2023ರ ಮಹಿಳಾ ಪ್ರೀಮಿಯರ್ ಲೀಗ್ (WPL) ಚೊಚ್ಚಲ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಕಳೆದ ಡಿಸೆಂಬರ್ನಲ್ಲಿ ಎರಡನೇ ಆವೃತ್ತಿಗೆ ಮುಂಚಿತವಾಗಿ ಹರಾಜು ನಡೆಸಿದಾಗ ತಮ್ಮ ಬೌಲಿಂಗ್ ಘಟಕದೊಂದಿಗೆ ಆರ್ಸಿಬಿ ಎದುರಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೆಲವು ಉತ್ತಮ ಆಯ್ಕೆ ಮಾಡಿಕೊಂಡರು.
JioCinema ಮತ್ತು Sports18ನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನ ಕಾಮೆಂಟೇಟರ್ ಅಭಿನವ್ ಮುಕುಂದ್ ಈ ಬದಲಾವಣೆಗಳು ಆರ್ಸಿಬಿ ತಂಡಕ್ಕೆ ಹೇಗೆ ಪ್ರಯೋಜನವಾಗಲಿದೆ ಮತ್ತು ಈ ಬಾರಿ ತಂಡದಿಂದ ಅಭಿಮಾನಿಗಳು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಮಾತನಾಡಿದರು.

ಆರ್ಸಿಬಿ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ ಅಭಿನವ್ ಮುಕುಂದ್, "ಕಳೆದ ವರ್ಷದ ಬದಲಾವಣೆಯನ್ನು ನೋಡಿದರೆ, ಡ್ಯಾನಿ ವ್ಯಾಟ್, ಮೇಗನ್ ಶುಟ್ ಮೊದಲಿಗಿಂತ ಹೆಚ್ಚು ಸಮತೋಲಿತವಾಗಿ ಕಾಣುವ ತಂಡಕ್ಕೆ ದಾರಿ ಮಾಡಿಕೊಡುತ್ತಾರೆ," ಎಂದರು.
"ಆರ್ಸಿಬಿ ಇದೀಗ ಏಕ್ತಾ ಬಿಶ್ತ್ ಮತ್ತು ಸಿಮ್ರಾನ್ ಬಹದ್ದೂರ್ ಅವರನ್ನು ಖರೀದಿಸಿದೆ. ಆದ್ದರಿಂದ ಅವರ ಬೌಲಿಂಗ್ ವಿಭಾಗ ಹೇಗಿರಲಿದೆ ಎಂಬುದರ ವಿಷಯದಲ್ಲಿ ಜಾಣ್ಮೆ ತೋರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಬೌಲಿಂಗ್ ವಿಭಾಗ ಒಂದು ಕಳವಳಕಾರಿ ವಿಷಯವಾಗಿತ್ತು ಮತ್ತು ಈ ಬಾರಿಯ ಹರಾಜಿಗೆ ಬಂದ ತಕ್ಷಣ ಅದನ್ನು ಪರಿಹರಿಸಿದ್ದಾರೆ. ಜಾರ್ಜಿಯಾ ವೇರ್ಹ್ಯಾಮ್ ಕ್ಲಾಸ್ ಬೌಲರ್ ಆಗಿರುವುದರಿಂದ ಹರಾಜಿನಲ್ಲಿ ಕಡಿಮೆ ಮೊತ್ತದ ಆಯ್ಕೆಯಾಗಿದೆ," ಎಂದು ಅಭಿನವ್ ಮುಕುಂದ್ ತಿಳಿಸಿದರು.
"ಆರ್ಸಿಬಿ ತಂಡದಲ್ಲಿರುವ ಭಾರತದ ಯುವ ಆಟಗಾರ್ತಿಯರು ನಿಜವಾಗಿಯೂ ಉತ್ತಮವಾಗಿದ್ದಾರೆ. ರಿಚಾ ಘೋಷ್ ಅದ್ಭುತ ಪ್ರತಿಭೆ. ಸಹಜವಾಗಿಯೇ ಸ್ಮೃತಿ ಮಂಧಾನ, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ".

"ಹೀಗಾಗಿ, ನಾನು ಈ ಆರ್ಸಿಬಿ ತಂಡದ ತಂಡವನ್ನು ಇಷ್ಟಪಡುತ್ತೇನೆ. ಆದರೆ ಅವರ ಸ್ಟಾರ್ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕು. ಸ್ಮೃತಿ ಮಂಧಾನ ಮತ್ತು ಎಲ್ಲಿಸ್ ಪೆರ್ರಿ ತಂಡವನ್ನು ಮುಂದೆ ನಿಂತು ಆಡಿ ಗೆಲ್ಲಿಸಬೇಕು," ಎಂದು ಭಾರತದ ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್ ಹೇಳಿದರು.
"ನಮ್ಮ ತಂತ್ರವು ನಮ್ಮ ಬೌಲಿಂಗ್ ವಿಭಾಗವನ್ನು ಬಲಪಡಿಸುವುದರ ಮೇಲಿತ್ತು. ನಾವು ಆಯ್ಕೆ ಮಾಡಿದ ಬೌಲರ್ಗಳ ವೈವಿಧ್ಯತೆಯಿಂದ ನಾವು ನಿಜವಾಗಿಯೂ ಸಂತೋಷಪಡುತ್ತೇವೆ," ಎಂದು ಆರ್ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ತಿಳಿಸಿದರು.
"ಕೇಟ್ ಕ್ರಾಸ್ ಮತ್ತು ಏಕ್ತಾ ಬಿಶ್ತ್ ಅವರಂತಹ ಅನುಭವಿ ಆಟಗಾರ್ತಿಯರನ್ನು ಸೇರಿಸುವುದು ತಂತ್ರದ ಭಾಗವಾಗಿತ್ತು. ಡಬ್ಲ್ಯುಪಿಎಲ್ ಹೆಚ್ಚಿನ ಒತ್ತಡದ ಪಂದ್ಯಾವಳಿಯಾಗಿದೆ, ಆದ್ದರಿಂದ ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಕೆಲವು ಆಟಗಾರ್ತಿಯರನ್ನು ಹೊಂದುವುದು ನಮಗೆ ನಿಜವಾಗಿಯೂ ಮುಖ್ಯವಾಗಿದೆ," ಎಂದರು.