ರೋಹಿತ್ ಶರ್ಮಾರ ಆಕ್ರಮಣಕಾರಿ ನಾಯಕತ್ವದ ಜೊತೆಗೆ ವಿರಾಟ್ ಕೊಹ್ಲಿಯ ಮತ್ತೊಂದು ಸಮಯೋಚಿತ ಶತಕವು 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಲು ಭಾರತ ನೆರವಾಯಿತು.
ಸ್ಟಾರ್ ಸ್ಪೋರ್ಟ್ಸ್ ಶೋ 'ಫಾಲೋ ದಿ ಬ್ಲ್ಯೂಸ್' ಜೊತೆ ಮಾತನಾಡಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೆರ್ ಹುಸೇನ್, ಭಾರತ ತಂಡದ ರೋಹಿತ್ ಶರ್ಮಾ ನಾಯಕತ್ವ ಮತ್ತು ಬ್ಯಾಟಿಂಗ್ ಅನ್ನು ಶ್ಲಾಘಿಸಿದರೆ, ವಿರಾಟ್ ಕೊಹ್ಲಿಯ ಶತಕವನ್ನು ಮುಕ್ತಕಂಠದಿಂದ ಹೊಗಳಿದರು.

ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ರನ್ ಚೇಸಿಂಗ್ನಲ್ಲಿ ಅದ್ಭುತವಾಗಿದ್ದಾರೆ. ಏಕೆಂದರೆ ಅವರು ಯಾವಾಗಲೂ ಸನ್ನಿವೇಶವನ್ನು ಅರಿತು ಆಡುತ್ತಾರೆ. ಹೀಗಾಗಿಯೇ ಅವರು ಚೇಸಿಂಗ್ ಮಾಸ್ಟರ್ ಎನಿಸಿಕೊಳ್ಳುತ್ತಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸೆರ್ ಹುಸೇನ್ ಹೇಳಿದರು.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಲು ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 103 ರನ್ಗಳಿಂದ ತಮ್ಮ 48ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.
"ವಿರಾಟ್ ಕೊಹ್ಲಿ ಯಾವಾಗಲೂ ಸನ್ನಿವೇಶಕ್ಕೆ ತಕ್ಕಂತೆ ಆಡುತ್ತಾರೆ ಮತ್ತು ಅದಕ್ಕಾಗಿಯೇ ಅವರು ರನ್ ಚೇಸ್ನಲ್ಲಿ ಅದ್ಭುತವಾಗಿದ್ದಾರೆ. ಅವನು ತನ್ನ ಮುಂದೆ ಇರುವ ಪರಿಸ್ಥಿತಿಯನ್ನು ನೋಡುತ್ತಾನೆ ಮತ್ತು ಸ್ಟ್ರೈಕ್ ರೇಟ್ನಿಂದ ಹೆಚ್ಚು ಹೊರಗುಳಿಯುವುದಿಲ್ಲ. ಏಕೆಂದರೆ ಎಂದಿಗೂ ಬಾಲ್ಗಳನ್ನು ವೇಸ್ಟ್ ಮಾಡುವುದಿಲ್ಲ," ಎಂದು ನಾಸೆರ್ ಹುಸೇನ್ ತಿಳಿಸಿದರು.

"ಈ ರೀತಿಯ ಪಿಚ್ನಲ್ಲಿ ಅವರು ಇನ್ನೊಂದು ಗೇರ್ಗೆ ಹೋಗಲು ಬಯಸಿದರೆ, ಅವರು 350 ಟಾರ್ಗೆಟ್ ಬೆನ್ನಟ್ಟುತ್ತಿದ್ದರೆ, ವಿರಾಟ್ ಕೊಹ್ಲಿ ಮತ್ತೊಂದು ಗೇರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗಾಗ ಅಂತಹ ಆಟಗಳಿಂದ ಭಾರತವನ್ನು ಗೆಲುವಿನ ದಡ ತಲುಪಿಸಿದ್ದಾರೆ," ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹೇಳಿದರು.
ಇನ್ನು ನಾಯಕ ರೋಹಿತ್ ಶರ್ಮಾ ಅವರ ವೈಟ್-ಬಾಲ್ ದಾಖಲೆಯು ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ. ಭಾರತದ ಅಗ್ರ-ಮೂವರು ಬ್ಯಾಟರ್ಗಳು ಎದುರಾಳಿ ಬೌಲರ್ಗಳನ್ನು ಹೆಚ್ಚಿನ ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಹುಸೇನ್ ಒತ್ತಿ ಹೇಳಿದರು.
ಸದ್ಯ ನಡೆಯುತ್ತಿರುವ 2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ಸತತ ನಾಲ್ಕು ಗೆಲುವುಗಳನ್ನು ದಾಖಲಿಸಿದೆ ಮತ್ತು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

"ನಾನು ಬಹಳ ಸಮಯದಿಂದ ಯೋಚಿಸಿದ್ದೇನೆ. ರೋಹಿತ್ ಶರ್ಮಾ ಹಿಂದೆಂದೂ ಕಂಡಿರದ ಅತ್ಯುತ್ತಮ ಬಿಳಿ ಬಾಲ್ ಬ್ಯಾಟರ್ಗಳಲ್ಲಿ ಒಬ್ಬರು. ಅವರ ದಾಖಲೆಯು ಅತ್ಯುತ್ತಮವಾಗಿದೆ, ಅದನ್ನು ವಿಶ್ವಕಪ್ಗಳಲ್ಲಿ ಮಾಡಿದ್ದಾರೆ. ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಆಡುತ್ತಿರುವ ರೀತಿ ನೋಡಿದರೆ, ಎದುರಾಳಿ ಅಗ್ರ ಕ್ರಮಾಂಕದ ಬೌಲರ್ಗಳನ್ನು ಒತ್ತಡಕ್ಕೆ ಸಿಲುಕಿಸುತ್ತದೆ," ಎಂದು ನಾಸೆರ್ ಹುಸೇನ್ ಅಭಿಪ್ರಾಯಪಟ್ಟರು.
ಬಾಂಗ್ಲಾದೇಶ ವಿರುದ್ಧದ ಗೆಲುವಿನ ನಂತರ, ಭಾರತವು ನ್ಯೂಜಿಲೆಂಡ್ ವಿರುದ್ಧದ ಪಂದ್ಯದತ್ತ ಗಮನವನ್ನು ಹರಿಸಲಿದೆ. ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.