ತವರಿನಲ್ಲಿಯೇ ಅಕ್ಟೋಬರ್ 5ರಿಂದ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಇಂದು (ಭಾನುವಾರ, ಸೆಪ್ಟೆಂಬರ್ 3) ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಶ್ರೀಲಂಕಾಕ್ಕೆ ತೆರಳಿ ತಂಡದ ಮ್ಯಾನೇಜ್ಮೆಂಟ್ನೊಂದಿಗೆ ಚರ್ಚೆ ನಡೆಸಿ ತಂಡವನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಜಿತ್ ಅಗರ್ಕರ್ ಅವರು ಏಷ್ಯಾ ಕಪ್ಗೆ ಭಾರತೀಯ ತಂಡವನ್ನು ಪ್ರಕಟಿಸಿದಾಗ, ಏಕದಿನ ವಿಶ್ವಕಪ್ ರೋಸ್ಟರ್ ಇದೇ ಮಾದರಿಯಲ್ಲಿರುತ್ತದೆ ಎಂಬ ಸುಳಿವು ನೀಡಿದ್ದರು.
ಇತ್ತೀಚೆಗೆ ಬಿಸಿಸಿಐ, 2023ರ ಏಷ್ಯಾ ಕಪ್ಗೆ ಆಯ್ಕೆ ಮಾಡಿದ ತಂಡದ ಆಟಗಾರರೇ ಬಹುತೇಕ ಆಯ್ಕೆ ಮಾಡಲಿದೆ. ಏಕದಿನ ವಿಶ್ವಕಪ್ ತಂಡವು 15 ಸದಸ್ಯರನ್ನು ಒಳಗೊಂಡಿರಲಿದ್ದು, ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಲಾಗಿದೆ. ಆದರೆ, ಮತ್ತೆ ಫಿಟ್ ಆಗಿರುವ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.
ಆದರೆ, ಏಷ್ಯಾ ಕಪ್ಗೆ 17 ಸದಸ್ಯರ ತಂಡವನ್ನು ಪ್ರಕಟಿಸಲಾಗಿತ್ತು. ಸಂಜು ಸ್ಯಾಮ್ಸನ್ ಅವರನ್ನು ಕೆಎಲ್ ರಾಹುಲ್ಗೆ ಬ್ಯಾಕ್ಅಪ್ (ಮೀಸಲು ಆಟಗಾರ) ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ವಿಶ್ವಕಪ್ ತಂಡವು ಕೇವಲ 15 ಆಟಗಾರರನ್ನು ಒಳಗೊಂಡಿರುವುದರಿಂದ, ಮುಖ್ಯ ತಂಡದಿಂದ ಇನ್ನಿಬ್ಬರು ಆಟಗಾರರನ್ನು ಹೊರಗಿಡಲಾಗುತ್ತದೆ.

2023ರ ವಿಶ್ವಕಪ್ ಭಾರತ ತಂಡದಿಂದ ಹೊರಗುಳಿಯುವ ಇಬ್ಬರು ಆಟಗಾರರೆಂದರೆ ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಎಂದು ತಿಳಿದು ಬಂದಿದೆ.
ತಿಲಕ್ ವರ್ಮಾ 2023ರ ಏಷ್ಯಾ ಕಪ್ಗಾಗಿ ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಸುದೀರ್ಘ ಗಾಯದ ನಂತರ ಇಶಾನ್ ಕಿಶನ್ ಅವರನ್ನು ಆಡುವ ತಂಡದಲ್ಲಿ ಸೇರಿಸಲಾಯಿತು.
ಇನ್ನು ಗಾಯದಿಂದ ಚೇತರಿಸಿಕೊಂಡು ಹಿಂದಿರುಗಿದ ಆಟಗಾರರಲ್ಲಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಮೂವರೂ ಏಕದಿನ ವಿಶ್ವಕಪ್ಗಾಗಿ ಭಾರತ ತಂಡದಲ್ಲಿ ಸ್ಥಾನ ಗಳಿಸಲಿದ್ದಾರೆ.

ಇದೇ ವೇಳೆ, ಏಷ್ಯಾ ಕಪ್ಗಾಗಿ ಭಾರತ ತಂಡದಲ್ಲಿ ಆಯ್ಕೆಯಾಗದ ಯುಜ್ವೇಂದ್ರ ಚಹಾಲ್ಗೆ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಸಿಗುವುದು ಬಹುತೇಕ ಡೌಟ್ ಆಗಿದೆ. ಇನ್ನು ಟಿ20 ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ, ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.