
ಸನ್ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಆಟಗಾರ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಗಾಯಗೊಂಡಿದ್ದು ಕಲೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ. ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೂ ಸಾಹಾ ಅನುಮಾನ ಎನ್ನಲಾಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದ ಟಾಸ್ ಸಂದರ್ಭದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಸಾಹಾ ಗಾಯದ ಬಗ್ಗೆ ಮಾಹಿತಿಯನ್ನು ನೀಡಿದರು. ಸಾಹ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಹಾಗಾಗಿ ಇಂದಿನ ಪಂದ್ಯಕ್ಕೂ ಕಣಕ್ಕಿಳಿಯುತ್ತಿಲ್ಲ ಎಂಬುದನ್ನು ಡೇವಿಡ್ ವಾರ್ನರ್ ಸ್ಪಷ್ಟಪಡಿಸಿದ್ದರು.
ವೃದ್ಧಿಮಾನ್ ಸಾಹ ಈ ಬಾರಿಯ ಆರಂಭಿಕ ಹಂತದಲ್ಲಿ ಕೆಲವೇ ಪಂದ್ಯಗಳಲ್ಲಿ ಅವಕಾಶವನ್ನು ಪಡೆದುಕೊಂಡಿದ್ದರು. ಆದರೆ ಬಳಿಕ ಟೂರ್ನಿಯ ದ್ವಿತೀಯಾರ್ಧದ ಕೊನೆಯ ಹಂತದಲ್ಲಿ ಡೇವಿಡ್ ವಾರ್ನರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಶುರು ಮಾಡಿದರು. ಇದರಲ್ಲಿ ಅದ್ಭುತ ಯಶಸ್ಸನ್ನು ಕಂಡಿದ್ದರು.
ಲೀಗ್ ಹಂತದ ಕೊನೆಯ ಪಂದ್ಯ ಹೈದರಾಬಾದ್ಗೆ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಸಾಹ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಹ ವಾರ್ನರ್ ಜೊತೆಗೆ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಮುಂಬೈ ನೀಡಿದ್ದ 151 ರನ್ಗಳ ಗುರಿಯನ್ನು ಈ ಜೋಡಿ ವಿಕೆಟ್ ಕಳೆದುಕೊಳ್ಳದೆ ಗುರಿ ತಲುಪಿತ್ತು. ಆದರೆ ಈ ಪಂದ್ಯದಲ್ಲಿ ಸಾಹ ಗಾಯಗೊಂಡಿದ್ದರು. ಆರ್ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೂ ಸಾಹ ಕಣಕ್ಕಿಳಿದಿರಲಿಲ್ಲ.
ನೆವೆಂಬರ್ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಚಾಲನೆ ದೊರೆಯಲಿದೆ. ಇದರಲ್ಲಿ ಡಿಸೆಂಬರ್ ಅಂತ್ಯಕ್ಕೆ ಆರಂಭವಾಗುವ ಟೆಸ್ಟ್ ತಂಡದಲ್ಲಿ ಸಾಹ ಮುಕ್ಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ಆದರೆ ಈಗ ಸಾಹ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಬಗ್ಗೆ ಸ್ಪಷ್ಟತೆಯಿಲ್ಲ. ಅವರ ಗಾಯದ ಗಂಭೀರತೆಯ ಬಗ್ಗೆ ಇನ್ನಷ್ಟೇ ಮಾಹಿತಿಗಳು ಲಬ್ಯವಾಗಬೇಕಿದೆ.