
ಮಹಿಳಾ ಪ್ರೀಮಿಯರ್ ಲೀಗ್ನ ಪ್ರತಿಷ್ಠಿತ ಪಂದ್ಯದಲ್ಲಿ ಮಾರ್ಚ್ 6ರಂದು ಸೋಮವಾರ (ಇಂದು) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಮುಂಬೈನ ಬ್ರಾಬೌರ್ನ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಆರ್ಸಿಬಿ ಈಗಾಗಲೇ ತಾನು ಆಡಿದ ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದೆ. ಮುಂಬೈ ಇಂಡಿಯನ್ಸ್ ಟೂರ್ನಿಯ ಮೊದಲ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ವಿರುದ್ಧ 143 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಎರಡೂ ತಂಡಗಳಲ್ಲಿ ವಿಶ್ವದ ದಿಗ್ಗಜ ಆಟಗಾರರಿರುವುದು ಪಂದ್ಯದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆರ್ಸಿಬಿ ತಂಡವನ್ನು ಸ್ಮೃತಿ ಮಂದಾನ ಮುನ್ನಡೆಸಿದರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಹರ್ಮನ್ಪ್ರೀತ್ ಕೌರ್ ನಾಯಕಿಯಾಗಿದ್ದಾರೆ. ಎರಡೂ ತಂಡಗಳು ಬಲಿಷ್ಠವಾಗಿರುವುದರಿಂದ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷೆ ಮಾಡುವುದು ಕಷ್ಟವಾಗಿದೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತ್ರ ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುತ್ತದೆ ಎಂದು ಹೇಳಿದ್ದು, ಅದಕ್ಕೆ ಕಾರಣಗಳನ್ನು ನೀಡಿದ್ದಾರೆ.

ಆರ್ಸಿಬಿ ತಂಡಕ್ಕೆ ಗೆಲ್ಲುವ ಅವಕಾಶ
ತಮ್ ಯೂಟ್ಯೂಟ್ ಚಾನೆಲ್ನಲ್ಲಿ ಮಾತನಾಡಿದ ಅವರು, ಸೋಮವಾರ ನಡೆಯುವ ಪಂದ್ಯದಲ್ಲಿ ಸ್ಮೃತಿ ಮಂದಾನ ಪಡೆ ಹರ್ಮನ್ಪ್ರೀತ್ ಕೌರ್ ತಂಡದ ವಿರುದ್ಧ ಗೆಲುವು ಸಾಧಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಮೊದಲನೇ ಪಂದ್ಯದಲ್ಲಿ ಸೋಲು ಕಂಡ ಬಳಿಕ ಆರ್ಸಿಬಿ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯ ಬ್ರಾಬೌರ್ನೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್ಸಿಬಿ ಮೊದಲೇ ಪಂದ್ಯವನ್ನು ಇದೇ ಅಂಗಳದಲ್ಲಿ ಆಡಿದ್ದಾರೆ, ಆದರೆ ಮುಂಬೈ ಇಂಡಿಯನ್ಸ್ ಇಲ್ಲಿ ಇನ್ನೂ ಪಂದ್ಯವನ್ನು ಆಡಿಲ್ಲ. ನೀವು ಮುಂಬೈ ಇಂಡಿಯನ್ಸ್ ಗೆಲ್ಲಬಹುದು ಎಂದು ಭಾವಿಸಿದರೆ, ನಾನು ಆರ್ಸಿಬಿ ಗೆಲ್ಲುತ್ತದೆ ಎಂದು ವಿಶ್ವಾಸ ಹೊಂದಿದ್ದೇನೆ" ಎಂದು ಹೇಳಿದ್ದಾರೆ.

ಪೆರ್ರಿ, ಮಂದಾನ ಉತ್ತಮವಾಗಿ ಆಡಬೇಕು
ಆರ್ಸಿಬಿ ತಂಡದ ಪ್ರಮುಖ ಬ್ಯಾಟರ್ ಸ್ಮೃತಿ ಮಂದಾನ ಮತ್ತು ಸೋಫಿ ಡಿವೈನ್ ಹೆಚ್ಚಿನ ರನ್ ಗಳಿಸಬೇಕು ಮತ್ತು ಎಲಿಸ್ ಪೆರ್ರಿ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. "ಸ್ಮೃತಿ ಮಂದಾನ ರನ್ ಗಳಿಸಬೇಕು, ಆಫ್ ಸ್ಪಿನ್ನರ್ ವಿರುದ್ಧ ಅವರು ಔಟಾಗಬಾರದು. ಹೇಲಿ ಮ್ಯಾಥ್ಯೂಸ್ ಮಂದಾನ ವಿರುದ್ಧ ಬೌಲಿಂಗ್ ಮಾಡಲಿದ್ದಾರೆ, ಮಂದಾನ ಎಚ್ಚರಿಕೆಯಿಂದ ಆಡಬೇಕು. ಸೋಫಿ ಡಿವೈನ್ ಕೂಡ ಹೆಚ್ಚಿನ ರನ್ ಗಳಿಸಬೇಕು" ಎಂದು ಹೇಳಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಮಂದಾನ 23 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಅವರು ಆಫ್ ಸ್ಪಿನ್ನರ್ ಆಲಿಸ್ ಕ್ಯಾಪ್ಸೆಗೆ ವಿಕೆಟ್ ಒಪ್ಪಿಸಿದ್ದರು. ಪೆರ್ರಿ ಬೌಲಿಂಗ್ನಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿರಲಿಲ್ಲ.