ಲಂಡನ್ನ ದಿ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 3ನೇ ದಿನದಾಟದ ವೇಳೆಗೆ ಭಾರತ ವಿರುದ್ಧ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 469 ರನ್ಗಳಿಗೆ ಆಲೌಟ್ ಆಗಿದ್ದರೆ, ಪ್ರತ್ಯುತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 196 ರನ್ಗಳಿಗೆ ಸರ್ವಪತನ ಕಂಡಿತು. 173 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 4 ವಿಕೆಟ್ಗೆ 123 ರನ್ ಗಳಿಸಿ ಒಟ್ಟು 296 ರನ್ಗಳ ಮುನ್ನಡೆ ಸಾಧಿಸಿದೆ.

ಉಳಿದ ಎರಡು ದಿನಗಳಲ್ಲಿ ಆಸ್ಟ್ರೇಲಿಯಾ ತಂಡ ನೀಡುವ ಗುರಿಯನ್ನು ಭಾರತ ತಂಡ ಯಶಸ್ವಿಯಾಗಿ ಚೇಸ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು 3ನೇ ದಿನದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾರ್ದೂಲ್ ಠಾಕೂರ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಒಂದು ಉತ್ತಮ ಜೊತೆಯಾಟ ಬಂದರೆ, 450 ರನ್ಗಳ ಟಾರ್ಗೆಟ್ನ್ನು ಕೂಡ ಭಾರತ ತಂಡ ಬೆನ್ನಟ್ಟಬಹುದು ಎಂದು ಭಾರತದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಕ್ರಿಕೆಟ್ ಒಂದು ತಮಾಷೆಯ ಆಟ. ಈ ಏಕೈಕ ಟೆಸ್ಟ್ ಪಂದ್ಯದಲ್ಲಿ ಸರಿಯಾದ ಮೊತ್ತ ಯಾವುದು ಎಂದು ನೀವು ಎಂದಿಗೂ ಅಂದಾಜಿಸಲು ಸಾಧ್ಯವಿಲ್ಲ. ವಿಶೇಷವಾಗಿ ಐಸಿಸಿ ಫೈನಲ್ಗಳು ನಿಮಗೆ ತಿಳಿದಿರುವುದಿಲ್ಲ. ಒತ್ತಡವನ್ನು ಯಾರು ಉತ್ತಮವಾಗಿ ನಿಭಾಯಿಸುತ್ತಾರೋ ಅವರು ಗೆಲ್ಲುತ್ತಾರೆ. 450 ಅಥವಾ ಅದಕ್ಕಿಂತ ಹೆಚ್ಚಿನದನ್ನು ಬೆನ್ನಟ್ಟುವಾಗ ಒಂದು ಉತ್ತಮ ಜೊತೆಯಾಟ ಅವಶ್ಯ," ಎಂದು ಶಾರ್ದೂಲ್ ಠಾಕೂರ್ ಹೇಳಿದರು.
ಕಳೆದ ವರ್ಷ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ 400 ರನ್ಗಳ ಗುರಿಯನ್ನು ಬೆನ್ನಟ್ಟಿದೆ ಎಂದು ಶಾರ್ದೂಲ್ ಠಾಕೂರ್ ಗಮನ ಸೆಳೆದರು. ಕಳೆದ ವರ್ಷ ಜೂನ್ನಲ್ಲಿ ಭಾರತ ವಿರುದ್ಧ 378 ರನ್ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತ್ತು.
