
ಜೊಹಾನ್ಸ್ಬರ್ಗ್, ಜುಲೈ 13: ಐಸಿಸಿ ವಿಶ್ವಕಪ್ 2019ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ತನಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಮರಳಲು ಮನಸ್ಸಿದೆ ಎಂದಿದ್ದರು. ಇದಕ್ಕೆ ಕ್ರಿಕೆಟ್ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು. ಆದರೆ ಭಾರತದ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಎಬಿಡಿ ಬೆಂಬಲಕ್ಕೆ ನಿಂತಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಎಬಿಡಿ ಬೆಂಬಲಿಸಿ ಮಾತನಾಡಿರುವ ಕೊಹ್ಲಿ, ದುರದೃಷ್ಟಕರವಾಗಿ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ನಿರಾಶೆ ಅನುಭವಿಸಿತು. ಆದರೆ ಏನೇ ಇರಲಿ, ಎಬಿ ಡಿವಿಲಿಯರ್ಸ್ ಅತ್ಯಂತ ಪ್ರಮಾಣಿಕ ಮತ್ತು ಬದ್ಧ ವ್ಯಕ್ತಿ ಎಂದಿದ್ದಾರೆ. ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ, ಎಬಿಡಿ ಕ್ರಿಕೆಟ್ನಲ್ಲಿ ರತ್ನದಷ್ಟು ಉತ್ತಮ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.
ಐಪಿಎಲ್ ತಂಡದ ಸಹ ಆಟಗಾರ ಎಬಿಡಿ ಬೆಂಬಲಕ್ಕೆ ನಿಂತಿರುವ ಕೊಹ್ಲಿ. 'ನನ್ನ ಸಹೋದರೆನೆ, ನೀನೆಷ್ಟು ಪ್ರಮಾಣಿಕ ಮತ್ತು ಬದ್ಧ ವ್ಯಕ್ತಿ ಅನ್ನೋದು ಗೊತ್ತು. ನಿನಗೆ ಹೀಗಾಗಿದ್ದು ದುರದೃಷ್ಟಕರ. ನಾವು ನಿನ್ನ ಬೆಂಬಲಕ್ಕಿದ್ದೇವೆ. ನಾನು ಮತ್ತು ಪತ್ನಿ ಅನುಷ್ಕಾಳ ಬೆಂಬಲ ಯಾವತ್ತಿಗೂ ನಿನ್ನೊಂದಿಗಿದೆ' ಎಂದಿದ್ದಾರೆ.
ಇನ್ನೊಂದೆಡೆ ಸಿಕ್ಸರ್ ಕಿಂಗ್ ಯುವರಾಜ್, 'ಕ್ರಿಕೆಟ್ ಜಗತ್ತಿನ ದಂತಕತೆ ಮತ್ತು ನನ್ನ ಪ್ರೀತಿಯ ಗೆಳೆಯನೆ, ನೀನೊಬ್ಬ ಅತ್ಯಂತ ಒಳ್ಳೆಯ ವ್ಯಕ್ತಿ. ಕ್ರಿಕೆಟ್ ರಂಗದಲ್ಲಿ ನೀನು ರತ್ನವಿದ್ದಂತೆ. ನೀನಿಲ್ಲದೆ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲಲು ಅವಕಾಶವಿಲ್ಲ. ಯಾರೂ ನಿನ್ನನ್ನು ತಂಡದಲ್ಲಿ ಪರಿಗಣಿಸದಿರುವುದರಿಂದ ಈ ಬಾರಿಯ ಸೋಲು ನಿನ್ನ ಸೋಲಲ್ಲ, ನಿನ್ನ ದೇಶದ ಸೋಲು' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮೊದಲ ಮುಖಾಮುಖಿಗೂ ಮುನ್ನ ಎಬಿಡಿ, ನಿವೃತ್ತಿ ವಾಪಸು ಪಡೆದು ಆಫ್ರಿಕಾ ತಂಡ ಸೇರಲು ಬಯಸಿದ್ದರು. ಇದಕ್ಕೆ ಟೀಕೆ ವ್ಯಕ್ತವಾಗಿತ್ತು. ಈ ಟೀಕೆಗಳಿಗೆಲ್ಲ ಶುಕ್ರವಾರ (ಜುಲೈ 12) ಎಬಿಡಿ ಸ್ಪಷ್ಟನೆ ನೀಡಿದ್ದರು. ವಿಶ್ವಕಪ್ ವೇಳೆ ತಂಡದ ಪ್ರದರ್ಶನಕ್ಕೆ ತೊಂದರೆಯಾಗಬಾರದು ಎಂದು ಸುಮ್ಮನಿದ್ದೆ, ಆದರೆ ಈಗ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಡಿವಿಲಿಯರ್ಸ್ ಆಗ ತಿಳಿಸಿದ್ದರು.
ನನ್ನ ಹೆಂಡತಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದ್ದೆ. ಆದರೆ ವಿಶ್ವಕಪ್ ಹೊತ್ತಿನಲ್ಲಿ ತಂಡಕ್ಕೆ ನನ್ನ ಅಗತ್ಯ ಬೀಳಬಹುದು ಅನ್ನಿಸಿ, ರಾಷ್ಟ್ರೀಯ ತಂಡಕ್ಕೆ ನನ್ನ ಅಗತ್ಯವಿದ್ದರೆ ಸೇವೆ ನೀಡಲು ಸಿದ್ಧ ಎಂದಿದ್ದೆ ಹೊರತು ಬೇರೇನೂ ದುರಾಸೆಯಿರಲಿಲ್ಲ, ಇದಕ್ಕಾಗಿ ನಾನು ಯಾರನ್ನೂ ಒತ್ತಾಯಿಸಿರಲಿಲ್ಲ ಎಂದು ಹಿಂದಿನ ವಿವಾದಕ್ಕೆ ಎಬಿಡಿ ವಿವರಣೆ ಒದಗಿಸಿದ್ದರು.