ಎಸ್ ವೆಂಕಟ ರಾಘವನ್
ಭಾರತ ಕ್ರಿಕೆಟ್ ತಂಡವನ್ನು ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಮುನ್ನಡೆಸಿದ ಕೀರ್ತಿ ಎಸ್ ವೆಂಕಟ ರಾಘವನ್ ಅವರಿಗೆ ಸಲ್ಲುತ್ತದೆ. ರಾಘವನ್ 1975 ಮತ್ತು 1979ರ ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಿಸಿದ್ದರು. 1975ರಲ್ಲಿ ಭಾರತ ಒಟ್ಟು 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೇ ಜಯಿಸಿತ್ತು. ರಾಘವನ್ ಕೇವಲ 1 ವಿಕೆಟ್ ಅಷ್ಟೇ ಪಡೆದಿದ್ದರು. ರಾಘವನ್ ನಾಯಕತ್ವ ತಂಡದಲ್ಲಿ ಅಂಥ ಗಮನಾರ್ಹ ಪ್ರಭಾವವೇನೂ ಬೀರಿರಲಿಲ್ಲ.
ಕಪಿಲ್ ದೇವ್
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಕಪಿಲ್ ದೇವ್ ಅಪರೂಪದ ದಾಖಲೆಗಳಿಗಾಗಿ ಗಮನ ಸೆಳೆದಿದ್ದವರು. ತಂಡದ ಪರ ಮೊದಲ ವಿಶ್ವಕಪ್ ಜಯಿಸಿದ ಕೀರ್ತಿಯೂ ಕಪಿಲ್ ಪಾಲಿನದ್ದು. 1983 ಮತ್ತು 1987ರಲ್ಲಿ ಕಪಿಲ್ ದೇವ್ ಭಾರತ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ 1983ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 43 ರನ್ಗಳಿಂದ ಮಣಿಸಿ ಭಾರತ ತಂಡ ಚೊಚ್ಚಲ ವಿಶ್ವಕಪ್ಗೆ ಮುತ್ತಿಕ್ಕಿತ್ತು.
ಮೊಹಮ್ಮದ್ ಅಝರುದ್ದೀನ್
ಮೂರು ಸಾರಿ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಹಿರಿಮೆ ಮೊಹಮ್ಮದ್ ಅಝರುದ್ದೀನ್ ಅವರದ್ದು. 1992, 1996 ಮತ್ತು 1999ರಲ್ಲಿ ಅಝರ್ ಭಾರತ ತಂಡದ ನಾಯಕತ್ವ ವಹಿಸಿದ್ದರು. ಅಝರ್ ಮುಂದಾಳತ್ವದ ಮೊದಲ ವಿಶ್ವಕಪ್ ಅಂದರೆ 1992ರಲ್ಲಿ ಭಾರತ 8ರಲ್ಲಿ ಕೇವಲ 2ರಲ್ಲಷ್ಟೇ ಗೆದ್ದಿತ್ತು. ಮುಂದಿನ ವರ್ಷವೂ ಭಾರತ ಗಮನಾರ್ಹ ಚೇತರಿಕೆಯೇನೂ ಕಾಣಲಿಲ್ಲ.
ಸೌರವ್ ಗಂಗೂಲಿ
2003ರ ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವ ಬಂಗಾಳ ಹುಲಿ ಗಂಗೂಲಿ ಹೆಗಲ ಮೇಲೆ ಬಿದ್ದಿತ್ತು. ಗಂಗೂಲಿ ನಾಯಕತ್ವದಲ್ಲಿ ಭಾರತ ಟ್ರೋಫಿ ಗೆಲುವಿಗೆ ಇನ್ನೊಂದೇ ಹೆಜ್ಜೆ ಬಾಕಿಯಿರುವಾಗ ಸೋತು ನಿರಾಸೆ ಅನುಭವಿಸಿತ್ತು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 125 ರನ್ಗಳಿಂದ ಪರಾಭವಗೊಂಡಿತ್ತು.
ರಾಹುಲ್ ದ್ರಾವಿಡ್
ಭಾರತ ತಂಡವನ್ನು ಮುನ್ನಡೆಸಿದ ಕೀರ್ತಿ ಕನ್ನಡಿಗ, ಇಂಡಿಯನ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ಗೂ ಸಲ್ಲುತ್ತದೆ. 2007ರಲ್ಲಿ ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಿದ್ದ ದ್ರಾವಿಡ್ ಕನ್ನಡಿಗರಿಗೆ ಹೆಮ್ಮೆ ತಂದಿದ್ದರು. ಆದರೆ ಈ ಸಾರಿ ಭಾರತ ಗ್ರೂಪ್ ಹಂತದಲ್ಲೇ ಹೊರ ಬಿದ್ದಿತ್ತು. ತಂಡದಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಅವರಂತ ಘಟಾನುಘಟಿಗಳು ಇದ್ದರಾದರೂ ಯಾರ ಉಪಸ್ಥಿತಿಯೂ ಎರಡನೇ ಟ್ರೋಫಿ ಕನಸನ್ನು ನನಸಾಗಿಸಲಿಲ್ಲ.
ಎಂಎಸ್ ಧೋನಿ
2011 ಮತ್ತು 2015ರಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ತಂಡದ ಕಪ್ತಾನ ಆಗಿದ್ದರು. ಧೋನಿ ನಾಯಕತ್ವದ ಮೊದಲನೇ ಸಾರಿ ಅಂದರೆ 2011ರಲ್ಲಿ ಬ್ಲ್ಯೂ ಬಾಯ್ಸ್ ಟೀಮ್ ಎರಡನೇ ವಿಶ್ವಕಪ್ ಜಯಿಸಿ ಬೀಗಿತ್ತು. ಭಾರತದಲ್ಲೇ ನಡೆದಿದ್ದ ಪಂದ್ಯದ ಫೈನಲ್ನಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ ಗಳಿಸಿತ್ತು. ಆದರೆ 2015ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ನಲ್ಲಿ ಸೋತಿತ್ತು.