ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟರ್ಗಳು ಇತ್ತೀಚಿನ ವರ್ಷಗಳಲ್ಲಿ ನೀಡಿರುವ ಪ್ರದರ್ಶನ ಕಳವಳಕಾರಿಯಾಗಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು ಈ ಪಂದ್ಯ ಲಂಡನ್ನ ಓವಲ್ ಮೈದಾನದಲ್ಲಿ ಆಯೋಜನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಮಡಿಯಾ ಹಾಗೂ ಆಸ್ಟ್ರೇಲಿಯಾ ಆಟಗಾರರು ಅಂತಿಮ ಹಂತದ ತಾಲೀಮು ನಡೆಸುತ್ತಿದ್ದಾರೆ.
ಐಸಿಸಿ ಜೊತೆಗೆ ಮಾತನಾಡಿದ ಆಕಾಶ್ ಚೋಪ್ರ ಕಳೆದ ಎರಡು ತಿಂಗಳಿನಿಮದ ಭಾರತ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ ಎಂದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಈ ಆವೃತ್ತಿಯಲ್ಲಿ ಭಾರತ 18 ಪಂದ್ಯಗಳನ್ನು ಆಡಿದ್ದು ಅದರಲ್ಲಿ 127 ಅಂಕಗಳನ್ನು ಪಡೆದು 2ನೇ ಸ್ಥಾನಿಯಾಗಿ ಫೈನಲ್ಗೆ ಪ್ರವೇಶಿಸಿದೆ. 19 ಪಂದ್ಯಗಳಲ್ಲಿ 152 ಅಂಕಗಳನ್ನು ಗಳಿಸಿದ ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ಪಡೆದು ಫೈನಲ್ಗೆ ಪ್ರವೇಶಿಸಿದೆ.

"ಇಂಗ್ಲೆಂಡ್ನಂಥಾ ವಾತಾವಣದಲ್ಲಿ ಭಾರತ ಸುದೀರ್ಘ ಕಾಲದಿಂದ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಭಾರತ ಟೆಸ್ಟ್ ಪಂದ್ಯಳನ್ನು ಆಡದೆಯೇ ಬಹಳ ಸಮಯವಾಗಿದೆ. ಕಳೆದ ಎರಡು ತಿಂಗಳಿನಲ್ಲಿ ನೀವು ಸತತವಾಗಿ ಟಿ20 ಕ್ರಿಕೆಟ್ಗಳನ್ನು ಮಾತ್ರವೇ ಆಡಿದ್ದೀರಿ. ಟಿ20 ಮಾದರಿಯಲ್ಲಿ ಆಡುವಾಗ ಭಿನ್ನವಾದ ಶೈಲಿಯಲ್ಲಿ ಆಡಬೇಕಾಗುತ್ತದೆ. ಆಸ್ಟ್ರೇಲಿಯಾದ್ದು ಕೂಡ ಇದೇ ಕಥೆ" ಎಂದಿದ್ದಾರೆ ಆಕಾಶ್ ಚೋಪ್ರ.
ಇಂಗ್ಲೆಂಡ್ನ ವಾತಾವರಣದಲ್ಲಿ ಆಸ್ಟ್ರೇಲಿಯಾದ ಗುಣಮಟ್ಟದ ಬೌಲಿಂಗ್ ವಿರುದ್ಧ ಭಾರತದ ಆಟಗಾರರು ಲಯವನ್ನು ಕಂಡುಕೊಳ್ಳುವುದು ಸುಲಭವಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. "ವಿದೇಶೀ ವಾತಾವರಣಕ್ಕೆ ಹೋಗುವಾಗ ಮೊದಲ ಪಂದ್ಯವನ್ನು ಆಡುವಾಗ ಈ ರೀತಿಯ ಸಂದರ್ಭವನ್ನು ಭಾರತ ತಂಡ ಸಾಮಾನ್ಯವಾಗಿ ಎದುರಿಸುತ್ತದೆ. ಆಟಗಾರರು ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲು ಕೆಲ ಸಮಯವನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಾತಾವರಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಬೇಕಿದ್ದು ಮಳೆಯ ವಾತಾವರಣವಿದ್ದು ಹುಲ್ಲಿನಿಂದ ಕೂಡಿದ್ದರೆ ಭಾರತಕ್ಕೆ ಬಹಳ ಕಠಿಣವಾಗಿರಲಿದೆ. ಅಂಥಾ ಸಂದರ್ಭದಲ್ಲಿ ಪಂದ್ಯ ಕೈಚೆಲ್ಲಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.
ಇನ್ನು ಇದೇ ಸಂದರ್ಭದಲ್ಲಿ ಚೋಪ್ರ, ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರಮುಖ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಅವರಂಥಾ ಆಟಗಾರರು ಕೂಡ ಇಂಗ್ಲೆಂಡ್ ನೆಲದಲ್ಲಿ ಪ್ರಾಬಲ್ಯ ಸಾಧಿಸಲು ವಿಫಲವಾಗಿದ್ದಾರೆ ಎಂದಿದ್ದಾರೆ. ವಿರಾಟ್ ಕೊಹ್ಲಿ 108 ಪಂದ್ಯಗಳ ಸುದೀರ್ಘ ವೃತ್ತಿ ಜೀವನದಲ್ಲಿ ಒಟ್ಟಾರೆಯಾಗಿ 55.32ರ ಸರಾಸರಿಯನ್ನು ಹೊಂದಿದ್ದರೆ ಇಂಗ್ಲೆಂಡ್ನಲ್ಲಿ ಕೊಹ್ಲಿಯ ಸರಾಸರಿ 27.66 ಆಗಿದೆ.
"ಇಲ್ಲಿ ಒಂದು ಅಂಶ ಅಪಾಯಕಾರಿಯಾಗಿ ಗೋಚರಿಸುತ್ತದೆ ಅದೇನೆಂದರೆ ಕಳೆದ ಎರಡೂವರೆ ತಿಂಗಳ ಕಾಲ ಟಿ20 ಆಡಿದ್ದೀರಿ ಅದು ಕೂಡ ಭಿನ್ನ ತಂಡಗಳಿಗಾಗಿ. ಇನ್ನು ಎರಡನೆಯದಾಗಿ ನಮ್ಮ ಮುಖ್ಯ ಆಟಗಾರರಾದ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಚೇತೇಶ್ವರ್ ಪೂಜಾರ ಅವರಂಥಾ ಆಟಗಾರರು ಇಂಗ್ಲೆಂಡ್ ವಾತಾವರಣದಲ್ಲಿ ಇತ್ತೀಚೆಗೆ ಪ್ರಾಬಲ್ಯ ಸಾಧಿಸಲು ವಿಫಲವಾಗಿದ್ದಾರೆ" ಎಂದಿದ್ದಾರೆ ಆಕಾಶ್ ಚೋಪ್ರ.