ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಎರಡು ತಂಡಗಳು ಕೂಡ ಈ ಬಾರಿಯ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಹೀಗಾಗಿ ಸೆಮಿಫೈನಲ್ನಲ್ಲಿ ನಡೆಯಲಿರುವ ಈ ಎರಡು ತಂಡಗಳ ಮುಖಾಮುಖಿಯಲ್ಲಿ ಯಾವ ತಂಡಕ್ಕೆ ಮೇಲುಗೈ ದೊರೆಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಈ ಸೆಮಿಫೈನಲ್ ಪಂದ್ಯದ ಹಿಮ್ಮೆಲೆಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಲಿಯರ್ಸ್ ಐಸಿಸಿಗೆ ಅಂಕಣವನ್ನು ಬರೆದಿದ್ದಾರೆ. ಈ ಅಂಕಣದಲ್ಲಿ ದಕ್ಷಿಣ ಆಫ್ರಿಕಾದ ಪ್ರದರ್ಶನದ ಬಗ್ಗೆ ಎಬಿ ಡಿವಿಲಿಯರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯುದ್ದಕ್ಕೂ ದಕ್ಷಿಣ ಆಫ್ರಿಕಾ ತಂಡ ಉತ್ತಮ ಪ್ರದರ್ಶನ ನೀಡಿದ್ದಯ ಹಲವು ಆಟಗಾರರು ಮುಂದೆ ಬಂದು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದಿದ್ದಾರೆ.

"ಬೌಲಿಂಗ್ ದಾಳಿ ಅತ್ಯುತ್ತಮವಾಗಿದ್ದು ಮಾರ್ಜೋ ಜಾನ್ಸನ್ ಹಾಗೂ ಲುಂಗಿ ಎನ್ಗಿಡಿ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ನಂತರ ಕಗಿಸೋ ರಬಡಾ ಹಾಗೂ ಗೆರಾಲ್ಡ್ ಕೊಯೆಟ್ಜೀ ಕೂಡ ಎದುರಾಳಿಗಳಿಗೆ ಹೆಚ್ಚಿನ ಆಘಾತ ನಿಡುವ ಸಾಮರ್ಥ್ಯ ಹೊಂದಿದ್ದಾರೆ. ಇದಿಷ್ಟು ಸ್ಪಿನ್ನರ್ ಕೇಶವ್ ಮಹಾರಾಜ್ ದಾಳಿಗಿಳಿಯುವ ಮುನ್ನ. ಈ ಐವರು ದಾಳಿಗಿಳಿಸಿದರೆ ಆಸ್ಟ್ರೇಲಿಯಾ ತಂಡಕ್ಕೆ ನಿಜವಾಗಿಯೂ ಆಪಾಯವಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಇನ್ನು ಇದೇ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರಿಂದ ಅಪಾಯವಿದೆ ಎಂದಿದ್ದಾರೆ. ಟೆಂಬಾ ಬವುಮಾ ಪಡೆ ಮ್ಯಾಕ್ಸ್ವೆಲ್ ಅವರನ್ನು ಕ್ರೀಸ್ನಲ್ಲಿ ನೆಲೆಯೂರದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ ಎಬಿಡಿ.
"ಆಸ್ಟ್ರೇಲಿಯಾ ತಂಡ ನಿಜಕ್ಕೂ ಬಲಿಷ್ಠವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡ ಬಳಿಕ ಅದು ಅದ್ಭುತವಾದ ರೀತಿಯಲ್ಲಿ ತಿರುಗಿಬಿದ್ದಿದೆ. ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್ವೆಲ್ ಆಡಿದ ಆಟ ನಿಜಕ್ಕೂ ಅಮೋಘ. ಹಾಗಾಗಿ ಅಂಥಾ ಆಟಗಾರ ಕ್ರೀಸ್ನಲ್ಲಿ ಹೆಚ್ಚು ಕಾಲ ನೆಲೆಯೂರದಂತೆ ಮಾಡಬೇಕಾದ ಅಗತ್ಯವಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಿದ್ದಾರೆ ಆಸಿಸ್ ಪಡೆ ಸೋಲು ಅನುಭವಿಸಿತ್ತು. ಆದರೆ ಆ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡ ಸತತವಾಗಿ ಗೆಲುವು ಸಾಧಿಸುತ್ತಲೇ ಮುನ್ನುಗ್ಗಿದೆ. ಸತತ 7 ಪಂದ್ಯಗಳಲ್ಲಿ ಗೆದ್ದು ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ದಕ್ಷಿಣ ಆಪ್ರಿಕಾ ತಂಡ ಈವರೆಗೆ ಫೈನಲ್ಗೆ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. 2015ರ ವಿಶ್ವಕಪ್ನಲ್ಲಿ ಮಳೆಯಿಂದ ಅಡ್ಡಿಯುಂಟಾಗಿದ್ದ ಕಾರಣ ದಕ್ಷಿಣ ಆಫ್ರಿಕಾಸ ಸೆಮಿಓಐನಲ್ ಕನಸು ಭಗ್ನವಾಗಿತ್ತು. ಈ ಬಾರಿ ಕೂಡ ಸೆಮಿಫೈನಲ್ಗೆ ಮಳೆಯ ಆತಂಕ ಕಾಡುತ್ತಿದೆ.
"ಸಾಕಷ್ಟು ನೋವು, ಭಗ್ನ ಕನಸುಗಳ ಬಳಿಕ ಈ ಬಾರಿ ನಿಜಕ್ಕೂ ನಮ್ಮ ಸಮಯ ಎಂದು ಭಾಸವಾಗುತ್ತಿದೆ. ಇತಿಹಾಸದ ಭಾರವನ್ನು ಈ ತಂಡ ಹೋರುತ್ತಿಲ್ಲ. ಈ ಪಂದ್ಯಕ್ಕೆ ಸೆಮಿಫೈನಲ್ ಎನ್ನುವ ಒತ್ತಡ ಮಾತ್ರವೇ ಇದೆ. ಹೊಸ ತಂಡ ಫೈನಲ್ಗೆ ಪ್ರವೇಶ ಪಡೆಯದಿರಲು ಕಾರಣಗಳೇ ಇಲ್ಲ. ಈ ತಂಡ ಅದನ್ನು ಸಾಧ್ಯವಾಗಿಸುತ್ತದೆ ಎನ್ನುವ ವಿಶ್ವಾಸವಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.