WPL 2026 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ವಿರುದ್ಧ ಸೋಲನುಭವಿಸುವ ಮೂಲಕ ಇದ್ದ ಫೈನಲ್ ತಲುಪಬೇಕಿದ್ದ ಒಂದು ಅವಕಾಶವನ್ನು ಕಳೆದುಕೊಂಡಿದೆ. ಹಾಗಾದರೆ, ಇದೀಗ ಈ ಹಂತ ತಲುಪಲು ಬೆಂಗಳೂರು ತಂಡದ ಮುಂದೆ ಇರುವ ಸವಾಲು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಡೋದರಾದಲ್ಲಿ ಡಬ್ಲ್ಯೂಪಿಎಲ್ 2026 16ನೇ ಪಂದ್ಯ ನಡೆದಿದ್ದು, ಈ ವೇಳೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ಗಳನ್ನು ಕಲೆಹಾಕಿ 200 ರನ್ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 184 ರನ್ಗಳನ್ನಷ್ಟೇ ಕಲೆಹಾಕಿ ಮುಂಬೈ ವಿರುದ್ಧ ಸೋಲೊಪ್ಪಿಕೊಂಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದು ಸತತ ಎರಡನೇ ಸೋಲು ಆಗಿದೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ಗಳಿಂದ ಸೋಲು ಕಂಡಿದ್ದ ಆರ್ಸಿಬಿ, ಮುಂಬೈ ಎದುರು ಮತ್ತೆ ಮುಗ್ಗರಿಸಿದೆ. ವಿಶೇಷ ಅಂದ್ರೆ, ಸೀಸನ್ ಆರಂಭದಲ್ಲಿ ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿ ದಾಖಲೆ ಬರೆದಿದ್ದ ಆರ್ಸಿಬಿಗೆ ಇದೀಗ ಫೈನಲ್ ಪ್ರವೇಶದ ಹಾದಿ ಕಠಿಣವಾಗಿದೆ. ನೇರವಾಗಿ ಫನಲ್ ಪ್ರವೇಶ ಮಾಡಬೇಕಂದ್ರೆ, ಉಳಿದ ಒಂದು ಪಂದ್ಯದಲ್ಲಿ ಗೆಲ್ಲಲ್ಲೇಬೇಕಿದೆ.
ನೇರ ಫೈನಲ್ ಪ್ರವೇಶದ ಹಾದಿ ಕಠಿಣ: ಎರಡು ಸೋಲುಗಳಿಂದಾಗಿ ಆರ್ಸಿಬಿ ತಂಡದ ನೇರ ಫೈನಲ್ ಪ್ರವೇಶದ ಅವಕಾಶಕ್ಕೆ ತೊಡಕುಂಟಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಗೆದ್ದಿದ್ದರೆ, ಆರ್ಸಿಬಿ ತಂಡವು ಯಾವುದೇ ಲೆಕ್ಕಾಚಾರವಿಲ್ಲದೆ ನೇರವಾಗಿ ಫೈನಲ್ ಪ್ರವೇಶ ಪಡೆಯಬಹುದಾಗಿತ್ತು. ಆದರೆ, ಇದೀಗ ತಂಡ ಎಲಿಮಿನೇಟರ್ ಪಂದ್ಯವಾಡುವ ಅಪಾಯವನ್ನು ಎದುರಿಸುತ್ತಿದೆ.
ನೇರ ಫೈನಲ್ ಪ್ರವೇಶಕ್ಕೆ ಏನು ಮಾಡಬೇಕು?: ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ ಲೀಗ್ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್ಸಿಬಿ ತಂಡವು ಯುಪಿ ವಾರಿಯರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಜನವರಿ 29ರಂದು ನಡೆಯಲಿರುವ ಈ ಪಂದ್ಯದಲ್ಲಿ ಜಯ ಸಾಧಿಸಿದರೆ, ಆರ್ಸಿಬಿಗೆ ನೇರ ಫೈನಲ್ ಪ್ರವೇಶ ಖಚಿತ ಆಗಲಿದೆ.
ಆರ್ಸಿಬಿ ಮುಂದಿದೆ ಕಠಿಣ ಸವಾಲು: ಒಂದು ವೇಳೆ ಯುಪಿ ವಾರಿಯರ್ಸ್ ವಿರುದ್ಧ ಸೋಲನುಭವಿಸಿದರೆ, ಫೈನಲ್ ಪ್ರವೇಶ ನೆಟ್ ರನ್ ರೇಟ್ ಲೆಕ್ಕಾಚಾರಕ್ಕೆ ಅವಲಂಬಿತವಾಗಲಿದೆ. ಯಾಕಂದ್ರೆ, ಉಳಿದ ತಂಡಗಳಿಗೂ ಮುಂದಿನ ಪಂದ್ಯಗಳಲ್ಲಿ 10 ಅಂಕಗಳನ್ನು ಪಡೆಯುವ ಅವಕಾಶವಿದೆ. ಈ ಪರಿಸ್ಥಿತಿಯಲ್ಲಿ ಲೀಗ್ ಹಂತದ ಅಂತ್ಯಕ್ಕೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ನೇರ ಫೈನಲ್ ಪ್ರವೇಶ ಲಭಿಸುತ್ತದೆ. ಪ್ರಸ್ತುತ 10 ಅಂಕಗಳನ್ನು ಹೊಂದಿರುವ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಗೆದ್ದರೆ, 12 ಅಂಕಗಳನ್ನು ಗಳಿಸಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊನೆಯ ಲೀಗ್ ಪಂದ್ಯವೇ ಫೈನಲ್ ಟಿಕೆಟ್ ನಿರ್ಧರಿಸುವ ಪಂದ್ಯ ಆಗಿದೆ ಎನ್ನಬಹುದು. ಇದರಲ್ಲಿ ಸೋತರೆ, ಫೈನಲ್ ಪ್ರವೇಶ ಕೈತಪ್ಪಲಿದ್ದು, ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ. ಆದ್ದರಿಂದ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದೇ ಆರ್ಸಿಬಿ ಮುಂದಿರುವ ದೊಡ್ಡ ಸಲಾಗಿದೆ.