ಕ್ರಿಕೆಟ್ ಜಗತ್ತು ಭಾರೀ ಕುತೂಹಲದಿಂದ ಕಾಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) 2021-23ರ ಫೈನಲ್ ಪಂದ್ಯ ಇಂಗ್ಲೆಂಡ್ನ ಓವಲ್ನಲ್ಲಿ ಜೂನ್ 7ರಿಂದ 11ರ ವರೆಗೆ ನಡೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ರಿಷಭ್ ಪಂತ್ ಅನುಪಸ್ಥಿತಿಯು ಭಾರತಕ್ಕೆ ದೊಡ್ಡ ಲಾಸ್ ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಗುರುವಾರ ಹೇಳಿದ್ದಾರೆ.

ಫೈನಲ್ ಪಂದ್ಯದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಕೆಎಸ್ ಭರತ್ ಬದಲಾಗಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡುವುದಾಗಿ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ತಿಳಿಸಿದರು.
ಜೂನ್ 7ರಿಂದ 11 ರವರೆಗೆ ಲಂಡನ್ನ ಓವಲ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021-23ರ ಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಿದ್ಧವಾಗಿದ್ದು, ಈಗಾಗಲೇ ಇಂಗ್ಲೆಂಡ್ ತಲುಪಿ ಅಭ್ಯಾಸ ನಡೆಸುತ್ತಿದೆ.
ಭಾರತ ತಂಡಕ್ಕೆ ಗಾಯದ ಚಿಂತೆಗಳನ್ನು ಕಾಡುತ್ತಿದೆ ಮತ್ತು ಅವರು ತಮ್ಮ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಬ್ ಪಂತ್ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಡಿಸೆಂಬರ್ 2022ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ.

ವಿಶೇಷವಾಗಿ ಕಳೆದ ಕೆಲವು ವರ್ಷಗಳಿಂದ ವಿದೇಶಿ ಟೆಸ್ಟ್ಗಳಲ್ಲಿ ರಿಷಭ್ ಪಂತ್ ಭಾರತದ ಪ್ರಮುಖ ಬ್ಯಾಟರ್ ಕೂಡ ಆಗಿದ್ದಾರೆ. 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತದ 2-1 ಅಂತರದ ಗೆಲುವಿನಲ್ಲಿ ರಿಷಭ್ ಪಂತ್ ಕೊಡುಗೆ ಪ್ರಮುಖವಾಗಿತ್ತು.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ರ ಫೈನಲ್ ಪಂದ್ಯದಲ್ಲಿ ಭಾರತದ 15 ಜನರ ತಂಡದಲ್ಲಿ ಕೆಎಸ್ ಭರತ್ ಜೊತೆಗೆ ಕೆಎಲ್ ರಾಹುಲ್ ಅವರನ್ನು ಬ್ಯಾಕ್-ಅಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು.
ಆದರೆ, ಕೆಎಲ್ ರಾಹುಲ್ ಅವರು ಐಪಿಎಲ್ 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವಾಗ ತೊಡೆಯ ಗಾಯದಿಂದಾಗಿ ಇಂಗ್ಲೆಂಡ್ನಲ್ಲಿ ನಡೆಯುವ ಫೈನಲ್ ಪಂದ್ಯದಿಂದ ಹೊರಗುಳಿಯಬೇಕಾಯಿತು. ಇದು ಇಶಾನ್ ಕಿಶನ್ ಅವರು ತಂಡಕ್ಕೆ ಆಯ್ಕೆಯಾಗಲು ಕಾರಣವಾಯಿತು.

