
ಮೈಸೂರು, ಜೂನ್ 5 : ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2019ರ ಆರಂಭಿಕ ಪಂದ್ಯದಿಂದಲೇ ಟೀಮ್ ಇಂಡಿಯಾ ಗೆಲುವಿನ ಹಾದಿ ಹಿಡಿಯಲೆಂದು ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೂನ್ 5ರಂದು ವಿರಾಟ್ ಕೊಹ್ಲಿ ಬಳಗ ದಕ್ಷಿಣ ಆಫ್ರಿಕಾ ವಿರುದ್ಧ ಟೂರ್ನಿಯ ಮೊದಲ ಪಂದ್ಯವನ್ನಾಡುತ್ತಿದೆ.
ಭಾರತ vs ದಕ್ಷಿಣ ಆಫ್ರಿಕಾ, ಜೂನ್ 5, Live ಸ್ಕೋರ್ಕಾರ್ಡ್ ಇಲ್ಲಿದೆ
ಮೈಸೂರಿನ ಜಲಪುರಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಯುವ ಮುಖಂಡ ಲೋಹಿತ್ ನೇತೃತ್ವದಲ್ಲಿ, ಭಾರತ ತಂಡದ ಆಟಗಾರರ ಭಾವಚಿತ್ರ ಹಿಡಿದು, ದೇಸಿ ತಂಡದ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಈ ವೇಳೆ ಭಾರತ ತಂಡಕ್ಕೆ ಜಯ ಘೋಷಣೆ ಕೂಗಲಾಯ್ತು. ಆಫ್ರಿಕಾ ಹಾಗೂ ಭಾರತ ನಡುವಿನ ಹೈವೋಲ್ಟೇಜ್ ಪಂದ್ಯ ಶುರುವಾಗಿದ್ದು, ತ್ರಿವರ್ಣ ಧ್ವಜ ಹಿಡಿದು ಭಾರತದ ಪರ ಘೋಷಣೆ ಹಾಕಿದ ಕ್ರಿಕೆಟ್ ಪ್ರಿಯರು ತಂಡ ಗೆಲುವು ಸಾಧಿಸುವಂತೆ ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಲೋಹಿತ್, 'ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿ. ಭಾರತ ತಂಡದ ಆಟಗಾರರಿಗೆ ದೈವ ಪ್ರೇರಣೆ ಇರಲಿ ಎಂದು ಇಂದು ವಿಶೇಷ ಪೂಜೆ ಮಾಡಿಸಲಾಗಿದೆ. ಯುವಕರು ಕ್ರಿಕೆಟ್ ವೀಕ್ಷಣೆಯನ್ನು ಕ್ರೀಡಾ ಮನೋಭಾವದಿಂದ ನೋಡಬೇಕು. ಆದರೆ ಜೂಜುನಲ್ಲಿ ಭಾಗಿಯಾಗುವುದು ಸಲ್ಲ ಎಂದರು.
ವಿಶ್ವಕಪ್ 2019: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿ ಬಂಧನ
ಮಾತು ಮುಂದುವರೆಸಿದ ಲೋಹಿತ್, 'ಪೊಲೀಸರು ಕೂಡ ಜೂಜು ಕೋರರ ಬಗ್ಗೆ ನಿಗಾವಹಿಸಿ ಕ್ರಮಕೈಗೊಳ್ಳಬೇಕು. ಇದೇ ಜೂನ್ 16ರ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯವನ್ನಾಡಲಿದೆ. ಆ ಹಣಾಹಣಿಯನ್ನೂ ಸೇರಿಸಿ ಎಲ್ಲಾ ಪಂದ್ಯಗಳಲ್ಲೂ ಕೊಹ್ಲಿ ಬಳಗ ಗೆದ್ದು ದೇಶಕ್ಕೆ ಬಾರಿ ವಿಶ್ವಕಪ್ ಸಂಭ್ರಮ ತರಲಿ' ಎಂದು ಹಾರೈಸಿದರು.