WPL ಫೈನಲ್ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್ಸಿಬಿ ವನಿತೆಯರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಕಪ್ ಎತ್ತಿ ಸಂಭ್ರಮಿಸಿದ್ದಾರೆ. ಈ ಜೋಶ್ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನು ಹಸಿರಾಗಿದೆ. ಇದರ ಬೆನ್ನಲ್ಲೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನುಡಿದ ಭವಿಷ್ಯ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ.
16 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿರುವ ಸ್ಮೃತಿ ಮಂದಾನ ಪಡೆ, ಆರ್ಸಿಬಿ ಶೋಕೆಸ್ನಲ್ಲಿ ಚೊಚ್ಚಲ ಟ್ರೋಫಿ ಇಟ್ಟಿದೆ. ಸ್ಮೃತಿ ತಂಡದ ಸಾಧನೆಯಿಂದ ಆರ್ಸಿಬಿ ಪುರುಷರ ತಂಡದ ಉತ್ಸಾಹ ಇಮ್ಮಡಿಯಾಗಿದೆ. ಅಲ್ಲದೆ ನವ ಉತ್ಸಾಹದಿಂದಲೇ ಈ ಬಾರಿ ಕಣಕ್ಕೆ ಇಳಿಯಲಿದೆ. ಈ ಬಗ್ಗೆ ವಿಶ್ವ ಕ್ರಿಕೆಟ್ ದಿಗ್ಗಜ ಆಟಗಾರರಲ್ಲಿ ಒಬ್ಬರು ಭವಿಷ್ಯ ನುಡಿದಿದ್ದಾರೆ. 2024 ಆರ್ಸಿಬಿ ಪಾಲಿಗೆ ಡಬಲ್ ಖುಷಿ ನೀಡಲಿದೆ ಎಂದು ಇಂಗ್ಲೆಂಡ್ ಪ್ಲೇಯರ್ ತಿಳಿಸಿದ್ದಾರೆ.

17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಭವಿಷ್ಯ ನುಡಿದ ದಿಗ್ಗಜ ಮೈಕಲ್ ವಾನ್. ಇವರು ಟೀಮ್ ಇಂಡಿಯಾವನ್ನು ಟೀಕಿಸುತ್ತಲೆ ಬಂದಿದ್ದಾರೆ. ಆದರೆ ಈ ಬಾರಿ ಮಾತ್ರ ಆರ್ಸಿಬಿ ತಂಡವನ್ನು ಮೈಕಲ್ ವಾನ್ ಹಾಡಿ ಹೊಗಳಿದ್ದಾರೆ.
WPL ಫೈನಲ್ ಬಗ್ಗೆ ನೀಡಿರುವ ತಮ್ಮ ಹೇಳಿಕೆಯಲ್ಲಿ ಮೈಕಲ್ ವಾನ್, ಆರ್ಸಿಬಿ ಭರ್ಜರಿ ಪ್ರದರ್ಶನವನ್ನು ನೀಡಿದೆ. ಇನ್ನು ಪುರುಷರ ತಂಡ ಸಹ ಈ ಸಾಧನೆ ಮಾಡಬೇಕಿದೆ. ಆರ್ಸಿಬಿ ಪುರುಷರ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು, ಅವರು ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ನೆರವಾಗಬಲ್ಲರು ಎಂದಿದ್ದಾರೆ.

ಆರ್ಸಿಬಿ ಪುರುಷರ ತಂಡ ತಮ್ಮ ತಯಾರಿ ಹಾಗೂ ಕ್ಷಮತೆಯನ್ನು ಮೈದಾನದಲ್ಲಿ ಪ್ರದರ್ಶಿಸಿದಲ್ಲಿ ಆರ್ಸಿಬಿ ಈ ಬಾರಿ ಚಾಂಪಿಯನ್ ಆಗಲಿದೆ. ಅಲ್ಲದೆ 2024ರಲ್ಲಿ ಆರ್ಸಿಬಿ ಡಬಲ್ ಟ್ರೋಫಿ ಗೆಲ್ಲಬಹುದು ಎಂದು ವಾನ್ ತಿಳಿಸಿದ್ದಾರೆ.
ಆರ್ಸಿಬಿ ತಂಡದ ತಾಕತ್ತು ಎಂದರೆ ಅದು ಬ್ಯಾಟಿಂಗ್.. ಕೆಜಿಎಫ್ ಸ್ಟಾರ್ಸ್ ಎಂದೇ ಖ್ಯಾತಿ ಪಡೆದಿರುವ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೇಸಿಸ್ ತಂಡಕ್ಕೆ ತಮ್ಮ ಧಮಾಕೆದಾರ್ ಬ್ಯಾಟಿಂಗ್ನಿಂದ ನೆರವಾಗಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದಾರ್, ಕ್ಯಾಮ್ರುನ್ ಗ್ರೀನ್, ದಿನೇಶ್ ಕಾರ್ತಿಕ್ ರಂತಹ ಆಟಗಾರರು ಭರವಸೆ ಮೂಡಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗದ ನೊಗವನ್ನು ಹೊರಲಿದ್ದು, ಈ ಪ್ಲೇಯರ್ಗೆ ದುಬಾರಿ ಆಟಗಾರ ಅಲ್ಜರಿ ಜೋಸೆಫ್ ಉತ್ತಮ ಸಾಥ್ ನೀಡಬೇಕಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ್ದೇ ಆದಲ್ಲಿ ನಿಶ್ಚಿತವಾಗಿಯೂ ಈ ಬಾರಿ ಕಪ್ ನಮ್ದೇ...