"ಭಾರತೀಯ ಕ್ರಿಕೆಟ್ಗೆ ದೊಡ್ಡ ನಷ್ಟವೆಂದರೆ ರಿಷಭ್ ಪಂತ್. ನಾನು ಭಾರತೀಯ ಆಯ್ಕೆಗಾರನಾಗಿದ್ದರೆ, ನಾನು ಖಂಡಿತವಾಗಿಯೂ ಹೆಚ್ಚು ಕ್ರಿಯಾತ್ಮಕ ವಿಕೆಟ್ಕೀಪರ್ ಮತ್ತು ಬ್ಯಾಟರ್ ಆಗಿರುವ ಇಶಾನ್ ಕಿಶನ್ ಆಯ್ಕೆ ಮಾಡುತ್ತೇನೆ. ಅವರು ಬ್ಯಾಟಿಂಗ್ ಲೈನ್ಅಪ್ ಮತ್ತು ಫೀಲ್ಡಿಂಗ್ನಲ್ಲಿ ಆ ತುಡಿತವನ್ನು ಹೊಂದಿದ್ದಾರೆ," ಎಂದು ಮ್ಯಾಥ್ಯೂ ಹೇಡನ್ ಪಿಟಿಐಗೆ ತಿಳಿಸಿದರು.
ಇಶಾನ್ ಕಿಶನ್ ಭಾರತಕ್ಕಾಗಿ ಇನ್ನೂ ಟೆಸ್ಟ್ ಕ್ರಿಕೆಟ್ ಪಂದ್ಯ ಆಡಿಲ್ಲ. ಆದರೆ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್-ಬ್ಯಾಟರ್ ಡಬ್ಲ್ಯುಟಿಸಿ ಫೈನಲ್ಗೆ ಮುನ್ನ ಉತ್ತಮ ಫಾರ್ಮ್ನಲ್ಲಿದ್ದಾರೆ. ವೈಟ್-ಬಾಲ್ ಕ್ರಿಕೆಟ್ನಲ್ಲಿ ಅತ್ಯುತ್ತಮವಾಗಿ ಆಡಿ ಆಕ್ರಮಣಕಾರಿ ವಿಧಾನಕ್ಕೆ ಹೆಸರುವಾಸಿಯಾದ ಇಶಾನ್ ಕಿಶನ್, ಕೆಂಪು-ಬಾಲ್ ಕ್ರಿಕೆಟ್ನಲ್ಲಿ ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಸ್ಥಾನವನ್ನು ತುಂಬಬಹುದು.
ಇಶಾನ್ ಕಿಶನ್ 2023 ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ 16 ಪಂದ್ಯಗಳಲ್ಲಿ 140ಕ್ಕಿಂತ ಹೆಚ್ಚು ಸ್ಟ್ರೈಕ್ರೇಟ್ನಲ್ಲಿ 454 ರನ್ಗಳನ್ನು ಬಾರಿಸಿದ್ದಾರೆ.
ಡಬ್ಲ್ಯುಟಿಸಿ ಫೈನಲ್ನಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಬ್ಬರನ್ನೂ ಭಾರತ ತಂಡ ಆಡಿಸಬೇಕೆಂದು ಮ್ಯಾಥ್ಯೂ ಹೇಡನ್ ಹೇಳಿದರು.
ಕ್ಯಾಮೆರಾನ್ ಗ್ರೀನ್ ಆಸ್ಟ್ರೇಲಿಯಾದ 5ನೇ ಬೌಲಿಂಗ್ ಆಯ್ಕೆಯನ್ನು ನಿರೀಕ್ಷಿಸಲಾಗಿದೆ. ಈ ಆಲ್ರೌಂಡರ್ ಐಪಿಎಲ್ 2023ರಲ್ಲಿ ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾ ತಂಡಕ್ಕೆ ಸೂಕ್ತವಾದ ಬ್ಯಾಟಿಂಗ್ ಆಯ್ಕೆಯನ್ನು ಒದಗಿಸುತ್ತದೆ.
ರವಿಚಂದ್ರನ್ ಅಶ್ವಿನ್ ಇತ್ತೀಚಿನ ದಿನಗಳಲ್ಲಿ ಭಾರತದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. 2021-22ರಲ್ಲಿ ಕೊನೆಯ ಬಾರಿಗೆ ಭಾರತವು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಆಫ್-ಸ್ಪಿನ್ನರ್ ಒಂದೇ ಒಂದು ಟೆಸ್ಟ್ ಆಡಲಿಲ್ಲ.
"ಆದರೆ, ಭಾರತಕ್ಕೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಉತ್ತಮ ಕೆಲಸ ಮಾಡುತ್ತಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ನಾವು ಭಾರತದಲ್ಲಿ ನೋಡಿದ ಹಾಗೆ ಅತಿರೇಕದ ಟರ್ನರ್ಗಳನ್ನು ಹೊರತುಪಡಿಸಿ, ಇಲ್ಲಿನ ಪಿಚ್ ಆಸ್ಟ್ರೇಲಿಯಾ ಪರ ಕೆಲಸ ಮಾಡುವುದಿಲ್ಲ," ಎಂದು ಮ್ಯಾಥ್ಯೂ ಹೇಡನ್ ಹೇಳಿದರು.