
ಲಂಡನ್, ಜೂನ್ 13: ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಬಲಿಷ್ಠ ತಂಡವಾಗಿರುವ ಭಾರತಕ್ಕೆ 2019ರ ವಿಶ್ವಕಪ್ ಜಯಿಸೋದು ಸಾಧ್ಯವಾಗದ ಮಾತೇನಲ್ಲ. 12ನೇ ಆವೃತ್ತಿಯ ವಿಶ್ವಕಪ್ ಟ್ರೋಫಿ ಬ್ಲ್ಯೂ ಬಾಯ್ಸ್ ಪಾಲಾಗಬೇಕೆಂಬುದು 130 ಕೋಟಿ ಭಾರತೀಯರ ಆಸೆಯೂ ಹೌದು. ಗೆದ್ದೇ ಗೆಲ್ಲುತ್ತೀವಿ ಎಂಬ ವಿಶ್ವಾಸವನ್ನು ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೊರ ಹಾಕಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ನೂರ ಮೂವತ್ತು ಕೋಟಿ ಮಂದಿ ನಾವು ಗೆಲ್ಲೋದನ್ನು ನಿರೀಕ್ಷಿಸುತ್ತಿದ್ದಾರೆ. ನಮ್ಮನ್ನು ಹರಸುತ್ತಿದ್ದಾರೆ. ಹೀಗಾಗಿ ಒತ್ತಡವೇನಿಲ್ಲ. ಖಂಡಿತಾ ಒತ್ತಡವಿಲ್ಲ' ಎಂದು ಐಸಿಸಿ ವಿಡಿಯೋವೊಂದರಲ್ಲಿ ಮಾತನಾಡುತ್ತ 25ರ ಹರೆಯದ ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ.
'ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿರಬೇಕು. ಅದೊಂದೇ ವಿಚಾರ ತಲೇಲಿದೆ. ಈ ವಿಚಾರವನ್ನು ನೆನಪು ಮಾಡಿಕೊಂಡಾಗೆಲ್ಲ ನನಗೆ ರೋಮಾಂಚನವಾಗುತ್ತದೆ. ನನ್ನ ಯೋಜನೆಯಿಷ್ಟೇ; ವಿಶ್ವಕಪ್ ಗೆಲ್ಲಬೇಕಷ್ಟೇ. ನನಗೆ ಯಾವುರದಲ್ಲಿ ವಿಶ್ವಾಸವಿದೆಯೋ ಅದನ್ನು ನಾನು ನಿರೀಕ್ಷಿಸುತ್ತೇನೆ' ಎಂದು ಪಾಂಡ್ಯ ಹೇಳಿದ್ದಾರೆ. ಜುಲೈ 14ರಂದು ಲಂಡನ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮಾತು ಮುಂದುವರೆಸಿ ಪಾಂಡ್ಯ, ಭಾರತಕ್ಕೆ ಆಡುವುದೇ ನನ್ನ ಪಾಲಿಗೆ ಎಲ್ಲವೂ. ಅದು ನನ್ನ ಬದುಕೂ ಹೌದು. ಆಟವನ್ನು ಪ್ರೀತಿಸಿ ಆಡುವವರಲ್ಲಿ ನಾನೂ ಒಬ್ಬ. ಮೂರು ವರ್ಷಗಳಿಂದ ನಾನು ಏನಕ್ಕೆ ತಯಾರಿ ನಡೆಸುತ್ತಿದ್ದೆನೋ ಆ ಕನಸು ಇವತ್ತು ಸಾಕಾರಗೊಳ್ಳುವುದರಲ್ಲಿದೆ' ಎಂದರು.
ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ಎರಡೇ ತಂಡಗಳು ಅಜೇಯವಾಗಿ ಉಳಿದಿವೆ. ನ್ಯೂಜಿಲ್ಯಾಂಡ್ ಮೂರರಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಆಡಿದ ಎರಡೂ ಪಂದ್ಯಗಳನ್ನು ಜಯಿಸಿದೆ. ಇನ್ನೂ 7 ಪಂದ್ಯಗಳು ಭಾರತದ ಮುಂದಿದ್ದು, ಗೆಲುವು ಮುಂದುವರೆಸಿದರೆ ಪಾಂಡ್ಯ ಹೇಳುವಂತೆ ಕಪ್ ನಮ್ಮದಾಗಲು ಅವಕಾಶವಿದೆ. ಅಂದ್ಹಾಗೆ ಭಾರತ ಈ ಹಿಂದೆ 1983 ರಲ್ಲಿ ಮತ್ತು 2011ರಲ್ಲಿ ವಿಶ್ವಕಪ್ ಜಯಿಸಿತ್ತು.