ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯದಲ್ಲಿಯೇ ಅವಿಸ್ಮರಣೀಯ ಪಂದ್ಯವೊಂದಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್ಗಳ ಅಂತರದ ಅಮೋಘ ಗೆಲುವು ಸಾಧಿಸಿದೆ. ಆರಂಭದಲ್ಲಿ ಐದು ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾವನ್ನು ಅದ್ಭುತವಾಗಿ ಮೇಲೆತ್ತಿದ್ದು ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಜೋಡಿ. ಬರೊಬ್ಬರಿ 165 ರನ್ಗಳ ಜೊತೆಯಾಟ ಆಡುವ ಮೂಲಕ ಭಾರತ ತಂಡದ ಗೆಲುವಿಗೆ ಕಾರಣವಾದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 85 ರನ್ಗಳ ಕೊಡುಗೆ ನೀಡಿದರೆ ಕೆಎಲ್ ರಾಹುಲ್ ಅಜೇಯ 97 ರನ್ಗಳನ್ನು ಗಳಿಸಿದರು. ಈ ಜೋಡಿಯ ಆಟಕ್ಕೆ ಇದೀಗ ಎಲ್ಲೆಡೆಯಿಂದ ಭಾರೀ ಮೆಚ್ಚಿಗೆಗಳು ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಈ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಆಟಕ್ಕೆ ಗಂಭೀರ್ ಅವರಿಂದ ವಿಶೇಷ ಶ್ಲಾಘನೆ ವ್ಯಕ್ತವಾಗಿದ್ದು ಈ ಇನ್ನಿಂಗ್ಸ್ ಯುವ ಆಟಗಾರರಿಗೆ ಮಾದರಿ ಎಂದು ಬಣ್ಣಿಸಿದ್ದಾರೆ.

ಪಂದ್ಯದ ಮುಕ್ತಾಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಗೌತಮ್ ಗಂಭೀರ್ ತಂಡ ಒತ್ತಡದಲ್ಲಿದ್ದಾಗ ಅಪಾಯಕಾರಿಯಲ್ಲದ ಹೊಡೆತಗಳನ್ನು ಬಾರಿಸುತ್ತಾ ಸ್ಟ್ರೈಕ್ ರೊಟೇಟ್ ಮಾಡುತ್ತಾ ಇನ್ನಿಂಗ್ಸ್ ಕಟ್ಟಲು ವಿರಾಟ್ ಕೊಹ್ಲಿ ಅತ್ಯಂತ ಸಮರ್ಥರು ಎಂದಿದ್ದಾರೆ.
"ಇದು ನೀವು ಆಟವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಅದು ಬಹಳ ಮುಖ್ಯವಾಗುತ್ತದೆ. ದೊಡ್ಡ ಮೊತ್ತದ ಗುರಿಗಳು ನಿಮ್ಮ ಮುಂದಿದ್ದಾಗ ಮೊದಲನೆಯದಾಗಿ ಆಗ ಇರುವ ಒತ್ತಡಗಳನ್ನು ನೀವು ಗ್ರಹಿಸಿಕೊಳ್ಳಲು ಸಮರ್ಥರಾಗಬೇಕಾಗುತ್ತದೆ. ನೀವು ನೀವು ಯಾವುದೇ ಪರಿಸ್ಥಿತಿ ಮತ್ತು ಸ್ಥಾನದಿಂದ ಮೊತ್ತವನ್ನು ಬೆನ್ನಟ್ಟಬಹುದು ಎನ್ನುವ ಆತ್ಮ ವಿಶ್ವಾಸ ಹೊಂದಿರಬೇಕು. ಅದಕ್ಕೂ ಮುಖ್ಯವಾಗಿ ಏಕದಿನ ಕ್ರಿಕೆಟ್ನಲ್ಲಿ ಇಂಥಾ ಸ್ಕೋರ್ಗಳು ಇರುವಾದ ದೊಡ್ಡ ಹೊಡೆತಗಳನ್ನು ಹೊಡೆಯುವುದು ಮಾತ್ರ ಆಟ ಅಲ್ಲ ಎಂದು ಅರ್ಥ ಮಾಡಿಕೊಂಡಿರಬೇಕು" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
