ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 5ರಂದು ಅಧಿಕೃತವಾಗಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಮುಖ್ಯ ಪಂದ್ಯಾವಳಿಗೂ ಮುನ್ನ ಸದ್ಯ ಎಲ್ಲಾ ಹತ್ತು ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ನಿರತವಾಗಿದ್ದು, ಅದೇ ರೀತಿ ಭಾರತ ಕ್ರಿಕೆಟ್ ತಂಡವು ತನ್ನ ಎರಡನೇ ಅಭ್ಯಾಸ ಪಂದ್ಯಕ್ಕಾಗಿ ತಿರುವನಂತಪುರಂ ತಲುಪಿದೆ. ಮಂಗಳವಾರ, ಅಕ್ಟೋಬರ್ 3ರಂದು ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡ ತನ್ನ ಕೊನೆಯ ಅಭ್ಯಾಸ ಪಂದ್ಯ ಆಡಲಿದೆ.

ವಿರಾಟ್ ಕೊಹ್ಲಿ ತರಾತುರಿಯಲ್ಲಿ ಗುವಾಹಟಿಯಿಂದ ಮುಂಬೈಗೆ ತೆರಳಿದ್ದಾರೆ ಮತ್ತು ಸೋಮವಾರ ತಿರುವನಂತಪುರಂನಲ್ಲಿ ತಂಡವನ್ನು ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಿದೆ.
ಮೂರು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮಗಳು ವಾಮಿಕಾ ಜನಿಸಿದ ನಂತರ, ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವಿಶ್ವಾಸಾರ್ಹ ಮೂಲವು, ವೈಯಕ್ತಿಕ ಕಾರಣಗಳಿಗಾಗಿ ವಿರಾಟ್ ಕೊಹ್ಲಿಯ ನಿರ್ಗಮನವನ್ನು ದೃಢಪಡಿಸಿದೆ ಮತ್ತು ಅವರು ಶೀಘ್ರದಲ್ಲೇ ತಂಡಕ್ಕೆ ಮರಳುತ್ತಾರೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಕ್ರಿಕ್ಬಝ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ತಂಡದ ಉಳಿದ ಆಟಗಾರರು ಕೇರಳದ ತಿರುವನಂತಪುರಂಗೆ ಬಂದಿಳಿಯಲು, ಭಾನುವಾರ ಸಂಜೆ ವಿಶೇಷ ವಿಮಾನದ ಮೂಲಕ ಗುವಾಹಟಿಯಿಂದ ನಾಲ್ಕು ಗಂಟೆಗಳ ಪ್ರಯಾಣ ಮಾಡಿದರು.
ನೆದರ್ಲ್ಯಾಂಡ್ಸ್ ವಿರುದ್ಧದ ಎರಡನೇ ಅಭ್ಯಾಸದ ಪಂದ್ಯಕ್ಕಾಗಿ ಭಾರತ ತಂಡವು ತಿರುವನಂತಪುರಕ್ಕೆ ಇಳಿಯುತ್ತಿದ್ದಂತೆ, ಪ್ರತಿಕೂಲ ಹವಾಮಾನವು ದೊಡ್ಡ ಪ್ರತಿಸ್ಪರ್ಧಿಯಾಗಿದೆ. ಪೂರ್ವದಿಂದ ದಕ್ಷಿಣ ಪ್ರದೇಶದವರೆಗೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡುತ್ತಿದೆ.
ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಆರಂಭಿಕ ಅಭ್ಯಾಸ ಪಂದ್ಯವು ಒಂದೇ ಒಂದು ಎಸೆತ ಕಾಣದೆ ಮಳೆ ಕಾರಣದಿಂದ ರದ್ದುಗೊಂಡಿತ್ತು. ಮುಂಬರುವ ಅಭ್ಯಾಸ ಪಂದ್ಯವು ಇದೇ ರೀತಿಯ ಪರಿಣಾಮ ಎದುರಿಸಬಹುದು ಎಂಬ ಆತಂಕ ಎದುರಾಗಿದೆ.
ಇಲ್ಲಿಯವರೆಗೆ ಮೂರು ಅಭ್ಯಾಸ ಪಂದ್ಯಗಳು ವರುಣ ಅಡ್ಡಿಪಡಿಸಿದ ಕಾರಣ ರದ್ದುಗೊಂಡಿವೆ. ಅವುಗಳಲ್ಲಿ ಎರಡು ತಿರುವನಂತಪುರದಲ್ಲಿ ಸಂಭವಿಸಿವೆ ಎಂಬುದು ಗಮನಾರ್ಹ. ವಿಶೇಷವಾಗಿ ಸೆಪ್ಟೆಂಬರ್ 29ರಂದು ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಘರ್ಷಣೆ.
ಸೆಪ್ಟೆಂಬರ್ 30ರಂದು ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯವನ್ನು ತಲಾ 23-ಓವರ್ಗಳಿಗೆ ಮೊಟಕುಗೊಳಿಸಲಾಯಿತು. ಆದರೆ, ಎರಡನೇ ಇನ್ನಿಂಗ್ಸ್ ನಡೆಯಲು ಮಳೆ ಬಿಡುವು ನೀಡಲಿಲ್ಲ.