ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಭಾರತದ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ ತಂಡದಲ್ಲಿ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಸ್ಥಾನ ಪಡೆದುಕೊಂಡಿದ್ದು ಸುದೀರ್ಘ ಕಾಲದ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಅನುಭವಿ ಆಟಗಾರನ ಈ ಆಯ್ಕೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದು ಈ ಆಯ್ಕೆಯನ್ನು ರಹಾನೆ ಸಮರ್ಥಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಟೆಸ್ಟ್ ತಂಡದ ಉಪನಾಯಕನಾಗಿದ್ದ ಅಜಿಂಕ್ಯಾ ರಹಾನೆ ಫಾರ್ಮ್ ಕಳೆದುಕೊಂಡ ಕಾರಣ 2022ರ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ತಂಡದಿಂದ ಕೈಬಿಡಲಾಗಿತ್ತು. ದೇಶೀಯ ಕ್ರಿಕೆಟ್ನಲ್ಲಿ ಫಾರ್ಮ್ ಸಾಬೀತುಪಡಿಸಿಕೊಂಡು ಕಮ್ಬ್ಯಾಕ್ ಮಾಡಲು ಸಲಹೆ ನೀಡಲಾಗಿತ್ತು. ರಣಜಿ ಟೂರ್ನಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದ ರಹಾನೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಅಚ್ಚರಿಯ ರೀತಿಯ ಪ್ರದರ್ಶನ ನೀಡುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಕಣಕ್ಕಿಳಿಯುತ್ತಿರುವ ಅಜಿಂಕ್ಯಾ ರಹಾನೆ ಈ ಬಾರಿಯ ಟೂರ್ನಿಯಲ್ಲಿ ಬರೊಬ್ಬರಿ 199ರ ಸ್ಟ್ರೈಕ್ರೆಟ್ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ರಹಾನೆ ಬ್ಯಾಟಿಂಗ್ನಲ್ಲಿನ ಹೊಸತನ ಹಾಗೂ ಭಿನ್ನ ಹೊಡೆತಗಳು ಸುದೀರ್ಘ ಕಾಲದಿಂದ ಭಾರತೀಯ ಕ್ರಿಕೆಟ್ ವಿಕ್ಷಿಸಿಕೊಂಡಡು ಬರುತ್ತಿರುವ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಪ್ರದರ್ಶನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಆಯ್ಕೆಗೂ ಪ್ರೇರಣೆಯಾಗಿರುವುದರಲ್ಲಿಅನುಮಾನವಿಲ್ಲ.
"ಅವರು ಭಾರತ ತಂಡವನ್ನು ಹಲವು ಪಂದ್ಯಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆಲ್ಲದೆ ಆತನೋರ್ವ ಅದ್ಭುತವಾದ ಆಟಗಾರನಾಗಿದ್ದು ತಾಂತ್ರಿಕವಾಗಿ ಬಲಿಷ್ಠವಾಗಿದ್ದಾರೆ. ಅವರು ಈಗಿನ ಫಾರ್ಮ್ ನೋಡಿಕೊಂಡು ಅವರನ್ನು ಆಯ್ಕೆ ಮಾಡಲಾಗಿದೆ ಎನಿಸುತ್ತದೆ. ಅಲ್ಲದೆ ಶ್ರೇಯಸ್ ಐಯ್ಯರ್ ಅಲಭ್ಯವಾಗಿರುವುದು ಕೂಡ ಈ ಕಮ್ಬ್ಯಾಕ್ಗೆ ಕಾರಣ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್.
"ಶ್ರೇಯಸ್ ಐಯ್ಯರ್ ಅಲಭ್ಯವಾಗಿರುವ ಕಾರಣ ಇದು ಅಜಿಂಕ್ಯಾ ರಹಾನೆಗೆ ದೊರೆತ ಮತ್ತೊಂದು ಅವಕಾಶವಾಗಿದೆ. ಆತನೋರ್ವ ಬಲಿಷ್ಠ ಆಟಗಾರನಾಗಿದ್ದು ಈ ಮಹತ್ವದ ಪಂದ್ಯದಲ್ಲಿ ದೊಡ್ಡ ಆಟ ಆವರ ಬ್ಯಾಟ್ನಿಂದ ಬರುವ ನಿರೀಕ್ಷೆಯಿದೆ. ಈ ಆಯ್ಕೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದು ಇದೊಂದು ಶ್ರೇಷ್ಠ ನಿರ್ಧಾರ ಎನಿಸುತ್ತಿದೆ. ಇದನ್ನು ಹೊರತುಪಡಿಸಿ ಬೇರೆ ಪರಿಹಾರ ಇರಲಿಲ್ಲ" ಎಂದಿದ್ದಾರೆ ಹರ್ಭಜನ್ ಸಿಂಗ್.
WTC ಫೈನಲ್ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್