
ಲಂಡನ್, ಮೇ 26: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 6 ವಿಕೆಟ್ಗೆ ಸೋಲಿನ ಆಘಾತ ಅನುಭವಿಸಿತು.
ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನ ತನ್ನ ಸಾಮರ್ಥ್ಯದ ಅರ್ಧದಷ್ಟೂ ಇರಲಿಲ್ಲ. ಆದರೂ, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ತೋರಿದ ದಿಟ್ಟತನದಿಂದಾಗಿ ಸಮಾಧಾನಕರ ಮೊತ್ತ ದಾಖಲಿಸಿತು. ಇಲ್ಲವಾಗಿದ್ದಲ್ಲಿ 120 ರನ್ಗಳ ಆಸುಪಾಸಿನಲ್ಲಿ ಭಾರತ ತಂಡ ಆಲ್ಔಟ್ ಆಗಬೇಕಿತ್ತು. ಈ ನಿಟ್ಟಿನಲ್ಲಿ ಕೆಳ ಕ್ರಮಾಂಕದ ಬ್ಯಾಟರ್ಗಳು ತೋರಿದ ದಿಟ್ಟತನವನ್ನು ಕ್ಯಾಪ್ಟನ್ ಕೊಹ್ಲಿ ಪ್ರಶಂಶಿಸಿದ್ದಾರೆ.
ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬುಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ನೋಡ ನೋಡುತ್ತಿದ್ದಂತೆಯೇ ಪೆವಿಲಿಯನ್ ಸೇರಿಬಿಟ್ಟಿದ್ದರು. ಇಷ್ಟಲ್ಲದೆ ವಿಶ್ವದ ನಂ.1 ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೂಡ ಬಹುಬೇಗ ವಿಕೆಟ್ ಒಪ್ಪಿಸಿದ್ದು ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಕೇದಾರ್ ಜಾಧವ್ ಮತ್ತು ವಿಜಯ್ ಶಂಕರ್ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಸರೆಯಾಗುವ ಪ್ರಯತ್ನ ನಡೆಸಿದ ಆಲ್ರೌಂಡರ್ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ದಾಖಲಿಸಿದರಲ್ಲದೆ, ಕೆಳ ಕ್ರಮಾಂಕದ ಬ್ಯಾಟರ್ಗಳ ಜೊತೆಗೆ ಉತ್ತಮ ಜೊತೆಯಾಟವನ್ನೂ ನಡೆಸಿದರು.
"ನಿಜಕ್ಕೂ ಅತ್ಯುತ್ತಮವಾಗಿತ್ತು. ವಿಶ್ವಕಪ್ನಂತಹ ಟೂರ್ನಿಯಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕೆಲವೊಮ್ಮೆ ಕುಸಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಜವಾಬ್ದಾರಿ ಹೊರಲು ಸಿದ್ದರಿರಬೇಕು. ಹಾರ್ದಿಕ್ ಉತ್ತಮವಾಗಿ ಬ್ಯಾಟಿಂಗ್ ನಡೆಸಿದರು. ಎಂ.ಎಸ್ ಒತ್ತಡವನ್ನು ನಿಭಾಯಿಸುವ ಪ್ರಯತ್ನ ನಡೆಸಿದರು. ಜಡೇಜಾ ಕೂಡ ಉತ್ತಮ ರನ್ ಕಲೆಹಾಕಿದರು. ಈ ದೃಷ್ಠಿಕೋನದಿಂದ ನೋಡುವುದಾದರೆ ತಂಡದ ಪಾಲಿಗೆ ಒಳ್ಳೆಯದಾಗಿದೆ,'' ಎಂದು ಕೊಹ್ಲಿ ಹೇಳಿದ್ದಾರೆ.
"ನಮ್ಮ ಬೌಲಿಂಗ್ ಕೂಡ ಉತ್ತಮವಾಗಿತ್ತು. ಕೇವಲ 4ರಿಂದ 4.5ರ ಸರಾಸರಿಯಲ್ಲಿ ಮಾತ್ರವೇ ರನ್ ಬಿಟ್ಟುಕೊಟ್ಟೆವು. ಫೀಲ್ಡರ್ಗಳು ಕೂಡ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದರೆ, ಪಂದ್ಯ ಗೆಲ್ಲಬೇಕಾದರೆ ಮೂರು ವಿಭಾಗಗಳಲ್ಲಿ ಉತ್ತಮವಾಗಿ ಆಡಬೇಕಿದೆ,'' ಎಂದು ಕೊಹ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಮೇ 28 ರಂದು ತನ್ನ ಎರಡನೇ ಅಭ್ಯಾಸ ಪಂದ್ಯವನ್ನಾಡಲಿದ್ದು, ಜೂನ್ 5ರಂದು ದಕ್ಷಿಣ ಆಫ್ರಿಕಾ ಎದುರು ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದಾರೆ.