ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನದಾಟದಲ್ಲಿಯೂ ಹಿನ್ನಡೆ ಕಂಡಿದೆ. ಮೊದಲ ದಿನ ಬೌಲಿಂಗ್ನಲ್ಲಿ ಹಿನ್ನಡೆ ಕಂಡಿದ್ದ ಭಾರತ ಎರಡನೇ ದಿನದಾಟದಲ್ಲಿ ಬೌಲಿಂಗ್ನಲ್ಲಿ ಒಂದು ಹಂತಕ್ಕೆ ಯಶಸ್ಸು ಸಾಧಿಸಿದರೂ ಬ್ಯಾಟಿಂಗ್ ವಿಭಾಗ ನೀಡಿದ ಆಘಾತಕಾರಿ ಪ್ರದರ್ಶನ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸಂಪೂರ್ಣ ಹಿಡಿತ ಸಾಧಿಸುವಂತೆ ಮಾಡಿದೆ.
ಇನ್ನು ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಪರವಾಗಿ ಬೌಲಿಂಗ್ ದಾಳಿಗಿಳಿದ ಎಲ್ಲಾ ಐವರು ಬೌಲರ್ಗಳು ಕೂಡ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ಸಂಘಟಿತ ಪ್ರದರ್ಶನ ನೀಡಿದ್ದಾರೆ. ಆದರೆ ಭಾರತದ ಯುವ ಆಟಗಾರಂಬಿಕ ಆಟಗಾರ ಶುಬ್ಮನ್ ಗಿಲ್ ವಿಕೆಟ್ ಪಡೆದ ವೇಗಿ ಸ್ಕಾವಡ್ ಬೋಲಂಡ್ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಫೈನಲ್ ಪಂದ್ಯದುದ್ದಕ್ಕೂ ಬೋಲಂಡ್ ಭಾರತವನ್ನು ಕಾಡಲಿದ್ದಾರೆ ಎಂದಿದ್ದಾರೆ ಸೌರವ್ ಗಂಗೂಲಿ.

"ಸ್ಕಾಟ್ ಬೋಲ್ಯಾಂಡ್ ಈ ಪಿಚ್ನಲ್ಲಿ ಅತ್ಯಂತ ಸೂಕ್ತ ಬೌಲರ್ ಎನಿಸುತ್ತಾರೆ. ಹಾಗಾಗಿ ಅವರು ಈ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಕಾಡಲಿದ್ದಾರೆ. ಇಂಥಾ ವಾತಾವರಣದಲ್ಲಿ ಅದನ್ನು ನಾವು ನಿರೀಕ್ಷಿಸಬಹುದು. ಭಾರತ ಆರಂಭದಲ್ಲಿ ಒಂದೆರಡು ವಿಕೆಟ್ ಕಳೆದುಕೊಂಡಿರಬಹುದು ಆದರೆ ತಂಡದಲ್ಲಿ ಉತ್ತಮ ಬ್ಯಾಟಿಂಗ್ ಬಲವಿದೆ. ಪೂಜಾರ ಮತ್ತು ಕೊಹ್ಲಿಯ ಜೊತೆಯಾಟದ ಅಗತ್ಯ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಆದರೆ ಸೌರವ್ ಗಂಗೂಲಿ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದಂತೆ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಜೋಡಿ ಕೂಡ ಭಾರತದ ಕೈ ಹಿಡಿಯಲು ಸಾಧ್ಯವಾಗಲಿಲ್ಲ. ಈ ಇಬ್ಬರು ಆಟಗಾರರು ಕೂಡ ಆರಂಭಿಕ ಆಟಗಾರರಂತೆಯೇ ಅಗ್ಗಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ಅಲ್ಲದೆ ನಂತರ ರವೀಂದ್ರ ಜಡೇಜಾ ಕೂಡ 48 ರನ್ಗಳ ಕೊಡುಗೆ ನೀಡಿ ಔಟಾಗಿದ್ದಾರೆ. ಈ ಮೂಲಕ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 151 ರನ್ಗಳನ್ನು ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.
ಎರಡನೇ ದಿನದಾಟ ಮು್ಕತಾಯದ ವೇಳೆಗೆ ಅಜಿಂಕ್ಯಾ ರಹಾನೆ 29 ರನ್ಗಳಿಸಿ ಅಜೇಯವಾಗುಳಿದಿದ್ದು ಶ್ರೀಕರ್ ಭರತ್ 5 ರನ್ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ. ಈ ಜೋಡಿ ಟೀಮ್ ಇಂಡಿಯಾದ ಕೊನೆಯ ಆಸರೆಯಾಗಿದ್ದು ಎಷ್ಟರ ಮಟ್ಟಿಗೆ ಹೋರಾಟ ನೀಡಲಿದೆ ಎಂಬುದು ಕಾದು ನೋಡಬೇಕಿದೆ. ಹೀಗಾಗಿ ಮೂರನೇ ದಿನದಾಟ ಭಾರತದ ಪಾಲಿಗೆ ಅತ್ಯಂತ ಕಠಿಣವಾಗಿರಲಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್