ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅದ್ಭುತ ಪ್ರದರ್ಶನ ಮುಂದುವರಿದಿದ್ದು ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎನ್ನುವ ಅಭಿಪ್ರಾಯಕ್ಕೆ ಸಮರ್ಥವಾದ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲಿಯೂ ಟೀಮ್ ಇಂಡಿಯಾ ಈ ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದು ಎದುರಾಳಿಗಳಿಗೆ ನಡುಕಹುಟ್ಟಿಸಿದೆ.
ಟೀಮ್ ಇಂಡಿಯಾದ ಈ ಅದ್ಭುತ ಪ್ರದರ್ಶನದಲ್ಲಿ ಪ್ರಮುಖ ಕೊಡುಗೆ ನೀಡುತ್ತಿರುವ ಆಟಗಾರರಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಒಬ್ಬರು. ಕುಲ್ದೀಪ್ ಸ್ಪಿನ್ ದಾಳಿ ಎದುರಾಇಗಳ ನಿದ್ದೆಗೆಡಿಸಿರುವುದರಲ್ಲಿ ಅನುಮಾನವಿಲ್ಲ. ಇದೇ ಕಾರಣಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಕುಲ್ದೀಪ್ ಯಾದವ್ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ರಶೀದ್ ಲತೀಫ್ ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಬಗ್ಗೆ ಮಾತನಾಡುತ್ತಾ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಈ ಸ್ಪಿನ್ನರ್ ಅತಿ ಹೆಚ್ಚು ವಿಕೆಟ್ ಪಡೆಯುವ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ ಒಟ್ಟು ಐದು ವಿಕೆಟ್ಗಳನ್ನು ಸಂಪಾದಿಸಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
"ಕುಲದೀಪ್ ಎದುರಿಸಲು ಪಾಕಿಸ್ತಾನ ತಂಡ ಭರಪಟ್ಟಂತೆ ಗೋಚರಿಸುತ್ತಿತ್ತು. ಆತನ ಹತ್ತು ಓವರ್ಗಳನ್ನು ಆಡಿ ಮುಗಿಸುವ ಭರದಲ್ಲಿದಿದ್ದು ಸ್ಪಷ್ಟವಾಗಿತ್ತು. ಪಾಕಿಸ್ತಾನದ ಒಬ್ಬ ಬ್ಯಾಟ್ಸ್ಮನ್ ಕೂಡ ಕುಲದೀಪ್ ಯಾದವ್ ಅವರನ್ನು ಗುರಿಯಾಗಿಸಿ ಎದಿರೇಟು ನೀಡಲು ಸಾಧ್ಯವಾಗಲೇ ಇಲ್ಲ. ಅವರಿಗೆ ಈ ಟೂರ್ನಿಯಲ್ಲಿ ಕೆಲ ಪಂದ್ಯಗಳಲ್ಲಿ ವಿಶ್ರಾಂತಿ ನೀಡದೇ ಇದ್ದರೆ ಅವರು ಈ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಲಿದ್ದಾರೆ" ಎಂದಿದ್ದಾರೆ ರಶೀದ್ ಲತೀಫ್.
ಇನ್ನು ಇದೇ ಸಂದರ್ಭದಲ್ಲಿ ರಶೀದ್ ಲತೀಫ್ ಟೀಮ್ ಇಂಡಿಯಾದ ಮತ್ತೋರ್ವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆರ್ ಅಶ್ವಿನ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಈ ವಿಶ್ವಕಪ್ನಲ್ಲಿ ಭಾರತದ ಪರವಾಗಿ ಎಲ್ಲಾ ಪಂದ್ಯಗಳಲ್ಲಿಯೂ ಕಣಕ್ಕಿಳಿಯಬೇಕು ಎಂದಿದ್ದಾರೆ. ಆರ್ ಅಶ್ವಿನ್ ಟೀಮ್ ಇಂಡಿಯಾ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಆಡಿದ್ದು ಒಂದು ವಿಕೆಟ್ ಪಡೆದುಕೊಂಡಿದ್ದರು.
"ಆರ್ ಅಶ್ವಿನ್ ಅವರನ್ನು ಭಾರತ ಆಯ್ಕೆ ಮಾಡದೆ ಇದಿದ್ದು ನನಗೆ ಅಚ್ಚರಿಯುಂಟು ಮಾಡಿತ್ತು. ನನ್ನ ಪ್ರಕಾರ ಭಾರತ ಎಲ್ಲಾ ಪಂದ್ಯಗಳಲ್ಲಿಯೂ ಅಶ್ವಿನ್ ಅವರನ್ನು ಆಡಿಸಬೇಕು. ಅಶ್ವಿನ್ ಆಡಿದ್ದರೆ ಪಾಕಿಸ್ತಾನ ತಂಡ ನಮ್ಮಿಂದ(ಪಾಕಿಸ್ತಾನ ತಂಡದಿಂದ) 190 ರನ್ಗಳಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆಎ ರಶೀದ್ ಲತೀಫ್.
ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ನೆಟ್ರನ್ರೇಟ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಭಾರತ ಮೊದಲ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದ್ದು ಈ ಪಂದ್ಯ ಅಕ್ಟೋಬರ್ 19ರಂದು ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ.