ಭಾನುವಾರ, ಅಕ್ಟೋಬರ್ 29ರಂದು ಲಕ್ನೋ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನ 29ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತ ತಂಡ 100 ರನ್ಗಳ ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇನ್ನು 2023ರ ಏಕದಿನ ವಿಶ್ವಕಪ್ನ ಪ್ರತಿ ಪಂದ್ಯದ ನಂತರ, ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಅತ್ಯುತ್ತಮ ಫೀಲ್ಡರ್ಗಾಗಿ ವಿಶಿಷ್ಟ ಪದಕ ನೀಡುವುದನ್ನು ಪ್ರಾರಂಭಿಸಿದೆ.
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಈಗಾಗಲೇ ಈ ಅತ್ಯುತ್ತಮ ಫೀಲ್ಡರ್ಗೆ ನೀಡುವ ಪದಕವನ್ನು ಗೆದ್ದಿದ್ದಾರೆ.

ಭಾನುವಾರದಂದು ಭಾರತ ತಂಡದ ಸತತ ಆರನೇ ಗೆಲುವಿನ ಬಳಿಕ, ವಿಕೆಟ್-ಕೀಪರ್ ಕೆಎಲ್ ರಾಹುಲ್ ಎರಡನೇ ಬಾರಿ ಅತ್ಯುತ್ತಮ ಫೀಲ್ಡರ್ ಪದಕ ಗೆದ್ದ ಮೊದಲ ಭಾರತೀಯ ಕ್ರಿಕೆಟಿಗರೆನಿಸಿದರು.
ಭಾರತ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ನ ಎಲ್ಲಾ ಬ್ಯಾಟರ್ಗಳು ಲೆಗ್-ಬಿಫೋರ್, ಬೌಲ್ಡ್ ಅಥವಾ ಸ್ಟಂಪ್ಡ್ ಆಗಿದ್ದರಿಂದ ಇಂಗ್ಲೆಂಡ್ ವಿರುದ್ಧ ಕ್ಯಾಚ್ ಪಡೆದ ಏಕೈಕ ಭಾರತೀಯ ಆಟಗಾರನೆಂದರೆ ಅದು ಕೆಎಲ್ ರಾಹುಲ್.
ಪಂದ್ಯದ ನಂತರ ಭಾರತ ತಂಡದ ಮ್ಯಾನೇಜ್ಮೆಂಟ್ ಮತ್ತೊಮ್ಮೆ ಕೆಎಲ್ ರಾಹುಲ್ ಹೆಸರನ್ನು "ಅತ್ಯುತ್ತಮ ಫೀಲ್ಡರ್' ಎಂದು ಘೋಷಿಸಿತು. ಬದಲಿ ಫೀಲ್ಡರ್ ಇಶಾನ್ ಕಿಶನ್, ವೇಗಿ ಮೊಹಮ್ಮದ್ ಸಿರಾಜ್ ಮತ್ತು ಕೆಎಲ್ ರಾಹುಲ್ ಪ್ರಶಸ್ತಿಗೆ ಮೂವರು ಸ್ಪರ್ಧಿಗಳಾಗಿದ್ದರು.
ಅತ್ಯುತ್ತಮ ಫೀಲ್ಡರ್ ಘೋಷಣೆ ಮಾಡಲು, ಫೀಲ್ಡಿಂಗ್ ಕೋಚ್ ದಿಲೀಪ್ ಟಿ.ಕೆ ಅವರು ಇಡೀ ಭಾರತ ತಂಡದ ಆಟಗಾರರನ್ನು ಡ್ರೆಸ್ಸಿಂಗ್ ರೂಮ್ನಿಂದ ಹೊರಗೆ ಕರೆದೊಯ್ದರು ಮತ್ತು ನಂತರ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಎಲ್ಲಾ ಫ್ಲಡ್ಲೈಟ್ಗಳು ಆರಿಸಲಾಯಿತು.
ಆಗ ರಾಹುಲ್ ಅವರ ಹೆಸರು ಮತ್ತು ಜೆರ್ಸಿ ಸಂಖ್ಯೆ (1) ಹೊಂದಿರುವುದನ್ನು ಮಾತ್ರ ಲೈಟ್ನಿಂದ ಬೆಳಗಿಸುವ ಮೂಲಕ ಅವರ ಹೆಸರನ್ನು ಅತ್ಯುತ್ತಮ ಫೀಲ್ಡರ್ ವಿಜೇತ ಎಂದು ಘೋಷಿಸಲಾಯಿತು.
ಈ ತಿಂಗಳ ಆರಂಭದಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆದ್ದ ನಂತರ ಕೆಎಲ್ ರಾಹುಲ್ಗೆ ಈ ಹಿಂದೆ 'ಅತ್ಯುತ್ತಮ ಫೀಲ್ಡರ್' ಪ್ರಶಸ್ತಿ ನೀಡಲಾಗಿತ್ತು.

"ಈ ಅತ್ಯುತ್ತಮ ಫೀಲ್ಡರ್ ಪದಕವು ಕೇವಲ ಅಂಕಿಅಂಶಗಳ ಬಗ್ಗೆ ಅಲ್ಲ. ಇದು ಕೇವಲ ಒಂದು ಉತ್ತಮ ಕ್ಯಾಚ್ ಅಥವಾ ಕೆಲವು ರನ್ ಉಳಿಸುವುದರ ಬಗ್ಗೆ ಅಲ್ಲ. ಇದು ಮೈದಾನದಲ್ಲಿ ಉತ್ಸಾಹವನ್ನು ತರುತ್ತದೆ. ಮತ್ತು ಆ ಒಂದು ಕ್ರಿಯೆಯು ಪಂದ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು," ಎಂದು ದಿಲೀಪ್ ಕೆ.ಟಿ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು.
ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ 87 ರನ್ ಗಳಿಸಿದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ನಾಲ್ಕನೇ ವಿಕೆಟ್ಗೆ ನಿರ್ಣಾಯಕ 91 ರನ್ಗಳ ಜೊತೆಯಾಟದ ಮೂಲಕ ಕೆಎಲ್ ರಾಹುಲ್ ಬ್ಯಾಟ್ನೊಂದಿಗೆ 58 ಎಸೆತಗಳಲ್ಲಿ 39 ರನ್ ಗಳಿಸಿದರು.
"ಇದು ತಂಡದಲ್ಲಿ ಎಲ್ಲರೂ ಹೆಚ್ಚಿನ ಪಾತ್ರವನ್ನು ತೋರಿಸಿದ ಆಟವಾಗಿತ್ತು. ಸಮಯವು ಕಠಿಣವಾಗಿದ್ದಾಗ, ನಮ್ಮ ಎಲ್ಲಾ ಅನುಭವಿ ಆಟಗಾರರು ಸರಿಯಾದ ಸಮಯದಲ್ಲಿ ಎದ್ದುನಿಂತು ನಮಗೆ ಗೆಲುವು ತಂದಿದ್ದಾರೆ. ಪಂದ್ಯಾವಳಿಯು ನಮಗೆ ಹೇಗೆ ಸಾಗಿದೆ ಎಂಬುದನ್ನು ನೋಡಿದರೆ, ಮೊದಲ ಐದು ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ್ದೆವು, ನಾವು ಇಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕಾಗಿತ್ತು," ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ರೋಹಿತ್ ಶರ್ಮಾ ಹೇಳಿದರು.