ಟೀಮ್ ಇಂಡಿಯಾ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದ್ದು ಸೆಮಿಫೈನಲ್ನಲ್ಲಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ತಂಡ ಎದುರಾಳಿಯಾಗಿದೆ. ವಿಶ್ವಕಪ್ನಲ್ಲಿ ಭಾರತ ತಂಡ ಈವರೆಗೆ ಅಮೋಘ ಪ್ರದರ್ಶನ ನೀಡಿದ್ದು ಎದುರಾಳಿಗಳನ್ನು ಏಕಪಕ್ಷೀಯವಾಗಿ ಮಣಿಸಿದೆ. ಹಾಗಿದ್ದರೂ ಸೆಮಿಫೈನಲ್ನಲ್ಲಿ ಕಿವಿಸ್ ತಂಡ ಎದುರಾಳೀಯಾಗಿರುವ ಕಾರಣ 2019ರ ಸೆಮಿಫೈನಲ್ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣ ಮುಂದೆ ಸಹಜವಾಗಿಯೇ ಹಾದುಹೋಗುತ್ತದೆ.
ಆದರೆ ಟೀಮ್ ಇಂಡಿಯಾದ ಅಭಿಮಾನಿಗಳು ಈ ಬಾರಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ. ವಿಶ್ವಕಪ್ ಟೂರ್ನಿಯಲ್ಲಿ ಕಾಮೆಂಟೇಟರ್ ಆಗಿರುವ ರವಿ ಶಾಸ್ತ್ರಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನವನ್ನು ಕೊಂಡಾಡಿದ್ದು ಈ ಟೂರ್ನಿಯಲ್ಲಿ ಭಾರತ ಈಗಾಗಲೇ ಒಂದು ಭಾರಿ ನ್ಯೂಜಿಲೆಂಡ್ ತಂಡವನ್ನು ಈ ಟೂರ್ನಿಯಲ್ಲಿ ಮಣಿಸಿದೆ. ಹೀಗಾಗಿ 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಆತಂಕ ಬೇಕಾಗಿಲ್ಲ ಎಂದಿದ್ದಾರೆ ರವಿ ಶಾಸ್ತ್ರಿ.

ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ನಲ್ಲಿ ಭಾರತದ ದಾಖಲೆ ಉತ್ತಮವಾಗಿಲ್ಲ. ಹೀಗಾಗಿ ಈ ಬಗ್ಗೆ ರವಿ ಶಾಸ್ತ್ರಿ ಅವರಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರವಿ ಶಾಸ್ತ್ರಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ 2019ರ ವಿಶ್ವಕಪ್ನ ಸೋಲಿನ ಬಗ್ಗೆ ಸ್ವಲ್ಪವೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದು ಕೇನ್ ವಿಲಿಯಮ್ಸನ್ ಪಡೆಯ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಲಿದೆ ಎಂದಿದ್ದಾರೆ.
"ಇದು ಸೇತುವೆಯ ಕೆಳಗೆ ನೀರಿದ್ದಂತೆ. ಭಾರತ ಆ ಸೋಲನ್ನು ಯಾವ ಕಾರಣಕ್ಕಾಗಿ ಹಿಂದಿರುಗಿ ನೋಡಬೇಕು. ಈ ವಿಶ್ವಕಪ್ನಲ್ಲಿ ನಾವು ಈಗಾಗಲೇ ಒಮ್ಮೆ ಸೋಲಿಸಿದ್ದೇವೆ. ಅದನ್ನೇ ಪುರಾವರ್ತಿಸಲಿದ್ದಾರೆ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ, ಮಾಜಿ ಕೋಚ್ ರವಿ ಶಾಸ್ತ್ರಿ.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮತ್ತೋರ್ವ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದು ಭಾರತ ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯಂತ ಬಲಿಷ್ಠವಾಗಿದೆ ಎಂದಿದ್ದಾರೆ. ಅಲ್ಲದೆ ಈ ಟೂರ್ನಿಯಲ್ಲಿ ಭಾರತ ಯಾವ ದೌರ್ಬಲ್ಯವನ್ನು ಕೂಡ ತೋರಿಸಿಕೊಂಡಿಲ್ಲ ಎಂದಿದ್ದಾರೆ.
"ಭಾರತ ಕಳೆದ ವಿಶ್ವಕಪ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಸೆಮಿ ಫೈನಲ್ನ ಆ ಒಂದು ದಿನ ಭಾರತಕ್ಕೆ ಕೆಟ್ಟ ದಿನವಾಗಿತ್ತು. ಭಾರತದ ಅಗ್ರ ಕ್ರಮಾಂಕ ಹಿನ್ನಡೆ ಅನುಭವಿಸಿತ್ತು. ಆದರೆ ಈ ಬಾರಿ ಭಾರತ ಬಹಳ ಬಲಿಷ್ಠವಾಗಿದೆ. ಇಲ್ಲಿ ಯಾವುದೇ ದೌರ್ಬಲ್ಯಗಳು ಇಲ್ಲ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡ ಧರ್ಮಶಾಲಾದಲ್ಲಿ ಅಕ್ಟೋಬರ್ 22ಕ್ಕೆ ನಡೆದ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಅನುಭವಿ ಮೊಹಮ್ಮದ್ ಶಮಿ 54 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.