ಸೋಮವಾರ, ನವೆಂಬರ್ 6ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನ 38ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 3 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಅವರನ್ನು "ಟೈಮ್ ಔಟ್' ಮೂಲಕ ವಿವಾದಾತ್ಮಕ ರೀತಿಯಲ್ಲಿ ಔಟ್ ಮಾಡಿದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಪ್ರಸಕ್ತ ವಿಶ್ವಕಪ್ನ ತಮ್ಮ ಅಂತಿಮ ಪಂದ್ಯದಿಂದ ಹೊರಬಿದ್ದಿದ್ದಾರೆ.
ಬಾಂಗ್ಲಾದೇಶ ತಂಡವು ವಿಶ್ವಕಪ್ ಪಂದ್ಯಾವಳಿಯ ತಮ್ಮ ಅಂತಿಮ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆದರೆ, ಆಲ್ರೌಂಡರ್ ಶಕೀಬ್ ಅಲ್ ಹಸನ್ ಎಡಗೈನ ತೋರು ಬೆರಳು ಮುರಿತದ ಕಾರಣ ಆ ಪಂದ್ಯಕ್ಕೆ ತಂಡದ ಭಾಗವಾಗಿರುವುದಿಲ್ಲ.

ಈಗಾಗಲೇ ಬಾಂಗ್ಲಾದೇಶ ತಂಡ 2023 ಏಕದಿನ ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದ್ದರೂ, 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಸ್ಥಾನ ಪಡೆಯುವುದಕ್ಕಾಗಿ ಮುಂದಿನ ಪಂದ್ಯ ಗೆಲ್ಲಲು ಹೋರಾಡಬೇಕಿದೆ.
ಕೈ ಬೆರಳಿನ ಗಾಯದ ಸಮಸ್ಯೆಯಿಂದ ಶಕೀಬ್ ಅಲ್ ಹಸನ್ ಎಷ್ಟು ಸಮಯದವರೆಗೆ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿಯಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಆದರೆ, ಅವರ ಅನುಪಸ್ಥಿತಿಯು ಬಾಂಗ್ಲಾದೇಶ ತಂಡದ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಅವಕಾಶಗಳ ಮೇಲೆ ಪರಿಣಾಮ ಬೀರಲಿದೆ. ಆಸೀಸ್ ಸೆಮಿಫೈನಲ್ನಲ್ಲಿ ಸ್ಥಾನ ಪಡೆಯುವ ಭರವಸೆ ಹೊಂದಿದೆ.
ಇನ್ನು ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ, ಬಾಂಗ್ಲಾ ತಂಡದ ಗೆಲುವು ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ 7 ಸ್ಥಾನಕ್ಕಾಗಿ ಹೋರಾಟದಲ್ಲಿ ಜೀವಂತವಾಗಿರಲು ಸಹಾಯ ಮಾಡಿತು.
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಬೌಲಿಂಗ್ನಲ್ಲಿ 57 ರನ್ಗಳಿಗೆ 2 ವಿಕೆಟ್ ಪಡೆದು, ಬ್ಯಾಟಿಂಗ್ನಲ್ಲಿ 82 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ನಜ್ಮುಲ್ ಹೊಸೈನ್ ಶಾಂಟೊ 90 ರನ್ ಗಳಿಸಿದರು. ಇವರಿಬ್ಬರ ಜೋಡಿ 147 ಎಸೆತಗಳಲ್ಲಿ 169 ರನ್ಗಳ ಜೊತೆಯಾಟದ ಮೂಲಕ 280 ರನ್ಗಳ ಯಶಸ್ವಿ ರನ್ ಚೇಸ್ಗೆ ಅಡಿಪಾಯ ಹಾಕಿದರು.
ಆದಾಗ್ಯೂ, ಪಂದ್ಯದ ಫಲಿತಾಂಶವು ಟೈಮ್ ಔಟ್ ವಿವಾದದಿಂದ ಕಳೆದುಹೋಗಿದೆ ಎನ್ನುವುದರಲ್ಲಿ ತಪ್ಪಿಲ್ಲ. ಏಂಜೆಲೊ ಮ್ಯಾಥ್ಯೂಸ್ ಅವರ ಔಟ್ ಎರಡು ತಂಡಗಳ ನಡುವಿನ ತೀವ್ರ ಪೈಪೋಟಿಗೆ ಮತ್ತೊಂದು ಅಧ್ಯಾಯವನ್ನು ಸೇರಿಸಿತು.

ಏಂಜೆಲೊ ಮ್ಯಾಥ್ಯೂಸ್ ಕ್ರೀಸ್ಗೆ ಬಂದು ಅವಧಿ ಮೀರಿದರೂ ಚೆಂಡು ಎದುರಿಸಲು ವಿಫಲವಾದ ನಂತರ, ಟೈಮ್ಡ್ ಔಟ್ ಎಂದು ನಿರ್ಧರಿಸಲಾಯಿತು. ಇದು ಎಲ್ಲಾ ಸ್ವರೂಪಗಳಾದ್ಯಂತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ನಿದರ್ಶನವೆನಿಸಿತು.
ಶಕೀಬ್ ಅಲ್ ಹಸನ್ ಅವರು 25ನೇ ಓವರ್ನ ಎರಡನೇ ಎಸೆತದಲ್ಲಿ ಸದೀರ ಸಮರವಿಕ್ರಮ ವಿಕೆಟ್ ಪಡೆದ ನಂತರ, ಏಂಜೆಲೊ ಮ್ಯಾಥ್ಯೂಸ್ ಕ್ರೀಸ್ಗೆ ಬಂದರು. ಆದರೆ ಅವರು ತಮ್ಮ ಹೆಲ್ಮೆಟ್ನ ಬೆಲ್ಟ್ ಕಿತ್ತುಹೋಗಿರುವುದನ್ನು ಅರಿತು ನಿಗದಿತ ಎರಡು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಲು ವಿಫಲರಾದರು.
ಬ್ಯಾಟರ್ನ ಈ ವಿಳಂಬವು ಬಾಂಗ್ಲಾದೇಶ ತಂಡವನ್ನು ಅಂಪೈರ್ಗೆ ಮೇಲ್ಮನವಿ ಸಲ್ಲಿಸಲು ಪ್ರೇರೇಪಿಸಿತು ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರ ಪುನರಾವರ್ತಿತ ಮನವಿಯ ಹೊರತಾಗಿಯೂ ಅಂಪೈರ್ಗಳು ಔಟ್ ಎಂದು ಎತ್ತಿಹಿಡಿದರು.
ತಲಾ ನಾಲ್ಕು ಅಂಕ ಪಡೆದಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಅಗ್ರ 8ರೊಳಗೆ ಸ್ಥಾನ ಪಡೆಯಬೇಕಾಗಿದೆ.