ಭಾರತದಲ್ಲಿಯೇ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ವಿಶ್ವದ ಪ್ರಮುಖ 10 ತಂಡಗಳು ಈ ದೊಡ್ಡ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು 2019ರ ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದರೆ, ಭಾನುವಾರ, ಅಕ್ಟೋಬರ್ 15ರಂದು ಅಹಮದಾಬಾದ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ.
ಇದೇ ವೇಳೆ ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ತಂಡದ ಮ್ಯಾನೇಜ್ಮೆಂಟ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ಗೆ ಯುಜ್ವೇಂದ್ರ ಚಹಾಲ್ ಭಾರತ ತಂಡದ ಭಾಗವಾಗಿದ್ದರೂ, ಯಾವುದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋತು ಭಾರತ ತಂಡ ತನ್ನ ಅಭಿಯಾನ ಮುಗಿಸಿತು.

ಸದ್ಯ ಭಾರತ ತಂಡದಲ್ಲಿ ಪ್ರತಿಭಾವಂತ ಮಣಿಕಟ್ಟಿನ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ಅವರಂತಹ ಆಟಗಾರರನ್ನು ಹೊಂದಿದೆ. ಆದರೂ, ಯುಜ್ವೇಂದ್ರ ಚಹಾಲ್ ತಂಡದ ಯಶಸ್ಸಿಗೆ ನಿರ್ಣಾಯಕ ಬೌಲರ್ ಆಗಬಹುದು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, "ರವಿ ಬಿಷ್ಣೋಯ್ ಮತ್ತು ಕುಲದೀಪ್ ಯಾದವ್ ಇದ್ದಾರೆ. ಹೀಗಾಗಿ ಯುಜ್ವೇಂದ್ರ ಚಹಾಲ್ ದೊಡ್ಡ ಪಂದ್ಯಾವಳಿಗಳಲ್ಲಿ ಅವಕಾಶ ವಂಚಿತರಾಗುತ್ತಾರೆ. ಚಹಾಲ್ ಟಿ20 ಅಥವಾ ಏಕದಿನ ಪಂದ್ಯಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆತನ ಮೇಲೂ ನಿಗಾ ಇಡುವುದು ಮುಖ್ಯ," ಎಂದು ಅಭಿಪ್ರಾಯಪಟ್ಟರು.
2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿರುವ ಕಾರಣ, ಮಣಿಕಟ್ಟಿನ ಸ್ಪಿನ್ನರ್ಗಳು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ಗಮನಾರ್ಹ ಸವಾಲು ಒಡ್ಡುತ್ತಾರೆ ಎಂದು ಸೌರವ್ ಗಂಗೂಲಿ ಹೇಳಿದರು.
2011ರ ವಿಶ್ವಕಪ್ನಲ್ಲಿ ಮಣಿಕಟ್ಟಿನ ಸ್ಪಿನ್ನರ್ ಪಿಯೂಷ್ ಚಾವ್ಲಾ ತೋರಿದ ಪ್ರಭಾವವನ್ನು ಸೌರವ್ ಗಂಗೂಲಿ ನೆನಪಿಸಿಕೊಂಡು, "ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ, ಮಣಿಕಟ್ಟಿನ ಸ್ಪಿನ್ನರ್ ಈ ಪರಿಸ್ಥಿತಿಗಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಾರೆ," ಎಂದರು.
ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ನೀಡಿದಾಗಲೆಲ್ಲಾ ಭಾರತ ತಂಡವು ಐತಿಹಾಸಿಕವಾಗಿ ಪಂದ್ಯಾವಳಿಗಳಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 2007ರ ಟಿ20 ವಿಶ್ವಕಪ್ನ್ನು ಉಲ್ಲೇಖಿಸಿ, ಅಲ್ಲಿ ವೇಗದ ಬೌಲರ್ಗಳ ಜೊತೆಗೆ ಮಣಿಕಟ್ಟಿನ ಸ್ಪಿನ್ನರ್ಗಳು ಪ್ರಮುಖ ಪಾತ್ರ ವಹಿಸಿದರು ಎಂದು ಸೌರವ್ ಗಂಗೂಲಿ ತಿಳಿಸಿದರು.
"ಅದೇ ರೀತಿ 2023ರ ವಿಶ್ವಕಪ್ ನಡೆಯುವ ಭಾರತದ ಪರಿಸ್ಥಿತಿಗಳಲ್ಲಿ ಮಣಿಕಟ್ಟಿನ ಸ್ಪಿನ್ನರ್ಗಳನ್ನು ಹೊಂದುವುದು ಅತ್ಯಂತ ಮಹತ್ವದ್ದಾಗಿದೆ," ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದರು.