ಗುಜರಾತ್ ಜೈಂಟ್ಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈಗಾಗಲೇ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ಗೆ ಈ ಪಂದ್ಯ ಮಹತ್ವದಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಜಯ ಸಾಧಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಕಾಣುತ್ತಿದೆ. ಅಲ್ಲದೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.
ಆರ್ಸಿಬಿ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದು, ಆಡಿದ 7 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು, 4 ಅಂಕ ಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳುವ ಲೆಕ್ಕಾಚಾರವನ್ನು ಆರ್ಸಿಬಿ ಮಾಡಿಕೊಂಡಿದೆ. ಹಾಲಿ ಚಾಂಪಿಯನ್ ಪಟ್ಟವನ್ನು ಹೊಂದಿರುವ ಬೆಂಗಳೂರು ತಂಡ, ಲೀಗ್ ಹಂತದಲ್ಲೇ ಈ ಬಾರಿ ಟೂರ್ನಿಗೆ ಗುಡ್ ಬಾಯ್ ಹೇಳಲಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದು, ಕುತೂಹಲ ಮೂಡಿಸಿದೆ.

ಸೋಮವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 9 ರನ್ಗಳಿಂದ ಮಣಿಸಿರುವ ಮುಂಬೈ ಇಂಡಿಯನ್ಸ್ ಆತ್ಮ ವಿಶ್ವಾಸದಿಂದ ಕೂಡಿದೆ. ಮುಂಬೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚಲು ಸ್ಟಾರ್ ಆಟಗಾರ್ತಿಯರು ರೆಡಿಯಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ಹರ್ಮನ್ ಪ್ರೀತ್ ಕೌರ್ ಭರವಸೆ ಮೂಡಿಸಿದ್ದಾರೆ. ಇವರಿಗೆ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ನ್ಯಾಟ್ ಸ್ಕೀವರ್ ಬ್ರಂಟ್ ಹಾಗೂ ಹ್ಯಾಲಿ ಮ್ಯಾಥ್ಯೂಸ್ ಉತ್ತಮ ಸಾಥ್ ನೀಡಬಲ್ಲರು. ಉಳಿದಂತೆ ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಅಮೇಲಿಯಾ ಕೇರ್, ಅಮನ್ಜೋತ್ ಕೌರ್ ತಂಡಕ್ಕೆ ನೆರವಾಗಬೇಕಿದೆ.
ಗುಜರಾತ್ ವಿರುದ್ದದ ಪಂದ್ಯದಲ್ಲಿ ಹ್ಯಾಲಿ ಮ್ಯಾಥ್ಯೂಸ್ 3 ವಿಕೆಟ್ ಪಡೆದು ಬೀಗಿದ್ದಾರೆ. ಶಬ್ನಮಿ ಇಸ್ಮಾಯಲ್ ಸಹ ಲಯಕ್ಕೆ ಮರಳಿದ್ದಾರೆ. ಲೀಗ್ ಹಂತದ ಕೊನೆಯ ಪಂದ್ಯಕ್ಕೂ ಮುನ್ನ ಈ ಆಟಗಾರ್ತಿಯರು ಲಯಕ್ಕೆ ಮರಳಿರುವುದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಸಂಸ್ಕೃತಿ ಗುಪ್ತಾ, ಪೂರ್ಣಿಕಾ ಸಿಸೋಡಿಯಾ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ಟೂರ್ನಿಗೆ ವಿದಾಯ ಹೇಳುವ ಪ್ಲ್ಯಾನ್ ಮಾಡಿಕೊಂಡಿದೆ. ಆರ್ಸಿಬಿ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಸ್ಮೃತಿ ಮಂಧನಾ ಬ್ಯಾಟ್ ಮೌನಕ್ಕೆ ಶರಣಾಗಿರುವುದು ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಡ್ಯಾನಿ ವೈಟ್ ಸಹ ಭರವಸೆ ಮೂಡಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಟಾಪ್ ರನ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಎಲ್ಲಿಸಾ ಪೆರ್ರಿ ಅವರ ಮೇಲೆ ಒತ್ತಡ ಹೆಚ್ಚಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಧಾರ ಎಂದೇ ಖ್ಯಾತಿ ಪಡೆದಿರುವ ರಿಚಾ ಘೋಷ್ ತಮ್ಮ ನೈಜ್ಯ ಆಟವನ್ನು ಆಡಬೇಕಿದೆ.
ಆರ್ಸಿಬಿ ತಂಡದಲ್ಲೂ ಸ್ಟಾರ್ ಬೌಲರ್ಗಳು ಇದ್ದು ಶಿಸ್ತು ಬದ್ದ ದಾಳಿ ಸಂಘಟಿಸಬೇಕಿದೆ. ಕಿಮ್ ಗಾರ್ತ್, ರೇಣುಕಾ ಸಿಂಗ್, ಜಾರ್ಜಿಯಾ ವೇರ್ಹ್ಯಾಮ್ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದಯ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕಬೇಕಿದೆ. ಅಂದಾಗ ಗೆಲುವಿನ ಕನಸು ನನಸಾಗುತ್ತದೆ.