
ನವದೆಹಲಿ, ಏಪ್ರಿಲ್ 17: ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬಗ್ಗೆ ಚರ್ಚೆಯನ್ನು ಮತ್ತೆ ಕೆದಕಿದ್ದಾರೆ. ಈಗ ಪ್ರಕಟಗೊಂಡಿರುವ ಭಾರತ ವಿಶ್ವಕಪ್ ತಂಡದಲ್ಲಿ ಮಧ್ಯಮ ಕ್ರಮಾಂಕ ಸ್ಥಿರವಲ್ಲ. ಅದು ಬದಲಾಗಲಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.
'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'
'ವಿಶ್ವಕಪ್ ಆಡುವ 11 ತಂಡದಲ್ಲಿ ಆರಂಭಿಕ ಮೂರು ಕ್ರಮಾಂಕಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ರಮಾಂಕಗಳೂ ಬದಲಾಗಲಿವೆ' ಎಂದು ರವಿಶ್ರಾಸ್ತ್ರಿ ಹೇಳಿಕೊಂಡಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ 4ನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಸೂಕ್ತ ಆಟಗಾರ ಎಂಬ ಹೇಳಿಕೆ ನೀಡಿದ ಬಳಿಕ ಶಾಸ್ತ್ರಿ ಹೀಗಂದಿರುವುದು ಗೊಂದಲ ಮೂಡಿಸಿದೆ.
'ಎದುರಾಳಿ ತಂಡ, ಸಂದರ್ಭಕ್ಕೆ ಅನುಗುಣವಾಗಿ ಆಟಗಾರರ ಕ್ರಮಾಂಕಗಳು ಬದಲಾಗಲಿವೆ. ಮೊದಲು ಮೂರು ಕ್ರಮಾಂಕಗಳ ಬಗ್ಗೆ ನಾನು ಹೇಳಲಾರೆ, ಆದರೆ ಇನ್ನುಳಿದ ಕ್ರಮಾಂಕಗಳು ಖಂಡಿತಾ ಬದಲಾವಣೆಗೆ ಅವಕಾಶವಿದೆ' ಎಂದು ಸ್ಫೋರ್ಟ್ಸ್ 360 ಜೊತೆ ಮಾತನಾಡುತ್ತ ರವಿ ಹೇಳಿಕೊಂಡಿದ್ದಾರೆ.
ಈ ಮೊದಲು ಭಾರತದ ತಂಡದ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಯುಡು ತನ್ನ ಸ್ಥಾನಕ್ಕೆ ವಿಜಯ್ ಶಂಕರ್ ಅವರನ್ನು ತಂದಿರುವ ಬಗ್ಗೆ ಇದಕ್ಕೂ ಮುನ್ನ ಟ್ವಿಟರ್ ಮೂಲಕ ಅಸಮಾಧಾನ ಹೊರ ಹಾಕಿದ್ದರು. 'ಈ ಬಾರಿಯ ವಿಶ್ವಕಪ್ ವೀಕ್ಷಿಸಲು ತ್ರಿ-ಡಿ ಗ್ಲಾಸ್ ಆರ್ಡರ್ ಮಾಡಿದ್ದೇನೆ' ಎಂದು ರಾಯುಡು ವ್ಯಂಗ್ಯವಾಡಿದ್ದರು.