ಬುಧವಾರ, ಜೂನ್ 7ರಂದು ಲಂಡನ್ನ ಓವಲ್ನಲ್ಲಿ ಆರಂಭವಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 3 ವಿಕೆಟ್ಗೆ 327 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.
ಇದೇ ವೇಳೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟ ಭಾರತ ತಂಡದ ನಿರ್ಧಾರದಿಂದ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 1ನೇ ದಿನದಂದು ಟಾಸ್ ಗೆದ್ದ ನಂತರ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು 3 ವಿಕೆಟ್ಗೆ 327 ರನ್ ಗಳಿಸಿದ್ದರಿಂದ ಭಾರತದ ಲೆಕ್ಕಾಚಾರ ತಲೆಕೆಳಗಾಯಿತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021-23 ಚಕ್ರದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 61 ವಿಕೆಟ್ಗಳೊಂದಿಗೆ ರವಿಚಂದ್ರನ್ ಅಶ್ವಿನ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಬೌಲರ್ ಕೂಡ ಆಗಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸಂದರ್ಭದಲ್ಲಿ ರವಿಚಂದ್ರನ್ ಅಶ್ವಿನ್ ಅವರು 25 ವಿಕೆಟ್ಗಳನ್ನು ಪಡೆದು ರವೀಂದ್ರ ಜಡೇಜಾ ಅವರೊಂದಿಗೆ ಜಂಟಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಹಂಚಿಕೊಂಡಿದ್ದರಿಂದ ಆಸ್ಟ್ರೇಲಿಯಾ ತಂಡಕ್ಕೆ ಕಂಟಕವಾಗಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಮೊದಲ ದಿನದಂದು ಭಾರತಕ್ಕೆ ಕಠಿಣ ದಿನವಾಗಿತ್ತು. ಫೈನಲ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟ ಭಾರತ ತಂಡದ ನಿರ್ಧಾರ ಕುರಿತು ಮಾಜಿ ಆಟಗಾರರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಈಗ ಇದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತವು ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಬೇಕಿತ್ತು. ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ನಿರ್ಧಾರದಿಂದ ಆಘಾತಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ.
"ತಂಡದಲ್ಲಿ ಆರ್ ಅಶ್ವಿನ್ ಇದ್ದಿದ್ದರೆ, ಫೈನಲ್ ಪಂದ್ಯದ ಮೊದಲ ದಿನ ಭಾರತ ಅಗ್ರಗಣ್ಯವಾಗಿ ಹೊರಹೊಮ್ಮಬಹುದಿತ್ತು. ಐಸಿಸಿ ಟೆಸ್ಟ್ ಕ್ರಿಕೆಟ್ನ ನಂ.1 ಬೌಲರ್ ಆಗಿದ್ದರೂ, ಭಾರತದ ಆಡುವ ಬಳಗದಲ್ಲಿ ಪಡೆಯಲು ಸಾಧ್ಯವಾಗಲಿಲ್ಲ. ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡದಿರುವುದರಿಂದ ನನಗೆ ಸಾರ್ವಕಾಲಿಕವಾಗಿ ಗೊಂದಲಕ್ಕೊಳಗಾದ ಸಂಗತಿಯಾಗಿದೆ. ಇಂಗ್ಲೆಂಡ್ನಲ್ಲಿ ಕೊನೆಯ ಬಾರಿಗೆ ಭಾರತ ಆಡಿದ್ದಾಗಲೂ ಆಯ್ಕೆಯಾಗಿರಲಿಲ್ಲ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ನಲ್ಲಿ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರ ಸೀಮಿತ ಓವರ್ಗಳ ಬೌಲಿಂಗ್ ಸಮಯದ ಕಾರಣದಿಂದ ಟೆಸ್ಟ್ನಲ್ಲಿ ಆಡುವುದು ಕಡಿಮೆಯಾಗಿದೆ ಎಂದು ಸುನಿಲ್ ಗವಾಸ್ಕರ್ ಗಮನಸೆಳೆದರು.
ಮೊದಲ ದಿನದಂದು ಉಮೇಶ್ ಯಾದವ್ 14 ಓವರ್ ಬೌಲ್ ಮಾಡಿ 54 ರನ್ ಬಿಟ್ಟುಕೊಟ್ಟು ವಿಕೆಟ್ ರಹಿತರಾದರು. ಇನ್ನು ಶಾರ್ದೂಲ್ ಠಾಕೂರ್ ತಮ್ಮ 18 ಓವರ್ಗಳಲ್ಲಿ 75 ರನ್ ನೀಡಿ ಒಂದು ವಿಕೆಟ್ ಪಡೆದರು.
"ಕೆಲವೊಮ್ಮೆ ಆಯ್ಕೆಯ ವಿಷಯದಲ್ಲಿ ಸ್ವಲ್ಪ ವಿಫಲರಾಗುತ್ತೀರಿ. ನೀವು 4 ಗುಣಮಟ್ಟದ ಸೀಮ್ ಬೌಲರ್ಗಳನ್ನು ಹೊಂದಿದ್ದರೆ, ಅದು ಬೇರೆ ವಿಷಯ ಅಗಿರುತ್ತಿತ್ತು," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
"ನಮ್ಮ ಇಬ್ಬರು ವೇಗಿಗಳು ಇತ್ತೀಚಿಗೆ ಕಡಿಮೆ ಟೆಸ್ಟ್ ಪಂದ್ಯ ಆಡಿದ್ದಾರೆ. ಒಬ್ಬರು ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಕಳೆದ ಕೆಲವು ಪಂದ್ಯಗಳಲ್ಲಿ ಕೆಕೆಆರ್ ಪರ ಆಡಿಲ್ಲ ಮತ್ತು ಇಬ್ಬರೂ ಹೆಚ್ಚು ಬೌಲಿಂಗ್ ಮಾಡಿರಲಿಲ್ಲ. ಮತ್ತೊಂದೆಡೆ, ನಿಮ್ಮ ಬಳಿ ಇಬ್ಬರು ಬೌಲರ್ಗಳಿದ್ದರು. ತಮ್ಮ ಫ್ರಾಂಚೈಸಿಗಳಿಗಾಗಿ ಪ್ರತಿಯೊಂದು ಪಂದ್ಯವನ್ನು ಆಡಿದ್ದರು," ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯ ಹೊರಹಾಕಿದ್ದಾರೆ.
"ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್ಅಪ್ನಲ್ಲಿ ಹಲವು ಎಡಗೈ ಆಟಗಾರರಿದ್ದು, ಭಾರತದ ಆಡುವ ಹನ್ನೊಂದರ ಬಳಗದಲ್ಲಿ ರವಿಚಂದ್ರನ್ ಅಶ್ವಿನ್ ಇಲ್ಲದಿರುವುದು ಭಾರತ ತಂಡವು ಒಂದು ಅವಕಾಶವನ್ನು ಕಳೆದುಕೊಂಡಿದೆ," ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.