿಕೆಟ್ ಅಭಿಮಾನಿಗಳನ್ನುದ್ದೇಶಿಸಿ ಬರೆದುಕೊಂಡಿದ್ದರು.
ಅದೇ ಟ್ವೀಟಿನ ಮುಂದಿನ ಸಾಲುಗಳಲ್ಲಿ, 'ತವರು ನೆಲವಲ್ಲದಿದ್ದರೂ ಅಲ್ಲಿ ನಿಮ್ಮಿಂದ ದೊರೆತ ಬೆಂಬಲ ನಂಬಲಾಗದ್ದು. ನಾವು ಆಡುವಾಗೆಲ್ಲ ಯುನೈಟೆಡ್ ಕಿಂಗ್ಡಮ್ (ಯುಕೆ) ತುಂಬೆಲ್ಲ ನೀಲಿಬಣ್ಣ ಬಳಿದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಹಿಟ್ಮ್ಯಾನ್ ಶರ್ಮಾ ಬರೆದಿದ್ದಾರೆ.
ಮಂಗಳವಾರ (ಜುಲೈ 9) ಆರಂಭಗೊಂಡು ಬುಧವಾರದ (ಜುಲೈ 10) ವರೆಗೂ ಮುಂದುವರೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಟಾಪ್ ಬ್ಯಾಟಿಂಗ್ ಆರ್ಡರ್ ನಲ್ಲಿನ ವೈಫಲ್ಯದಿಂದ ಮುಖಭಂಗ ಅನುಭವಿಸುವಂತಾಗಿತ್ತು. ಪಂದ್ಯಾರಂಭದಲ್ಲೇ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಕೇವಲ 1 ರನ್ಗೆ ಔಟ್ ಆಗಿದ್ದು ತಂಡದ ಟ್ರೋಫಿ ಕನಸನ್ನು ನೆಲಕ್ಕೆ ಕೊಡವಿತ್ತು.