ಸೋಮವಾರ, ಮಾರ್ಚ್ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2ನೇ ಅವೃತ್ತಿಯ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಜ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವನಿತೆಯರು ಬೃಹತ್ ಮೊತ್ತ ದಾಖಲಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಮಹಿಳಾ ತಂಡ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ್ರಿ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ಗಳನ್ನು ಗಳಿಸಿತು.

ಆರ್ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಸ್ಮೃತಿ ಮಂಧಾನ ಮತ್ತು ಸಬ್ಬಿನೇನಿ ಮೇಘನಾ ಮೊದಲ ವಿಕೆಟ್ಗೆ 5.1 ಓವರ್ಗಳಲ್ಲಿ 51 ರನ್ಗಳ ಜೊತೆಯಾಟ ನಿರ್ಮಿಸಿ ಉತ್ತಮ ಆರಂಭ ಒದಗಿಸಿದರು.
ಸಬ್ಬಿನೇನಿ ಮೇಘನಾ 21 ಎಸೆತಗಳಲ್ಲಿ 5 ಬೌಂಡರಿ ಸಮೇತ 28 ರನ್ ಗಳಿಸಿದರೆ, ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 80 ರನ್ ಬಾರಿಸಿದರು
ಇದೇ ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತನ್ನ ಕೊನೆಯ ಪಂದ್ಯವನ್ನು ಆಡುವುದರೊಂದಿಗೆ, ಎಲ್ಲಿಸ್ ಪೆರ್ರಿ ಸ್ಥಳದಲ್ಲಿದ್ದ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರನ್ನು ರಂಜಿಸಿದರು. ಎಲ್ಲಿಸ್ ಪೆರ್ರಿಯ ಒಂದು ಸಿಕ್ಸರ್ ಶಾಟ್ ಟಾಟಾ ಪಂಚ್ ಕಾರಿನ ಕಿಟಕಿ ಗಾಜನ್ನು ಹೊಡೆದು ಹಾಕಿತು.

ದೀಪ್ತಿ ಶರ್ಮಾ ಎಸೆದ 19ನೇ ಓವರ್ನ ಅಂತಿಮ ಎಸೆತದಲ್ಲಿ ಎಲ್ಲಿಸ್ ಪೆರ್ರಿ ಲಾಂಗ್-ಆನ್ ಕಡೆಗೆ ಬೌಂಡರಿ ಗೆರೆ ದಾಟಿಸಿ 80-ಮೀಟರ್ ಸಿಕ್ಸರ್ಗಟ್ಟಿದರು. ಚೆಂಡು ಬೌಂಡರಿ ಗೆರೆ ಮೇಲೆ ಸಾಗಿ ಪಂಚ್ ಕಾರಿನ ಕಿಟಕಿ ಗಾಜನ್ನು ಒಡೆದು ಹಾಕಿತು.
ಅದನ್ನು ನೋಡಿದ 33 ವರ್ಷದ ಎಲ್ಲಿಸ್ ಪೆರ್ರಿ ಕೂಡ ಆಶ್ಚರ್ಯಚಕಿತರಾದರು ಮತ್ತು ಕಿಟಕಿ ಗಾಜು ಒಡೆದಿರುವುದನ್ನು ನೋಡಿದ ನಂತರ ತಲೆಯ ಮೇಲೆ ಕೈ ಹೊತ್ತುಕೊಂಡರು.
ಅಂಜಲಿ ಸರ್ವಾಣಿ ಬೌಲಿಂಗ್ನಲ್ಲಿ ಸಬ್ಬಿನೇನಿ ಮೇಘನಾ ಅವರ ವಿಕೆಟ್ ಬಿದ್ದ ನಂತರ ಬ್ಯಾಟಿಂಗ್ಗೆ ಬಂದ ಎಲ್ಲಿಸ್ ಪೆರ್ರಿ, ಯುಪಿ ವಾರಿಯರ್ಜ್ ವಿರುದ್ಧ ಅತ್ಯುತ್ತಮ ಪ್ರದರ್ಶನ ಬ್ಯಾಟಿಂಗ್ ನೀಡಿದರು. 34 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು ಮತ್ತು 37 ಎಸೆತಗಳಲ್ಲಿ 4 ಬೌಂಡರಿಗಳು ಮತ್ತು 4 ಸಿಕ್ಸರ್ಗಳೊಂದಿಗೆ 58 ರನ್ ಗಳಿಸಿ ಅಂತಿಮ ಓವರ್ನಲ್ಲಿ ಔಟಾದರು.
ಕೊನೆಯ ಓವರ್ನ ಮೊದಲ ಎಸೆತದಲ್ಲಿ ಸೋಫಿ ಎಕ್ಲೆಸ್ಟೋನ್ ಬೌಲಿಂಗ್ನಲ್ಲಿ ಎಲ್ಲಿಸ್ ಪೆರ್ರಿ ಔಟ್ ಆದರು. ಇದಕ್ಕೂ ಮುನ್ನ ಈಗಾಗಲೇ ಆರ್ಸಿಬಿ ತಂಡವನ್ನು ಸುರಕ್ಷಿತ ಮೊತ್ತದಲ್ಲಿರಿಸಿದ್ದರು.
ಎಲ್ಲಿಸ್ ಪೆರ್ರಿ ಮತ್ತು ಸ್ಮೃತಿ ಮಂಧಾನ ಜೋಡಿ ಎರಡನೇ ವಿಕೆಟ್ಗೆ 64 ಎಸೆತಗಳಲ್ಲಿ 95 ರನ್ಗಳ ಜೊತೆಯಾಟವನ್ನು ಸೇರಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ, ಎಲ್ಲಿಸ್ ಪೆರ್ರಿ ಅವರ ಆರೋಗ್ಯ ಸರಿ ಇಲ್ಲದಿದ್ದರೂ ಅತ್ಯುತ್ತಮವಾದದ್ದನ್ನು ನೀಡಿದ್ದಕ್ಕಾಗಿ ನಾಯಕಿ ಸ್ಮೃತಿ ಹೊಗಳಿದರು.