ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡುತ್ತಿದೆ. ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 8 ವಿಕೆಟ್ಗಳ ಅಂತರದ ಭಾರೀ ಸೋಲು ಅನುಭವಿಸಿದ್ದು ಈ ಮೂಲಕ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಅನುಭವಿಸಿ ಟೂರ್ನಿಯಿಂದ ಹೊರಬೀಳುವ ಅಂಚಿನಲ್ಲಿದೆ. ಪ್ರಸ್ತುತ ಇಂಗ್ಲೆಂಡ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿತ್ತು. ಆದರೆ ಮತ್ತೊಮ್ಮೆ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಹೀನಾಯ ಪ್ರದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಶ್ರೀಲಂಕಾದ ಬೌಲಿಂಗ್ ದಾಳಿಗೆ ಬೆದರಿದ ಇಂಗ್ಲೆಂಡ್ ತಂಡ ಕೇವಲ 156 ರನ್ಗಳನ್ನು ಕಲೆಹಾಕಿದ್ದು ಇದನ್ನು ಶ್ರೀಲಂಕಾ ಕೇವಲ ಎರಡು ವಿಕೆಟ್ ಕಳೆದುಕೊಂಡು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.

ಇದೀಗ ಇಂಗ್ಲೆಂಡ್ ತಂಡ ವಿಶ್ವಕಪ್ನಲ್ಲಿ ನೀಡುತ್ತಿರುವ ಪ್ರದರ್ಶನಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಅಲ್ಲದೆ ತಂಡದ ನಾಯಕ ಜೋಸ್ ಬಟ್ಲರ್ ಅವರ ವೈಯಕ್ತಿಕ ಪ್ರದರ್ಶನ ಹಾಗೂ ನಾಯಕತ್ವದ ಬಗ್ಗೆಯೂ ಸಾಕಷ್ಟು ಟೀಕೆಗಳು ಪ್ರಶ್ನೆಗಳು ಎದುರಾಗುತ್ತಿದೆ. ಈ ವಿಚಾರವಾಗಿ ಸ್ವತಃ ಜೋಸ್ ಬಟ್ಲರ್ ಪಂದ್ಯದ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿದ್ದು ನಾಯಕನಾಗಿ ತನ್ನ ಮೇಲೆ ತನಗೆ ಸಾಕಷ್ಟು ಆತ್ಮವಿಶ್ವಾಸ ಹಾಗೂ ನಂಬಿಕೆಯಿದೆ ಎಂದಿರುವ ಜೋಸ್ ಬಟ್ಲರ್ ಅಂತಿಮವಾಗಿ ನಿರ್ಧಾರಗಳು ಮಂಡಳಿಯ ಕೈಯಲ್ಲಿದೆ ಎಂದಿದ್ದಾರೆ.
"ಖಂಡಿತವಾಗಿಯೂ ನಾಯಕತ್ವ ಯಾವಾಗಲೂ ಪ್ರಶ್ನೆಗೆ ಒಳಗಾಗುತ್ತದೆ. ನಿಮ್ಮ ತಂಡದ ಆಟಗಾರರಿಂದ ಅತ್ಯುತ್ತಮ ಪ್ರದರ್ಶನವನ್ನು ಹೇಗೆ ಪಡೆಯಬೇಕು, ಸೂಕ್ತವಾದ ದಾರಿಯಲ್ಲಿ ತಂಡ ಸಾಗುವಂತೆ ಹೇಗೆ ಮಾಡಬೇಕು ಎನ್ನುವುದು ನಿಮಗೆ ಗೊತ್ತಿರಬೇಕು. ನನಗೆ ತಂಡದ ನಾಯಕನಾಗಿ ಮುನ್ನಡೆಸುವವನಾಗಿ ಅದಕ್ಕಿಂತಲೂ ಹೆಚ್ಚಿನದಾಗಿ ಓರ್ವ ಆಟಗಾರನಾಗಿ ನನ್ನ ಮೇಲೆ ಸಾಕಷ್ಟು ನಂಬಿಕೆ ಹಾಗೂ ವಿಶ್ವಾಸವಿದೆ. ಆದರೆ ಇನ್ನು ಕೂಡ ನಾಯಕನಾಗಿ ಮುಂದುವರಿಯುತ್ತೀರಾ ಎನ್ನುವ ಪ್ರಶ್ನೆ ಬಂದರೆ ಅದು ನನ್ನ ಬಳಿಯಿಲ್ಲ. ಅದನ್ನು ಮೇಲಿನ ಸ್ಥಾನದಲ್ಲಿರುವುವರು ನಿರ್ಧರಿಸುತ್ತಾರೆ" ಎಂದಿದ್ದಾರೆ ಜೋಸ್ ಬಟ್ಲರ್.
ಈ ಬಾರಿಯ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಹೀನಾಯ ಸೋಲು ಅನುಭವಿಸಿದೆ. ಬಾಂಗ್ಲಾದೇಶ ವಿರುದ್ಧ ಮಾತ್ರವೇ ತನ್ನ ಏಕೈಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಪಂದ್ಯವನ್ನು ಇಂಗ್ಲೆಂಡ್ ಭಾರತದ ವಿರುದ್ಧ ಆಡಲಿದ್ದು ಈ ಪಂದ್ಯ ಮುಂದಿನ ಭಾನುವಾರ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ.