ಗುರುವಾರ, ಅಕ್ಟೋಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ನ 33ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ.
ಮಹಾರಾಷ್ಟ್ರದ ರಾಜಧಾನಿ, ವಾಣಿಜ್ಯ ನಗರಿ ಮುಂಬೈ ಕೆಲವು ವಾರಗಳಿಂದ ಕಳಪೆ ಗಾಳಿಯ ಗುಣಮಟ್ಟದೊಂದಿಗೆ ಹೋರಾಡುತ್ತಿದೆ. ಹೀಗಾಗಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಕಾರಣ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಮನಕ್ಕೆ ತರಲು ಪ್ರೇರೇಪಿಸಿದೆ.

ಕಳಪೆ ಗಾಳಿಯ ಗುಣಮಟ್ಟದಿಂದಾಗಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳ ನಂತರ, ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಪಟಾಕಿಗಳನ್ನು ಸಿಡಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಬುಧವಾರ ಘೋಷಿಸಿದ್ದಾರೆ.
"ಬಿಸಿಸಿಐ ಪರಿಸರ ಕಾಳಜಿಗೆ ಒತ್ತು ನೀಡಲಿದೆ. ನಾನು ಐಸಿಸಿಯೊಂದಿಗೆ ಔಪಚಾರಿಕವಾಗಿ ವಿಷಯವನ್ನು ತೆಗೆದುಕೊಂಡಿದ್ದೇನೆ ಮತ್ತು ಮುಂಬೈನಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ, ಇದು ಮಾಲಿನ್ಯದ ಮಟ್ಟವನ್ನು ಹೆಚ್ಚಿಸಬಹುದು. ಬಿಸಿಸಿಐ ಪರಿಸರ ಸಮಸ್ಯೆಗಳನ್ನು ಎದುರಿಸಲು ಬದ್ಧವಾಗಿದೆ ಮತ್ತು ನಮ್ಮ ಅಭಿಮಾನಿಗಳು ಮತ್ತು ಮಧ್ಯಸ್ಥಗಾರರ ಹಿತಾಸಕ್ತಿಯನ್ನು ಯಾವಾಗಲೂ ಮುಂಚೂಣಿಯಲ್ಲಿ ಇರಿಸುತ್ತದೆ," ಎಂದು ಜಯ್ ಶಾ ತಿಳಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮುಂಬೈನಲ್ಲಿ ನಡೆದ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮುಂಬೈನ ಕಳಪೆ ವಾಯು ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಿಗ್ಗೆ ಮುಂಬೈನಲ್ಲಿ AQI 158 ರಲ್ಲಿತ್ತು. ಇದು ಅತ್ಯಂತ ಅನಾರೋಗ್ಯಕರ ಮಟ್ಟ ಎಂದು ಗುರುತಿಸಲಾಗಿದೆ.
"ನನ್ನ ಪ್ರಕಾರ ಆದರ್ಶ ಪ್ರಪಂಚದಲ್ಲಿ ನೀವು ಈ ರೀತಿಯ ಪರಿಸ್ಥಿತಿಯನ್ನು ಬಯಸುವುದಿಲ್ಲ. ಆದರೆ ಈ ರೀತಿಯ ಪರಿಸ್ಥಿತಿಯನ್ನು ತಪ್ಪಿಸಲು ಸಂಬಂಧಪಟ್ಟವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ಇದು ಸೂಕ್ತವಲ್ಲ, ಎಲ್ಲರಿಗೂ ತಿಳಿದಿದೆ. ಆದರೆ ನಿಸ್ಸಂಶಯವಾಗಿ, ನಮ್ಮ ಭವಿಷ್ಯದ ಪೀಳಿಗೆಯನ್ನು ನೋಡಿದರೆ, ನಿಮ್ಮ ಮಕ್ಕಳು, ನನ್ನ ಮಕ್ಕಳು, ನಿಸ್ಸಂಶಯವಾಗಿ, ಅವರು ಯಾವುದೇ ಭಯವಿಲ್ಲದೆ ಬದುಕುವುದು ಬಹಳ ಮುಖ್ಯವಾಗಿದೆ," ಎಂದು ರೋಹಿತ್ ಶರ್ಮಾ ತಿಳಿಸಿದರು.
"ಆದ್ದರಿಂದ ನಾನು ಪ್ರತಿ ಬಾರಿ ಕ್ರಿಕೆಟ್ನ ಹೊರತಾಗಿ ಮಾತನಾಡುವಾಗ ಈ ಬಗ್ಗೆ ಮಾತನಾಡುತ್ತೇನೆ. ಶುದ್ಧ ವಾತಾವರಣದಲ್ಲಿ ನಮ್ಮ ಭವಿಷ್ಯದ ಪೀಳಿಗೆಯನ್ನು ನಾವು ನೋಡಿಕೊಳ್ಳಬೇಕು ಎಂದು ನಿಮಗೆ ತಿಳಿದಿದೆ," ಎಂದು ರೋಹಿತ್ ಶರ್ಮಾ ಬುಧವಾರ ಮುಂಬೈನ ವಾಯು ಗುಣಮಟ್ಟದ ಬಗ್ಗೆ ಹೇಳಿದರು.
ಇದೇ ವೇಳೆ ಗುರುವಾರ ಮುಂಬೈನಲ್ಲಿ ನಡೆಯುವ ಪಂದ್ಯಕ್ಕೆ ಇದು ಮತ್ತೊಂದು ಬಿಸಿ ಮತ್ತು ಆರ್ದ್ರ ದಿನವಾಗಲಿದೆ. ಸುಮಾರು ಭಾರತೀಯ ಕಾಲಮಾನ 1.30ಕ್ಕೆ ಟಾಸ್ ನಡೆಯುವಾಗ ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆರ್ದ್ರತೆ ಸುಮಾರು 33 ಪ್ರತಿಶತದಷ್ಟು ಇರಲಿದೆ.
ಸಂಜೆಯ ಹೊತ್ತಿಗೆ ತಾಪಮಾನವು ಸುಮಾರು 30 ಡಿಗ್ರಿಗಳಿಗೆ ಇಳಿಯುತ್ತದೆ. ಆದರೆ ಆರ್ದ್ರತೆಯು ಶೇಕಡಾ 53ಕ್ಕೆ ಏರುತ್ತದೆ. ಮೈದಾನದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ. ಆದರೆ ಕಳಪೆ ಗಾಳಿಯ ಗುಣಮಟ್ಟದಿಂದಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟಿಗರಿಗೆ ಪರಿಸ್ಥಿತಿಗಳು ಖಂಡಿತವಾಗಿಯೂ ಸುಲಭವಾಗಿರುವುದಿಲ್ಲ.