"ಇದು ವಿಕೆಟ್ಗಳ ಮಧ್ಯೆ ಓಡುವುದು, ಸ್ಟ್ರೈಲ್ ರೊಟೇಟ್ ಹೇಗೆ ಮಾಡುವುದು, ನಿಮ್ಮನ್ನು ನೀವು ಒತ್ತಡಕ್ಕೆ ಸಿಲುಕದಂತೆ ಮಾಡುವುದು ಎನ್ನುವುದರ ಮೇಲೆ ನಿಂತಿರುತ್ತದೆ. ಅಲ್ಲದೆ ಕಡಿಮೆ ಡಾಟ್ ಬಾಲ್ ಆಡುವುದು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ. ಜೊತೆಗೆ ಒಳಗೆ ಐದು ಫೀಲ್ಡರ್ಗಳು ಮತ್ತು ಮತ್ತು ಎರಡು ಹೊಸ ಚೆಂಡುಗಳ ನಿಮಯ ಯಾವುದೇ ಕ್ಷಣದಲ್ಲಿಯೂ ವೇಗವನ್ನು ಹೆಚ್ಚಿಸುವ ಅವಕಾಶ ನೀಡುತ್ತದೆ"
"ಈ ಕಾರಣಗಳಿಗಾಗಿಯೇ ವಿರಾಟ್ ಕೊಹ್ಲಿ ಬಹಳ ಸ್ಥಿರವಾದ ಪ್ರದರ್ಶನ ನೀಡಿಕೊಂಡು ಬರುತ್ತಿದ್ದಾರೆ. ಸಾಕಷ್ಟು ಯುವ ಆಟಗಾರರು ಡ್ರೆಸ್ಸಿಂಗ್ರೂಮ್ನಲ್ಲಿ ಫಿಟ್ನೆಸ್ ಹಾಗೂ ವಿಕೆಟ್ಗಳ ನಡುವಿನ ಓಟದ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೆ ಸ್ಟ್ರೈಕ್ ರೊಟೇಟ್ ಎಷ್ಟು ಮುಖ್ಯ ಎನ್ನುವುದನ್ನು ಕೂಡ ತಿಳಿದುಕೊಳ್ಳುತ್ತಾರೆ. ಯಾಕೆಂದರೆ ಟಿ20 ಕ್ರಿಕೆಟ್ ಹಾಗೂ ಹೊಸ ಮಾದರಿಯ ನಿಯಮಗಳಿಂದಾಗಿ ಚೆಂಡನ್ನು ಬಾರಿಸುತ್ತಲೇ ಯುವ ಆಟಗಾರರು ಹೆಚ್ಚು ಗಮನ ನೀಡುತ್ತಾರೆ"
"ಆದರೆ ಅದು ಎರಡು ರನ್ಗಳಿದ್ದಾಗ ಎರಡು ಅಥವಾ ಮೂರು ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ಸುಲಭವಲ್ಲ. ಅಂಥಾ ಸಂದರ್ಭದಲ್ಲಿ ನೀವು ಅಂಗಳಕ್ಕಿಳಿದು ದೂರದ ಎಸೆತಗಳನ್ನು ಕೆಣಕುವುದು ಸರಿಯಲ್ಲ. ಅಂಥಾ ಸಂದರ್ಭದಲ್ಲಿ ಆಟದ ಒತ್ತಡವನ್ನು ಗ್ರಹಿಸಿಕೊಂಡು ಸ್ಟ್ರೈಕ್ ರೊಟೇಟ್ ಮಾಡುವತ್ತ ಗಮನ ನೀಡಬೇಕು. ವಿರಾಟ್ ಕೊಹ್ಲಿಯಿಂದ ಇಂಥಾದ್ದನ್ನು ಯುವ ಆಟಗಾರರು ಪಾಠ ಕಲಿಯುತ್ತಾರೆ ಎನ್ನುವ ನಂಬಿಕೆ ನನ್ನದು" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್.