
ಸೌಥಾಂಪ್ಟನ್, ಜೂನ್ 23: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಐದನೇ ದಿನದಾಟದ ಸಂದರ್ಭದಲ್ಲಿ ಇಬ್ಬರು ಪ್ರೇಕ್ಷಕರನ್ನು ಹೊರಗೆ ಸ್ಟೇಡಿಯಂನಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ. ನ್ಯೂಜಿಲೆಂಡ್ನ ಆಟಗಾರರಿಗೆ ನಿಂದಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಯಿತು.
ಈ ಬಗ್ಗೆ ಐಸಿಸಿ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ. "ನ್ಯೂಜಿಲೆಂಡ್ನ ಆಟಗಾರರನ್ನು ಗುರಿಯಾಗಿಸಿಕೊಂಡು ನಿಂದಿಸಲಾಗಿದೆ ಎಂಬ ದೂರು ಕೇಳಿ ಬಂದಿತು. ಭದ್ರತಾ ಸಿಬ್ಬಂದಿಗಳು ಆ ಕೃತ್ಯವನ್ನು ಮಾಡಿದವರನ್ನು ಪತತೆ ಹಚ್ಚುವಲ್ಲಿ ಸಫಲರಾದರು. ಅವರನ್ನು ಮೈದಾನದಿಂದ ಹೊರಗಡೆ ಕಳುಹಿಸಲಾಗಿದೆ" ಎಂದು ಐಸಿಸಿ ಮಾಹಿತಿ ನೀಡಿದೆ. ಇನ್ನು ಇದೇ ಸಂದರ್ಭದಲ್ಲಿ ಯಾವುದೇ ರೀತಿಯ ನಿಂದನೆಗಳನ್ನು ಕೂಡ ಕ್ರಿಕೆಟ್ನಲ್ಲಿ ನಾವು ಸಹಿಸುವುದಿಲ್ಲ ಎಂದು ಐಸಿಸಿ ಹೇಳಿದೆ.
ಇಎಸ್ಪಿಎನ್ ವರದಿಯ ಪ್ರಕಾರ ಏಜಸ್ಬೌಲ್ ಕ್ರೀಡಾಂಗಣದ 'M ಬ್ಲಾಕ್'ನಲ್ಲಿ ಇಬ್ಬರು ಅಭಿಮಾನಿಗಳು ನ್ಯೂಜಿಲೆಂಡ್ ಕ್ರಿಕೆಟಿಗರನ್ನು ನಿಂದಿಸಿದ್ದಾರೆ ಎಂದಿದೆ. "ಸಾಮಾನ್ಯ ಹಾಗೂ ಜನಾಂಗೀಯ ನಿಂದನೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಐಸಿಸಿಗೆ ಈ ನಿಂದನೆಯ ಬಗ್ಗೆ ಮಾಹಿತಿ ನೀಡಿದ ನಂತರ ಐಸಿಸಿ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ನಂತರ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಇಎಸ್ಪಿಎನ್ ತಿಳಿಸಿದೆ.
ನ್ಯೂಜಿಲೆಂಡ್ನ ಅನುಭವಿ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರನ್ನು ಗುರಿಯಾಗಿಸಿ ಪ್ರಮುಖವಾಗಿ ನಿಂದಿಸಲಾಗಿದೆ. ಆದರೆ ಈ ವಿಚಾರವಾಗಿ ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥೀ ಪ್ರತಿಕ್ರಿಯಿಸಿದ್ದು ಈ ಘಟನೆಯ ಬಗ್ಗೆ ನಮ್ಮ ತಂಡದ ಯಾವುದೇ ಆಟಗಾರನಿಗೂ ಮಾಹಿತಿಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
"ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಥೀ "ನಾನು ಈಗಲೇ ಈ ವಿಚಾರವಾಗಿ ಕೇಳುತ್ತಿದ್ದೇನೆ. ಆಟ ಎಂದಿನಂತೆಯೇ ಅಂಗಳದಲ್ಲಿ ಕ್ರೀಡಾ ಸ್ಪೂರ್ತಿಯಿಂದ ನಡೆಯುತ್ತಿದೆ. ಮೈದಾನದಾಚೆ ಏನಾಗುತ್ತಿದೆ ಎಂದು ಸಹಜವಾಗಿಯೇ ನಮಗೆ ಅರಿವಾಗಿಲ್ಲ" ಎಂದಿದ್ದಾರೆ.