ಜಿಂಬಾಬ್ವೆಯಲ್ಲಿ ನಡೆಯುತ್ತಿರುವ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ನ ಉಳಿದ ಪಂದ್ಯಗಳಿಗಾಗಿ ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.
ಅನುಭವಿ ವೇಗದ ಬೌಲರ್ ದುಷ್ಮಂತ ಚಮೀರಾ ಅವರು ವಿಶ್ವಕಪ್ ಅರ್ಹತಾ ಪಂದ್ಯಾವಳಿಗೆ ಮುನ್ನ ಭುಜದ ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ಪುನರ್ವಸತಿಗಾಗಿ ತವರಿಗೆ ಮರಳಲಿದ್ದಾರೆ. ಇನ್ನುಳಿದ ಸೂಪರ್ 6 ಹಂತಕ್ಕೆ ಚಮೀರಾ ಬದಲಿಗೆ ದಿಲ್ಶಾನ್ ಮಧುಶಂಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯ ತಾಂತ್ರಿಕ ಸಮಿತಿಯು ಆಟಗಾರರ ಬದಲಿಗೆ ಅನುಮತಿ ನೀಡಿದೆ. ಇದೀಗ ಶ್ರೀಲಂಕಾ ತಂಡದಲ್ಲಿ ಗಾಯದ ಕಾರಣದಿಂದಾಗಿ ಹೊರಗುಳಿಯಲಿರುವ ದುಷ್ಮಂತ ಚಮೀರಾ ಬದಲಿಗೆ ದಿಲ್ಶಾನ್ ಮಧುಶಂಕ ಅವರನ್ನು ಆಯ್ಕೆ ಮಾಡಲು ಒಪ್ಪಿಗೆ ನೀಡಿದೆ.
ಆಟಗಾರನ ಬದಲಿಗೆ ಮತ್ತೊಬ್ಬ ಆಟಗಾರನನ್ನು ಅಧಿಕೃತವಾಗಿ ತಂಡಕ್ಕೆ ಸೇರಿಸುವ ಮೊದಲು ಐಸಿಸಿ ಟೂರ್ನಿ ತಾಂತ್ರಿಕ ಸಮಿತಿಯ ಅನುಮೋದನೆಯ ಅಗತ್ಯವಿದೆ.
"ದುಷ್ಮಂತ ಚಮೀರಾ ಅವರು ಕ್ವಾಲಿಫೈಯರ್ಗಳ ಗುಂಪು ಹಂತದಲ್ಲಿ ಶ್ರೀಲಂಕಾ ತಂಡದ ಮೊದಲ ಪಂದ್ಯಕ್ಕೆ ಮುನ್ನ ಅಭ್ಯಾಸ ಮಾಡುವಾಗ ಬಲ ಭುಜದ ಸ್ನಾಯು ಗಾಯಕ್ಕೆ ತುತ್ತಾದರು ಮತ್ತು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಸೂಪರ್ ಸಿಕ್ಸ್ ಹಂತದ ಪಂದ್ಯಗಳಿಗೆ ಆಡಲು ಈ ಬೌಲರ್ ಲಭ್ಯವಿರುವುದಿಲ್ಲ," ಎಂದು ಶ್ರೀಲಂಕಾ ತಂಡದ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
31 ವರ್ಷದ ದುಷ್ಮಂತ ಚಮೀರಾ ಶ್ರೀಲಂಕಾ ತಂಡದ ಪರ 50 ಏಕದಿನ ವಿಕೆಟ್ಗಳನ್ನು ಕಬಳಿಸಿದ್ದಾರೆ ಮತ್ತು ಇತ್ತೀಚಿನ ವರ್ಷಗಳಲ್ಲಿ ತಂಡದ ವೈಟ್-ಬಾಲ್ ಪಂದ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಪಂದ್ಯಗಳಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯಲು ದ್ವೀಪ ರಾಷ್ಟ್ರವು ಚಮೀರಾ ಅನುಪಸ್ಥಿತಿಯಿಂದ ಹಿನ್ನಡೆ ಅನುಭವಿಸುವಂತಾಗಿದೆ.
ದುಷ್ಮಂತ ಚಮೀರಾ ಅವರ ಬದಲಿ ಆಟಗಾರನಾಗಿರುವ ದಿಲ್ಶನ್ ಮಧುಶಂಕ ಅವರನ್ನು ಆಯ್ಕೆ ಮಾಡಲಾಗಿದ್ದು, ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಕೇವಲ ಎರಡು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಎಡಗೈ ಬೌಲರ್ ಆಗಿರುವುದರಿಂದ ಶ್ರೀಲಂಕಾ ತಂಡಕ್ಕೆ ಪರಿಣಾಮಕಾರಿಯಾಗಲಿದ್ದಾರೆ.
ಶ್ರೀಲಂಕಾ ತಂಡವು ಕ್ವಾಲಿಫೈಯರ್ನಲ್ಲಿ ಅಗ್ರಸ್ಥಾನ ಪಡೆದಿದೆ ಮತ್ತು ಗುಂಪು ಹಂತದಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದು, ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ಗೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದೆ.
ದಸುನ್ ಶನಕ (ನಾಯಕ), ಕುಸಲ್ ಮೆಂಡಿಸ್ (ಉಪನಾಯಕ/ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಪಾಥುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ವನಿಂದು ಹಸರಂಗ, ಚಮಿಕ ಕರುಣಾರತ್ನೆ, ಕಸುನ್ ರಜಿತ, ಲಹಿರು ಕುಮಾರ, ಮಹೇಶ್ ತೀಕ್ಷಣ, ಮತೀಶ ಪತಿರಣ, ದುಶನ್ ಹೇಮಂತ, ದಿಲ್ಶನ್ ಮಧುಶಂಕ.