"ಕಳೆದ ವರ್ಷ ಇಂಗ್ಲೆಂಡ್ ಇಲ್ಲಿ 400 ರನ್ ಬೆನ್ನಟ್ಟಿತು ಮತ್ತು ಅವರು ಹೆಚ್ಚು ವಿಕೆಟ್ಗಳನ್ನು ಕಳೆದುಕೊಳ್ಳಲಿಲ್ಲ. ಆದ್ದರಿಂದ ಇದು ನಮಗೆ ಸಕಾರಾತ್ಮಕ ಸಂಕೇತವಾಗಿದೆ. ಆಸ್ಟ್ರೇಲಿಯಾ ಸ್ಕೋರ್ ಬೋರ್ಡ್ನಲ್ಲಿ ಏಷ್ಟೇ ರನ್ ಹಾಕಿದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ಗಂಟೆಯೊಳಗೆ ಆಟವು ಬದಲಾಗುವುದನ್ನು ನಾವು ಬಹಳಷ್ಟು ಬಾರಿ ನೋಡಿದ್ದೇವೆ. ಆದ್ದರಿಂದ ನಾವು ಮೈದಾನದಲ್ಲಿ ಆಶಾವಾದಿಗಳಾಗಿರಲು ಬಯಸುತ್ತೇವೆ. ಗೆಲ್ಲಲು ಎದುರು ನೋಡುತ್ತೇವೆ," ಎಂದು ಶಾರ್ದೂಲ್ ಠಾಕೂರ್ ತಿಳಿಸಿದರು.
ಅಜಿಂಕ್ಯ ರಹಾನೆ ಜೊತೆಗಿನ ಜೊತೆಯಾಟದ ಬಗ್ಗೆ ಮಾತನಾಡಿದ ಶಾರ್ದೂಲ್ ಠಾಕೂರ್, ""ನಾವು ಯಾವುದನ್ನೂ ನಿರ್ಧರಿಸಿ ಆಡಲಿಲ್ಲ, ಏನನ್ನೂ ನಿರ್ಧರಿಸುವ ಪರಿಸ್ಥಿತಿ ಇರಲಿಲ್ಲ. ನಾವು ಒತ್ತಡವನ್ನು ಹಮ್ಮೆಟ್ಟಿಸಬೇಕಿತ್ತು, ನಾವು 3ನೇ ದಿನದಂದು 109 ರನ್ಗಳ ಜೊತೆಯಾಟದುದ್ದಕ್ಕೂ ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು,'' ಎಂದು ಹೇಳಿದರು.
ಇನ್ನು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮಾತನಾಡಿ, 4ನೇ ದಿನಪೂರ್ತಿ ಬ್ಯಾಟಿಂಗ್ ಮುಂದುವರಿಸುತ್ತೇವೆ. ಆಶಾದಾಯಕವಾಗಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ಈ ಪಿಚ್ನಲ್ಲಿ ಕೆಲವು ತಂತ್ರಗಳನ್ನು ಮಾಡಬಹುದು ಎಂದು ಹೇಳಿದರು.
"ನಾನು ಇನ್ನೂ ಪ್ಯಾಟ್ ಕಮ್ಮಿನ್ಸ್ ಜೊತೆ ಮಾತನಾಡಿಲ್ಲ, ಹಾಗಾಗಿ ನನಗೆ ಗೊತ್ತಿಲ್ಲ. ಇದು ನನ್ನ ನಿರ್ಧಾರವಲ್ಲ. ಸದ್ಯಕ್ಕೆ ನಾವು ಬ್ಯಾಟಿಂಗ್ ಮುಂದುವರಿಸುತ್ತೇನೆ. ನಮಗೆ ಆಡಲು ಇನ್ನೂ ಎರಡು ದಿನಗಳಿವೆ, ಹವಾಮಾನ ಚೆನ್ನಾಗಿದೆ. ನನಗೆ ತಿಳಿದಿರುವಂತೆ, ನಾವು ಇನ್ನೂ ಬ್ಯಾಟಿಂಗ್ ಮುಂದುವರೆಸುತ್ತೇವೆ," ಎಂದು ಮಿಚೆಲ್ ಸ್ಟಾರ್ಕ್ ಹೇಳಿದರು.
ಲಂಡನ್ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಸುಮಾರು ಒಂದು ದಶಕದ ನಂತರ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಭಾರತ ತಂಡ ಹೊಂದಿದೆ.