ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಗುರುವಾರ ಪುಣೆಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಬಾಂಗ್ಲಾದೇಶ ತಂಡ ಸವಾಲೊಡ್ಡಲಿದೆ. ಅದ್ಭುತ ಲಯದಲ್ಲಿರುವ ಭಾರತ ತಂಡಕ್ಕೆ ಬಾಂಗ್ಲಾದೇಶ ಎಷ್ಟರ ಮಟ್ಟಿಗೆ ಪೈಪೋಟಿ ನೀಡಲಿದೆ ಎನ್ನುವುದು ಈಗಿರುವ ಕುತೂಹಲ.
ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಎರಡು ಅಚ್ಚರಿಯ ಫಲಿತಾಂಶಗಳು ಹೊರಬಂದಿದೆ. ಇಂಗ್ಲೆಂಡ್ ತಂಡವನ್ನು ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾವನ್ನು ನೆದರ್ಲೆಂಡ್ಸ್ ತಂಡ ಮಣಿಸಿದೆ. ಬಾಂಗ್ಲಾದೇಶ ವಿರುದ್ಧದ ಈ ಪಂದ್ಯವನ್ನು ಲಘುವಾಗಿ ಪರಿಗಣಿಸದಂತೆ ಭಾರತ ತಂಡಕ್ಕೆ ಈ ಮೂಲಕ ಈಗಾಗಲೇ ಎಚ್ಚರಿಕೆ ದೊರೆತಿದೆ. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ಕೂಡ ಗಂಭೀರವಾಗಿ ಪರಿಗಣಿಸಿ ಕಾದಾಡಬೇಕಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಕಂಟಕ ನೀಡು ಸಾಧ್ಯತೆಯೊರುವ ಮೂವರು ಬಾಂಗ್ಲಾದೇಶದ ದಾಂಡಿಗರು ಯಾರು ಎನ್ನುವುದನ್ನು ಈ ವರದಿಯಲ್ಲಿ ನೋಡೋಣ.. ಮುಂದೆ ಓದಿ..
ಲಿಟನ್ ದಾಸ್
ಈ ಬಾರಿಯ ವಿಶ್ವಕಪ್ನಲ್ಲಿ ಲಿಟನ್ ದಾಸ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ ನಿಜ. ಆದರೆ ಭಾರತದ ವಿರುದ್ಧ ಈ ಯುವ ಆಟಗಾರ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಭಾರತದ ವಿರುದ್ಧ ಒಂದು ಭರ್ಜರಿ ಶತಕ ಕೂಡ ಸಿಡಿಸಿರುವ ಲಿಟನ್ ದಾಸ್ ಗುರುವಾರದ ಪಂದ್ಯದಲ್ಲಿ ಲಯಕ್ಕೆ ಮರಳಲು ಸಾಧ್ಯವಾದರೆ ಅದು ಭಾರತಕ್ಕೆ ಖಂಡಿತಾ ಕಂಟಕವಾಗಲಿದೆ.
ಶಕೀಬ್ ಅಲ್ ಹಸನ್
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಬೌಲಿಂಗ್ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಶಕೀಬ್ ಐದುಇ ಬಾರಿ ಔಟ್ ಮಾಡಿರುವ ದಾಖಲೆ ಕೂಡ ಹೊಂದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಶಕೀಬ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸುವುದು ಅಗತ್ಯ. ಇನ್ನು ಬ್ಯಾಟಿಂಗ್ನಲ್ಲಿಯೂ ಶಕೀಬ್ ದೊಡ್ಡ ಮೊತ್ತದ ಕೊಡುಗೆ ನೀಡುವ ಸಾಮರ್ಥ್ಯವಿರುವ ಕಾರಣ ಹೆಚ್ಚು ಕಾಲ ಕ್ರೀಸ್ನಲ್ಲಿ ನೆಲೆಯೂರಲು ಅವಕಾಶ ನೀಡಬಾರದು.
ಮುಸ್ತಫಿಜುರ್ ರಹ್ಮಾನ್
ಬಾಂಗ್ಲಾದೇಶದ ಪ್ರಮುಖ ವೇಗದ ಬೌಲಿಂಗ್ ಅಸ್ತ್ರ ಮುಸ್ತಫಿಜುರ್ ರಹ್ಮಾನ್. ಐಪಿಎಲ್ನಲ್ಲಿ ಸಾಕಷ್ಟು ಆಡಿರುವ ಕಾರಣ ಮುಸ್ತಫಿಜುರ್ಗೆ ಭಾರತದ ವಾತಾವರಣ ಅತ್ಯಂತ ಪರಿಚಿತ. ಅಲ್ಲದೆ ಟೀಮ್ ಇಂಡಿಯಾದ ಆಟಗಾರರನ್ನು ಹೆಚ್ಚು ಎದುರಿಸಿರುವ ಅನುಭವ ಕೂಡ ಹೊಂದಿದ್ದಾರೆ. ಭಾರತದ ವಿರುದ್ಧ 11 ಪಂದ್ಯಗಳನ್ನು ಆಡಿರುವ ಮುಸ್ತಫಿಜುರ್ 20.72ರ ಸರಾಸರಿಯಲ್ಲಿ 25 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಗುರುವಾರ ನಡೆಯಲಿರುವ ಪಂದ್ಯದಲ್ಲಿಯೂ ಮುಸ್ತಫಿಜುರ್ ರಹ್ಮಾನ್ ಭಾರತಕ್ಕೆ ಅಫಾಯಕಾರಿಯೆನಿಸುವ ಸಾಧ್ಯತೆಯಿದೆ.